Bengaluru-Mysuru Expressway: ಬಿಡದಿ ಬಳಿ ಸರಣಿ ಅಪಘಾತ
ರಾಮನಗರ, ಜುಲೈ, 14: ಇಂದು ಬೆಳ್ಳಂಬೆಳಗ್ಗೆ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ನೆಲ್ಲಿಗುಡ್ಡ ಕೆರೆ ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದೆ.
ಇಂದು ಬೆಳ್ಳಂ ಬೆಳ್ಳಂಬೆಳಗ್ಗೆ ಮೈಸೂರಿನಿಂದ ಬೆಂಗಳೂರು ಕಡೆಗೆ ಹೊರಟಿದ್ದ ಲಾರಿ, ಕೆಎಸ್ಆರ್ಟಿಸಿ ಬಸ್, ಕಾರು ಒಂದಕ್ಕೊಂದು ಗುದ್ದಿಕೊಂಡಿವೆ. ಪರಿಣಾಮ ಮೂರು ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಈ ಸರಣಿ ಅಪಘಾತ ಪ್ರಕರಣ ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮತ್ತೊಂದೆಡೆ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳ ಬೈಕ್ ಹಾಗೂ ಸರ್ಕಾರಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸ್ಥಳದಲೇ ಮೃತಪಟ್ಟು, ಮತ್ತೋರ್ವ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಮನಗರ ಹಾಗೂ ಮಾಗಡಿ ಹೆದ್ದಾರಿಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಐಟಿಐ ವಿದ್ಯಾರ್ಥಿಗಳಾದ ದರ್ಶನ್ ಹಾಗೂ ಭರತ್ ಪರೀಕ್ಷೆ ಬರೆಯಲು ಹಾರೋಹಳ್ಳಿಯಿಂದ ಬೈಕ್ನಲ್ಲಿ ಮಾಗಡಿಗೆ ತೆರಳುವ ಸಮಯದಲ್ಲಿ ಮಾಗಡಿ ಸಮೀಪದ ಜೋಡುಗಟ್ಟೆ ಕ್ರಾಸ್ ಬಳಿ ಮಾಗಡಿಯಿಂದ ರಾಮನಗರ ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಡಿಕ್ಕಿಯಾಗಿತ್ತು.
ಬೈಕ್-ಕೆಎಸ್ಆರ್ಟಿಸಿ ಬಸ್ ಮುಖಾಮುಖಿ ಡಿಕ್ಕಿ
ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಮೃತ ದರ್ಶನ್ ಬೈಕ್ ಸಮೇತ ಬಸ್ ಮುಂಭಾಗಕ್ಕೆ ಸಿಲುಕಿರುವುದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿತ್ತು. ಇನ್ನು ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು.
ಅಪಘಾತದ ನಡೆದ ಜೋಡುಗಟ್ಟೆ ಕ್ರಾಸ್ ಬಳಿ ತೀವ್ರ ತಿರುವಿರುವ ಕಾರಣ ಇದೇ ಸ್ಥಳದಲ್ಲೇ ಪದೇಪದೇ ಅಪಘಾತಗಳು ನಡೆಯುತ್ತಿರುತ್ತವೆ. ಅಪಘಾತಗಳನ್ನು ತಡೆಯಲು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದೇ ಇರುವುದೇ ಇಂತಹ ದುರ್ಘಟನೆಗಳಿಗೆ ಕಾರಣ ಎಂದು ಸ್ಥಳೀಯರು ಹಾಗೂ ಅಪಘಾತದ ಪ್ರತ್ಯಕ್ಷ ದರ್ಶಿಗಳು ಆರೋಪಿಸಿದ್ದರು. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಜೋಡುಗಟ್ಟೆ ಕ್ರಾಸ್ ಬಳಿ ನಡೆಯುತ್ತಿರುವ ಅಪಘಾತಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.












Click it and Unblock the Notifications