ಚನ್ನಪಟ್ಟಣಕ್ಕೆ ಜೆಡಿಎಸ್ನಿಂದ ಮಹಿಳಾ ಅಭ್ಯರ್ಥಿ.. ಹೊಸ ಚರ್ಚೆಯಲ್ಲಿ ಇಬ್ಬರ ಹೆಸರು!
ಬಿಜೆಪಿ ತೊರೆದು ಕಾಂಗ್ರೆಸ್ ಮನೆ ಸೇರಿಕೊಂಡಿರುವ ಸಿ.ಪಿ.ಯೋಗೇಶ್ವರ್ ಅವರು ಚನ್ನಪಟ್ಟಣದ ಮೈತ್ರಿಗೆ ಸಂಕಷ್ಟ ತಂದೊಡ್ಡಿದ್ದಾರೆ. ಯೋಗೇಶ್ವರ್ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ ಎಂದು ಅಂದಾಜಿಸಿದ್ದ ಮೈತ್ರಿ ಪಡೆಗೆ, ಅವರ ಕಾಂಗ್ರೆಸ್ ಸೇರ್ಪಡೆಯು ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿದೆ.
ಇನ್ನು ಇಲ್ಲಿವರೆಗೆ ಚನ್ನಪಟ್ಟಣದಲ್ಲಿ ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಹೆಚ್ಚಾಗಿ ಕೇಳಿಬಂದಿತ್ತು. ಈಗ ಯೋಗೇಶ್ವರ್ ಅವರ ನಡೆಯಿಂದಾಗಿ ಎನ್ಡಿಎ ಅಭ್ಯರ್ಥಿ ಯಾರು ಎಂಬುದು ದೊಡ್ಡ ಗೊಂದಲ ಸೃಷ್ಟಿಸಿದೆ. ಅಲ್ಲದೆ, ನಿಖಿಲ್ ಬದಲಿಗೆ ಬೇರೆ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ ಕೂಡ ಶುರುವಾಗಿದೆ.

ಇನ್ನೂ ಹೊಸ ವಿಷಯವೆಂದರೆ, ಯೋಗೇಶ್ವರ್ ಎದುರು ಜೆಡಿಎಸ್ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಡಿ.ಕೆ.ಸುರೇಶ್ ಅವರನ್ನು ಸ್ವಕ್ಷೇತ್ರದಲ್ಲೇ ಡಾ.ಸಿ.ಎನ್.ಮಂಜುನಾಥ್ ಅವರ ಮೂಲಕ ಮಣಿಸಿ ಗೆದ್ದಿರುವ ಮೈತ್ರಿಕೂಟ, ಇದೇ ಟ್ರಿಕ್ ಅನ್ನು ಚನ್ನಪಟ್ಟಣದಲ್ಲೂ ಮುಂದುವರಿಸುವ ಸಾಧ್ಯತೆ ಇದೆ.
ಸಿ.ಎನ್.ಮಂಜುನಾಥ್ ಅವರ ಪತ್ನಿ ಅನಸೂಯ ಅವರನ್ನು ಚನ್ನಪಟ್ಟಣದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬ ಚರ್ಚೆಗಳು ನಡೆಯುತ್ತಿವೆ. ಅಲ್ಲದೇ ಒಂದು ವೇಳೆ ನಿಖಿಲ್ ಅವರನ್ನೇ ಕಣಕ್ಕಿಳಿಸುವುದಿದ್ದರೆ ಇಷ್ಟೊತ್ತಿಗೆ ಅಧಿಕೃತ ಘೋಷಣೆಯೂ ಆಗಬೇಕಿತ್ತು. ಆದರೆ ಇಂದು ಸಂಜೆವರೆಗೆ ಜೆಡಿಎಸ್ ಸಮಯ ತೆಗೆದುಕೊಂಡಿದ್ದು, ಅಭ್ಯರ್ಥಿ ಬದಲಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
ಮತ್ತೊಂದೆಡೆ ಅನಸೂಯ ಅವರ ಸ್ಪರ್ಧೆ ಬಗ್ಗೆ ಪತಿ ಡಾ.ಮಂಜುನಾಥ್ ಅವರು ನಿರಾಕರಿಸಿದ್ದಾರೆ. ನನ್ನ ಪತ್ನಿ ಅನಸೂಯ ಅವರು ಸ್ಪರ್ಧೆ ಮಾಡುವುದಿಲ್ಲ. ಅವರು ಚನ್ನಪಟ್ಟಣದಲ್ಲಿ ನಿಲ್ತಾರೆ ಎನ್ನುವುದು ಸುಳ್ಳು ಎಂದು ಹೇಳಿದ್ದಾರೆ. ಆದರೆ, ಜೆಡಿಎಸ್ ಹಿರಿತಲೆಯಾದ ಎಚ್.ಡಿ.ದೇವೇಗೌಡರು ಮಹಿಳಾ ಅಭ್ಯರ್ಥಿಯ ಅಸ್ತ್ರ ಬಿಡೋಣ ಎಂದು ಕೊನೆಯ ಕ್ಷಣದಲ್ಲಿ ಅನಸೂಯ ಅವರ ಹೆಸರನ್ನೇ ಘೋಷಣೆ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಶಾಸಕರಾಗಿದ್ದ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಹೆಸರು ಸಹ ಮುನ್ನೆಲೆಗೆ ಬಂದಿದೆ. ಅನಸೂಯ ಅಥವಾ ಅನಿತಾ ಕುಮಾರಸ್ವಾಮಿ ಅವರಿಗೆ ಎನ್ಡಿಎ ಟಿಕೆಟ್ ಘೋಷಿಸುವುದು ಬಹುತೇಕ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ನಿಖಿಲ್ ಕುಮಾರಸ್ವಾಮಿ ಕೂಡ ತಮ್ಮ ಸ್ಪರ್ಧೆ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಆದರೆ ಇಂದು ಸಂಜೆ 7 ಗಂಟೆಗೆ ಚನ್ನಪಟ್ಟಣಕ್ಕೆ ಅಭ್ಯರ್ಥಿ ಯಾರು ಎನ್ನುವುದು ತಿಳಿಯಲಿದೆ. ಅಭ್ಯರ್ಥಿ ಹೆಸರನ್ನು ತಾತ ದೇವೇಗೌಡರು, ತಂದೆ ಕುಮಾರಣ್ಣ ಘೋಷಿಸಲಿದ್ದಾರೆ. ಅಲ್ಲಿವರೆಗೂ ಕಾಯಿರಿ ಎಂದು ಹೇಳಿದ್ದಾರೆ.
ಈ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲು ಜೆಡಿಎಸ್ ಮತ್ತೊಮ್ಮೆ ಬಿಜೆಪಿ ನಾಯಕರ ಜೊತೆ ಸಭೆ ನಡೆಸಲಿದೆಯಂತೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಈಗ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ಬಗ್ಗೆಯೂ ಎನ್ಡಿಎ ಹೈಕಮಾಂಡ್ಗೆ ಮಾಹಿತಿ ನೀಡಿರುವ ಕುಮಾರಸ್ವಾಮಿ, ಇಂದು ಸಂಜೆ ಒಂದು ಸುತ್ತಿನ ಸಭೆ ಕೂಡ ಕರೆದಿದ್ದಾರೆ.

ಇದಕ್ಕೂ ಮುನ್ನ ಚನ್ನಪಟ್ಟಣದ ಸ್ಥಳೀಯ ನಾಯಕರ ಸಭೆ ಕೂಡ ಕರೆದಿರುವ ಕುಮಾರಸ್ವಾಮಿ ಅವರು ಬಳಿಕ ಬಿಜೆಪಿ ನಾಯಕರೊಂದಿಗೆ ಚರ್ಚಿಸಿ, ಅಭ್ಯರ್ಥಿ ಹೆಸರು ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆವರೆಗೆ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಮಾತ್ರವೇ ಹೆಚ್ಚಾಗಿ ಕೇಳಿಬರುತ್ತಿತ್ತು. ಇಂದು ಒಂದೇ ದಿನ ಹಲವರ ಹೆಸರು ತಳುಕು ಹಾಕಿಕೊಳ್ಳುತ್ತಿರುವುದು ಎಲ್ಲರಲ್ಲಿ ಗೊಂದಲಕ್ಕೆ ಕಾರಣವಾಗಿದೆ.












Click it and Unblock the Notifications