ಚನ್ನಪಟ್ಟಣದ ಬೊಂಬೆ ಕಾರ್ಮಿಕರ ಜತೆ ಸೆಲ್ಫಿ ಕ್ಲಿಕ್ಕಿಸಿದ ಅಮಿತ್ ಶಾ
ರಾಮನಗರ, ಏಪ್ರಿಲ್ 1: ಬಣ್ಣದ ಅಟಿಕೆ ತಯಾರಿಕೆಯಿಂದ ಚನ್ನಪಟ್ಟಣ ಬೊಂಬೆನಾಡು ಎಂದು ಪ್ರಸಿದ್ಧಿ ಪಡೆದಿದೆ. ಇಲ್ಲಿನ ಬೊಂಬೆಗಳು ದೇಶ- ವಿದೇಶದಲ್ಲಿ ಹೆಸರು ಗಳಿಸಿವೆ.
ಚನ್ನಪಟ್ಟಣದಲ್ಲಿ ರೈತ ಸಂವಾದ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ, ಚನ್ನಪಟ್ಟಣ ಕ್ರಾಫ್ಟ್ ಪಾರ್ಕ್ ಗೆ ಭೇಟಿ ಕೊಟ್ಟು, ಕರಕುಶಲ ವಸ್ತುಗಳ ವೀಕ್ಷಣೆ ಮಾಡಿದರು.
ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್
ಕರಕುಶಲ ಕರ್ಮಿಗಳ ಜೊತೆ ಚರ್ಚೆ ನಡೆಸಿದ ಅಮಿತ್ ಶಾ, ಬೊಂಬೆ ತಯಾರಿಕೆಯ ಬಗ್ಗೆ ಮಾಹಿತಿ ಕಲೆ ಹಾಕಿದರು ಮತ್ತು ಕಷ್ಟ- ಸುಖವನ್ನು ವಿಚಾರಿಸಿದರು. ಕಾರ್ಮಿಕರು ಮೊಬೈಲ್ ನಲ್ಲಿ ಅಮಿತ್ ಶಾ ಅವರೊಂದಿಗೆ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುವುದಕ್ಕೆ ತಡಕಾಡಿದರು. ಆಗ ಖುದ್ದು ಅಮಿತ್ ಶಾ ಅವರೇ ಕಾರ್ಮಿಕರ ಮೊಬೈಲ್ ಪಡೆದು, ಸೆಲ್ಫಿ ಕ್ಲಿಕ್ ಮಾಡಿದರು.
ಅಲ್ಲದೇ ಕಾರ್ಮಿಕರ ಜಾಗದಲ್ಲಿ ಕುಳಿತು, ಸ್ವತಃ ಗೊಂಬೆಯೊಂದಕ್ಕೆ ಬಣ್ಣ ಹಚ್ಚಿದರು. ಕುಶಲಕರ್ಮಿಗಳಿಗೆ ಶಹಬ್ಬಾಸ್ ಗಿರಿ ನೀಡಿದ ಅಮಿತ್ ಶಾ, ಚನ್ನಪಟ್ಟಣದ ಕರಕುಶಲಕ್ಕೆ ಪ್ರೋತ್ಸಾಹ ನೀಡಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳಿಗೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.