ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಸಕ್ರಿಯ, ಟಿಕೆಟ್ ಫೈನಲ್?
ರಾಮನಗರ, ಜೂನ್ 23: ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಕುತೂಹಲ ಇದ್ದು, ಅನಿತಾ ಕುಮಾರಸ್ವಾಮಿ ಅವರ ಹೊಸ ನಡೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಸಿಎಂ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ರಾಮನಗರದ ಕೆಲವು ದಿನಗಳಿಂದ ಸಕ್ರೀಯರಾಗಿದ್ದು ಜೆಡಿಎಸ್ ಟಿಕೆಟ್ ಅವರಿಗೇ ಸಿಗಲಿದೆಯಾ ಎಂಬ ಊಹಾಪೋಹ ಹರಿದಾಡುತ್ತಿದೆ.
ನಿನ್ನೆಯಷ್ಟೆ ಅನಿತಾ ಕುಮಾರಸ್ವಾಮಿ ಅವರು ರಾಮನಗರದ ಕುರುಬರಹಳ್ಳಿಯ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ್ದು, ಸ್ಥಳೀಯ ರಾಜಕೀಯ ಮುಖಂಡರು ಮತ್ತು ಜನರೊಂದಿಗೆ ಬೆರೆತಿದ್ದಾರೆ.

ರಾಮನಗರದ ಹಲವು ಜೆಡಿಎಸ್ ಮುಖಂಡರನ್ನೂ ಅನಿತಾ ಕುಮಾರಸ್ವಾಮಿ ಅವರು ಭೇಟಿಯಾಗಿದ್ದಾರೆ ಎನ್ನಲಾಗಿದ್ದು, ಚುನಾವಣೆ ಕುರಿತು ಮಾತುಕತೆಯನ್ನೂ ಮಾಡಿದ್ದಾರೆ ಎಂಬ ಸುದ್ದಿಯೂ ಇದೆ.
ಚನ್ನಪಟ್ಟಣ ಹಾಗೂ ರಾಮನಗರ ಎರಡೂ ಕ್ಷೇತ್ರದಲ್ಲಿ ಗೆದ್ದಿದ್ದ ಕುಮಾರಸ್ವಾಮಿ ಅವರು ಚನ್ನಪಟ್ಟಣ ಉಳಿಸಿಕೊಂಡು ರಾಮನಗರಕ್ಕೆ ರಾಜಿನಾಮೆ ನೀಡಿದ್ದರು. ಹೀಗಾಗಿ ಅಲ್ಲಿ ಉಪ ಚುನಾವಣೆ ನಡೆಯಲಿದೆ.
ರಾಮನಗರದಿಂದ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯವೂ ಇತ್ತು. ಅಲ್ಲದೆ ಸ್ಥಳೀಯ ಕೆಲವು ಮುಖಂಡರ ಹೆಸರುಗಳೂ ಕೇಳಿಬಂದಿತ್ತು. ಜೊತೆಗೆ ಕಡೂರಿನಲ್ಲಿ ಸೋತಿರುವ ವೈಎಸ್ವಿ ದತ್ತ ಅವರಿಗೆ ರಾಮನಗರ ಟಿಕೆಟ್ ನೀಡಬೇಕೆಂಬ ಕೂಗು ಸಹ ಇದೆ. ಆದರೆ ಹೊಸ ಬೆಳವಣಿಗೆ ಗಮನಿಸಿದರೆ ಅನಿತಾ ಕುಮಾರಸ್ವಾಮಿ ಅವರಿಗೆ ರಾಮನಗರ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ.
ರಾಮನಗರದಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಬಿಜೆಪಿಯು ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲವಾದರೂ ಚನ್ನಪಟ್ಟಣದಲ್ಲಿ ಸೋತಿರುವ ಸಿ.ಪಿ.ಯೋಗೀಶ್ವರ್ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ.












Click it and Unblock the Notifications