ರಾಮನಗರದ ಬಿಜೆಪಿಯಲ್ಲಿ ಒಂದೇ ಒಂದು ತಿಂಗಳಲ್ಲಿ ಏನೇನಾಯ್ತು ನೋಡಿ...
ರಾಮನಗರ, ನವೆಂಬರ್ 01: ಕೇಂದ್ರ ಚುನಾವಣಾ ಆಯೋಗ ಅಕ್ಟೋಬರ್ 6ರಂದು ರಾಜ್ಯದ ಎರಡು ವಿಧಾನಸಭೆ ಮತ್ತು ಮೂರು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ ಘೋಷಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಜಿಲ್ಲೆಯ ರಾಜಕೀಯ ಚಿತ್ರಣ ಭಾರಿ ಸ್ಥಿತ್ಯಂತರಗಳನ್ನು ಕಂಡಿದೆ.
ಉಪ ಚುನಾವಣೆಗೆ ಅಭ್ಯರ್ಥಿಗಳು ಯಾರಾಗಬಹುದು? ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧಿಸುತ್ತವೆಯೇ? ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ತನ್ನ ಸಾಮರ್ಥ್ಯ ಪ್ರದರ್ಶನ ನಡೆಸುವ ಪ್ರಯತ್ನ ಮಾಡಲಿದೆಯೇ ಎಂಬ ಪ್ರಶ್ನೆಗಳು, ಚರ್ಚೆಗಳು ತೀವ್ರವಾಗಿ ನಡೆದಿದ್ದವು.
ಬಿಜೆಪಿಗೆ 'ಕೈ'ಕೊಟ್ಟ ರಾಮನಗರ ಅಭ್ಯರ್ಥಿ: ಎರಡೇ ದಿನ ಇರುವಾಗ ಕಾಂಗ್ರೆಸ್ ಸೇರ್ಪಡೆ
ಈ ಮಧ್ಯೆ ಹಲವು ಅಚ್ಚರಿಯ ಬೆಳವಣಿಗೆಗಳು ನಡೆದಿದ್ದವು. ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದು ನಿರೀಕ್ಷಿತವಾಗಿತ್ತು. ಅವರಿಗೆ ಕಾಂಗ್ರೆಸ್ ಬೆಂಬಲ ನೀಡುವುದು ಕೂಡ ಅನಿವಾರ್ಯವಾಗಿತ್ತು.
ಆದರೆ, ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿತ್ತು. ಸಿಪಿ ಯೋಗೇಶ್ವರ್ ಸೇರಿದಂತೆ ವಿವಿಧ ನಾಯಕರ ಹೆಸರುಗಳು ಕೇಳಿಬಂದಿದ್ದವು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ರುದ್ರೇಶ್ ಅವರೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ನಿಂದ ವಲಸೆ ಬಂದ ಎಲ್. ಚಂದ್ರಶೇಖರ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿತು.
ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಲು ಚಂದ್ರಶೇಖರ್ ನೀಡಿದ 4 ಕಾರಣ
ಈಗ ಮತದಾನಕ್ಕೆ ಎರಡೇ ದಿನ ಬಾಕಿ ಇರುವಂತೆ ಚಂದ್ರಶೇಖರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಅವರು ಬಿಜೆಪಿಯಲ್ಲಿ ಇದ್ದಿದ್ದು 22 ದಿನಗಳು ಮಾತ್ರ.
ಕಳೆದ ಸುಮಾರು 26 ದಿನಗಳಲ್ಲಿ ರಾಮನಗರದ ಬಿಜೆಪಿಯಲ್ಲಿ ಏನೆಲ್ಲ ಬದಲಾವಣೆಗಳು ನಡೆದವು ಎಂಬ ಮಾಹಿತಿ ಇಲ್ಲಿದೆ...
ಕಾಂಗ್ರೆಸ್ನಲ್ಲಿ ಅಸಮಾಧಾನ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇಲ್ಲಿ ಜಿದ್ದಾಜಿದ್ದಿ ಇತ್ತು. ಆದರೆ, ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್ ಬೆಂಬಲ ಘೋಷಿಸಿತ್ತು. ಅದು ಅಲ್ಲಿನ ಅನೇಕ ಸ್ಥಳೀಯ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಅವರಲ್ಲಿ ವಿಧಾನಪರಿಷತ್ ಸದಸ್ಯರಾದ ಕಾಂಗ್ರೆಸ್ನ ಸಿಎಂ ಲಿಂಗಪ್ಪ ಅವರ ಮಗ ಎಲ್. ಚಂದ್ರಶೇಖರ್ ಕೂಡ ಒಬ್ಬರು.
ಬಿಜೆಪಿ ಸೇರ್ಪಡೆ
ಈ ತಿಕ್ಕಾಟದ ಲಾಭ ಪಡೆದ ಬಿಜೆಪಿ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಮೂಲಕ ಚಂದ್ರಶೇಖರ್ ಅವರನ್ನು ಪಕ್ಷಕ್ಕೆ ಕರೆದುತಂದಿತು. ಅಕ್ಟೋಬರ್ 10ರಂದು ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಚಂದ್ರಶೇಖರ್ ಬಿಜೆಪಿ ಸೇರ್ಪಡೆಗೊಂಡರು.
ರಾಮನಗರ ಚುನಾವಣೆ : ಕಾಂಗ್ರೆಸ್ ನಾಯಕರಿಗೆ ಪ್ರಚಾರಕ್ಕೆ ಆಸಕ್ತಿಯೇ ಇಲ್ಲ!
ಚಂದ್ರಶೇಖರ್ ಅಭ್ಯರ್ಥಿ
ಎಂ. ರುದ್ರೇಶ್ ಅವರ ಮನವೊಲಿಸಿದ ಬಿಜೆಪಿ ಮುಖಂಡರು, ಕಾಂಗ್ರೆಸ್ ತೊರೆದು ಪಕ್ಷ ಸೇರ್ಪಡೆಯಾದ ಚಂದ್ರಶೇಖರ್ ಅವರನ್ನು ಐದೇ ದಿನದಲ್ಲಿ ಪಕ್ಷದ ಚುನಾವಣಾ ಅಭ್ಯರ್ಥಿಯನ್ನಾಗಿ ಘೋಷಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿನ ಒಳಜಗಳ ಬಿಜೆಪಿಗೆ ಲಾಭವಾಗಲಿದೆ ಎಂದು ಭಾವಿಸಲಾಗಿತ್ತು. ರಾಮನಗರದಲ್ಲಿ ಜೆಡಿಎಸ್ ಪ್ರಾಬಲ್ಯ ಇರುವುದರಿಂದ ಮತ್ತು ಜತೆಗೆ ಕಾಂಗ್ರೆಸ್ ಬೆಂಬಲವೂ ಇರುವುದರಿಂದ ಬಿಜೆಪಿಗೆ ಇಲ್ಲಿ ಗೆಲುವು ಅಸಾಧ್ಯ ಎಂದೇ ಹೇಳಲಾಗಿತ್ತು. ಆದರೆ, ಈ ಗೊಂದಲಗಳ ಕಾರಣ ಬಿಜೆಪಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅವಕಾಶವಿತ್ತು. ಕೊನೆಯ ಕ್ಷಣದಲ್ಲಿ ಚಂದ್ರಶೇಖರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.
ಕಾಂಗ್ರೆಸ್ನಲ್ಲಿಯೂ ಬಂಡಾಯ
ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇಕ್ಬಾಲ್ ಹುಸೇನ್, ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಇರುವುದರ ಬಗ್ಗೆ ಅಸಮಾಧಾನಗೊಂಡಿದ್ದರು. ಹೀಗಾಗಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಮಾತುಕತೆ ಯಶಸ್ವಿಯಾಗಿ ಹುಸೇನ್ ಅವರು ಕಣದಿಂದ ಹಿಂದಕ್ಕೆ ಸರಿದಿದ್ದರು.
ರಾಮನಗರ ಚುನಾವಣೆ : ಎಲ್.ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿ ಆಗಿದ್ದು ಹೇಗೆ?
ಲಿಂಗಪ್ಪ ಅವರಲ್ಲೂ ಅಸಮಾಧಾನ
ಜೆಡಿಎಸ್ ಪ್ರಮುಖ ಎದುರಾಳಿಯಾಗಿರುವಾಗ ಅದರ ಅಭ್ಯರ್ಥಿಯನ್ನು ಹೇಗೆ ಬೆಂಬಲಿಸುವುದು ಎನ್ನುವುದು ಸ್ಥಳೀಯ ಮುಖಂಡರ ಪ್ರಶ್ನೆಯಾಗಿತ್ತು. ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಅವರ ತಂದೆ, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಅವರೂ ಪಕ್ಷದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ಲಿಂಗಪ್ಪ ಅವರ ನಡೆ ಅನೇಕರಲ್ಲಿ ಅನುಮಾನಗಳಿಗೆ ಕಾರಣವಾಗಿದ್ದವು. ಅವರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಬಿಜೆಪಿ ಸೇರಿಕೊಂಡ ಮಗನನ್ನು ಬೆಂಬಲಿಸಲು ಸಾಧ್ಯವಾಗದೆ ಅವರು ಇಕ್ಕಟ್ಟಿಗೆ ಸಿಲುಕಿದ್ದರು.
ಕಾಂಗ್ರೆಸ್ ತಂತ್ರ
ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು ಬೆಂಬಲಿಸುವುದಿಲ್ಲ ಎಂದು ಸಿಎಂ ಲಿಂಗಪ್ಪ ಹೇಳಿದ್ದು, ಮತ್ತು ಅವರ ಮಗನೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಕಾಂಗ್ರೆಸ್ನಲ್ಲಿ ಕಳವಳ ಮೂಡಿಸಿತ್ತು. ಲಿಂಗಪ್ಪ ಅವರು ರಾಮನಗರದಲ್ಲಿಯೇ ಇದ್ದರೆ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್, ಲಿಂಗಪ್ಪ ಅವರನ್ನು ಬಳ್ಳಾರಿ ಚುನಾವಣೆಯ ಉಸ್ತುವಾರಿಯನ್ನಾಗಿ ನೇಮಿಸಿತ್ತು.
ಈ ಹಿಂದೆಯೇ ಅಸಮಾಧಾನ
ರಾಮನಗರದಲ್ಲಿ ಅಭ್ಯರ್ಥಿಯನ್ನಾಗಿ ಚಂದ್ರಶೇಖರ್ ಅವರ ಹೆಸರನ್ನು ಘೋಷಣೆ ಮಾಡಿ ನಾಮಪತ್ರ ಸಲ್ಲಿಸಿದ ಬಳಿಕ ಬಿಜೆಪಿ ನಾಯಕರು ಅತ್ತ ಸುಳಿಯಲೇ ಇಲ್ಲ. ಚುನಾವಣೆಯ ಉಸ್ತುವಾರಿ ಹೊತ್ತಿದ್ದ ಸಂಸದ ಸದಾನಂದ ಗೌಡ ಅವರು ಕೆಲವು ಸುದ್ದಿಗೋಷ್ಠಿಗಳನ್ನು ನಡೆಸಿದ್ದು ಬಿಟ್ಟರೆ, ಸಕ್ರಿಯರಾಗಿ ಪ್ರಚಾರದಲ್ಲಿ ತೊಡಗಿಕೊಂಡಿರಲಿಲ್ಲ. ಇದರ ಬಗ್ಗೆ ಅಲ್ಲಿನ ಕಾರ್ಯಕರ್ತರಲ್ಲಿ ಈ ಹಿಂದೆಯೇ ಅಸಮಾಧಾನ ಮೂಡಿತ್ತು. ಬಿಜೆಪಿ ನಾಯಕರು ಬಳ್ಳಾರಿ, ಶಿವಮೊಗ್ಗ, ಮಂಡ್ಯ ಮತ್ತು ಜಮಖಂಡಿಗಳಲ್ಲಿ ಸತತವಾಗಿ ಪ್ರಚಾರಕ್ಕೆ ತೊಡಿಸಿಕೊಂಡಿದ್ದರು. ಆದರೆ, ರಾಮನಗರದ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.