ನಿರಂತರ ಮಳೆಗೆ ಸೊರಗಿದ ವೀಳ್ಯದೆಲೆ; ಬೆಲೆ ಕುಸಿತದಿಂದ ರಾಮನಗರ ರೈತರ ಆತಂಕ
ಸೆಪ್ಟೆಂಬರ್, 14: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಗೆ ಅನ್ನದಾತನ ಬದುಕು ದುಸ್ತರವಾಗಿದೆ. ಜಿಲ್ಲೆಯ ಎಲ್ಲಾ ಕೆರೆ, ಕಟ್ಟೆ, ನದಿಗಳು ತುಂಬಿ ಹರಿದ ಪರಿಣಾಮ ಬಹುತೇಕ ಗ್ರಾಮಗಳ ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆಗಳು ಜಲಾವೃತವಾಗಿವೆ.
ಜಿಲ್ಲೆಯಲ್ಲಿ ಸದ್ಯ ಮಳೆ ನಿಂತಿದ್ದರೂ, ಮಳೆಯಿಂದ ಉಂಟಾದ ಅವಾಂತರಗಳು ಹೆಚ್ಚಾಗಿವೆ. ಜಿಲ್ಲೆಯ ಬೊಂಬೆ ನಾಡು ಎಂತಲೇ ಪ್ರಖ್ಯಾತಿ ಹೊಂದಿರುವ ಚನ್ನಪಟ್ಟಣದ ಹಲವು ಗ್ರಾಮಗಳ ಪ್ರಮುಖ ವಾಣಿಜ್ಯ ಬೆಳೆಯಾದ ವೀಳ್ಯದೆಲೆ ಭಾರಿ ಮಳೆಗೆ ಸಿಲುಕಿ ಸೊರಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಮಳೆ ಹೆಚ್ಚಾಗಿರವ ಹಿನ್ನೆಲೆಯಲ್ಲಿ ವೀಳ್ಯದೆಲೆ ಧಾರಣೆ ಕುಸಿಯುತ್ತಿದೆ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.
ಸತತವಾಗಿ ಒಂದು ವಾರಗಳಿಂದ ಸುರಿದ ಮಳೆಯಿಂದಾಗಿ ವೀಳ್ಯದೆಲೆ ತೋಟಗಳಲ್ಲಿ ನೀರು ತುಂಬಿಕೊಂಡು ಬೇರು ಕೊಳೆತು ಹೋಗಿವೆ. ನೀರಿನಲ್ಲಿ ಕೊಳೆತ ಗಿಡ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಮಳೆ ನಿಂತು ಬಿಸಿಲು ಹೆಚ್ಚಾದಂತೆ ಮಳೆ ನೀರಿನಲ್ಲಿ ಕೊಳತಿರುವ ಗಿಡ ಸಂಪೂರ್ಣ ಸತ್ತುಹೋಗುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ವರಮಹಾಲಕ್ಷ್ಮಿ ಹಬ್ಬದಂದು ಪ್ರತಿ ಪಿಂಡಿ ವೀಳ್ಯದೆಲೆ 8 ರಿಂದ 10 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಮಳೆಯ ಅಬ್ಬರದ ನಡುವೆಯೂ ಗೌರಿ ಗಣೇಶ ಹಬ್ಬದಂದು 10 ರಿಂದ 14 ಸಾವಿರ ಧಾರಣೆ ದಾಖಲಿಸಿದೆ. ಆದರೆ ನಂತರದ ದಿನಗಳಲ್ಲಿ ಭಾರಿ ಕುಸಿತ ಕಂಡಿರುವ ವೀಳ್ಯದೆಲೆ ಬೆಲೆ 5 ರಿಂದ 3 ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತಿದ್ದು, ವೀಳ್ಯದೆಲೆ ಬೆಳೆಗಾರರ ಆತಂಕವನ್ನು ಹೆಚ್ಚು ಮಾಡಿದೆ.

ವಿವಿಧ ರಾಜ್ಯಗಳಿಗೂ ಮೈಸೂರು ವೀಳ್ಯದೆಲೆ ರಪ್ತು
ಮೈಸೂರು ವೀಳ್ಯದೆಲೆ ಎಂದು ಹೆಸರು ಪಡೆದಿರುವ ಚನ್ನಪಟ್ಟಣದ ವೀಳ್ಯದೆಲೆ ಮಾರುಕಟ್ಟೆಗೆ 600 ಪಿಂಡಿ ಎಲೆ ಬರುತ್ತಿದೆ. ಹೊರ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೊಡ್ಡ ತಿರುಪತಿ, ಚಿಕ್ಕ ತಿರುಪತಿ. ರಾಜ್ಯದ ದಾವಣಗೆರೆ ಸೇರಿದಂತೆ ಇತರೆ ಜಿಲ್ಲೆಗಳ ಮಾರುಕಟ್ಟೆಗಳಿಗೆ ಸರಬರಾಜಾಗುತ್ತಿದೆ. ಅಲ್ಲದೇ ತಾಲೂಕಿನಲ್ಲಿ ಉತ್ಪತ್ತಿಯಾದ 75% ವೀಳ್ಯದೆಲೆ ಬೆಂಗಳೂರಿಗೆ ಸರಬರಾಜಾಗುತ್ತಿತ್ತು. ಅದರೆ ಬೆಂಗಳೂರಿನಲ್ಲೂ ನೆರೆ ಪರಿಸ್ಥಿತಿಯಿಂದಾಗಿ ವೀಳ್ಯದೆಲೆ ಬೇಡಿಕೆ ಕುಸಿದಿದೆ.

ವೀಳ್ಯದೆಲೆಯಲ್ಲಿರುವ ಪ್ರಮುಖ ಅಂಶಗಳು
ತಾಲೂಕಿನ ಬಹುತೇಕ ಸಣ್ಣ ರೈತರಾಗಿದ್ದು, ವೀಳ್ಯದೆಲೆ ಬೇಸಾಯ ಬಹು ವರ್ಷ ಬೇಸಾಯವಾದ ಕಾರಣ ರೈತರು ಹೆಚ್ಚಿನ ಲಾಭದ ನಿರೀಕ್ಷೆ ಮಾಡುತ್ತಾರೆ. ವೀಳ್ಯದೆಲೆ ಗಿಡ ಔಷಧಿ ಗುಣಗಳನ್ನು ಹೊಂದಿದ್ದು, ರೈತರು ವೀಳ್ಯದೆಲೆ ಗಿಡಕ್ಕೆ ಯಾವುದೇ ರೋಗಕ್ಕೆ ತುತ್ತಾಗದ ರೀತಿಯಲ್ಲಿ ಜೋಪಾನ ಮಾಡಿದರೆ ಹಲವು ವರ್ಷಗಳ ಕಾಲ ಅದಾಯ ಕೊಡುತ್ತದೆ. ದಾರ್ಮಿಕ ಕಾರ್ಯಕ್ರಮ, ಪೂಜೆ ಪುನಸ್ಕಾರ ಅಲ್ಲದೇ ಮನುಷ್ಯನ ಹುಟ್ಟಿನಿಂದ ಸಾವಿನವರಗೆ ಸ್ಥಾನ ಪಡೆದಿರುವ ಈ ವೀಳ್ಯದೆಲೆ, ಇದರ ಬೇಸಾಯವನ್ನು ರೈತರು ಪೂಜ್ಯ ರೀತಿಯಲ್ಲಿ ಭಾವನೆ ಹೊಂದಿದ್ದಾರೆ. ಯಾವುದೇ ರೈತರು ವೀಳ್ಯದೆಲೆ ತೋಟಕ್ಕೆ ಚಪ್ಪಲಿ ಹಾಕಿಕೊಂಡು ಪ್ರವೇಶ ಮಾಡುವುದಿಲ್ಲ. ವ್ಯವಸಾಯದಲ್ಲೂ ಹಲವು ರೀತಿ ನೀತಿಗಳನ್ನು ಪಾಲಿಸುತ್ತಾರೆ.

ವೀಳ್ಯದೆಲೆಯಲ್ಲಿ ಬದುಕು ಕಟ್ಟಿಕೊಂಡಿದ್ದ ರೈತ
ರಮುಖವಾಗಿ ನಾಗವಾರ, ಚಿಕ್ಕನದೊಡ್ಡಿ, ಮೊಗಳ್ಳಿ, ಕೂಡ್ಲೂರು, ಮಳೂರು ಪಟ್ಟಣ, ಬೂಹಳ್ಳಿ, ಮೆಣಸಿಗನಹಳ್ಳಿ, ವಿಠಲೇನಹಳ್ಳಿ, ಆರಳಾಳುಸಂದ್ರ, ದ್ಯಾವಪಟ್ಟಣ, ಬಿ.ವಿ.ಹಳ್ಳಿ, ಅಮ್ಮಳ್ಳಿದೊಡ್ಡಿ, ವಿರುಪಾಕ್ಷಪುರ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ವೀಳ್ಯದೆಲೆ ವ್ಯವಸಾಯ ನಂಬಿಕೊಂಡು ಸಾವಿರಾರು ರೈತರು ಹಾಗೂ ಕೃಷಿ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ.

ದಿಢೀರ್ ವೀಳ್ಯದೆಲೆ ಬೆಲೆ ಕುಸಿತ
ಇನ್ನು ವೀಳ್ಯದೆಲೆ ಬೆಳೆದ ಸುರೇಶ್ ಮಾತನಾಡಿ, ಹಳೆ ಮೈಸೂರು ಪ್ರಾಂತ್ಯದ ಚನ್ನಪಟ್ಟಣದಲ್ಲಿ ಬೆಳೆಯುವ ವೀಳ್ಯದೆಲೆಗೆ ಮೈಸೂರು ವೀಳ್ಯದೆಲೆ ಎಂದು ಖ್ಯಾತಿ ಇದೆ. ಅಲ್ಲದೇ ಸಿನಿಮಾದ ಹಾಡಿನಲ್ಲೂ ಬಂದ ನಂತರದಲ್ಲಿ ಮೈಸೂರು ವೀಳ್ಯದೆಲೆ ಎಂದು ಮತ್ತಷ್ಟೂ ಖ್ಯಾತಿ ಪಡೆದಿದೆ. ನಮ್ಮ ತಾತ ಮುತ್ತಾತನ ಕಾಲದಿಂದ ಕುಟುಂಬದ ನಿರ್ವಹಣೆ ವೀಳ್ಯದೆಲೆ ವ್ಯವಸಾಯದಿಂದ ನಡೆಯುತ್ತಿದೆ. ಈ ಬಾರಿ ಮಳೆಯಿಂದ ಕಳೆದ ವಾರ ಪ್ರತಿ ಪಿಂಡಿಗೆ 8 ಸಾವಿರ ಬೆಲೆ ಇತ್ತು, ಅದರೆ ಕಳೆದ ಶನಿವಾರದಿಂದ ಕೇವಲ 3 ಸಾವಿರಕ್ಕೆ ಕುಸಿದಿದೆ ಎಂದು ಅಳು ತೋಡಿಕೊಂಡಿದ್ದಾರೆ. ನಂತರ ಮೆಣಸಿಗನಹಳ್ಳಿ ರೈತ ರಾಜಣ್ಣ ಮಾತನಾಡಿ, ಒಂದು ಎಕರೆಯಲ್ಲಿ ವೀಳ್ಯದೆಲೆ ವ್ಯವಸಾಯ ಮಾಡಿದ್ದೆ. ಮಳೆ ನೀರು ನಿಂತು ಸುಮಾರು ಶೇಕಡಾ 75% ತೋಟ ನಾಶವಾಗಿದೆ. ಅಲ್ಲದೇ ಬಿಸಿಲಿನ ತಾಪ ಹೆಚ್ಚಾದಂತೆ ವೀಳ್ಯದೆಲೆ ಗಿಡಗಳು ಸಾಯುವ ಹಂತಕ್ಕೆ ತಲುಪಿವೆ. ವೀಳ್ಯದೆಲೆ ನಾಶಕ್ಕೂ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು.












Click it and Unblock the Notifications