ಸ್ನೇಹಿತನಿಂದಲೇ ಬರ್ಬರ ಹತ್ಯೆಯಾದ ನಿವೃತ್ತ ಪೊಲೀಸ್ ಅಧಿಕಾರಿ
ರಾಮನಗರ, ಜೂನ್.27: ನಿವೃತ್ತ ಪೊಲೀಸ್ ಅಧಿಕಾರಿಯನ್ನು ಸ್ನೇಹಿತನೇ ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆ ಗೇಟ್ ಬಳಿ ನಡೆದಿದೆ.
ಕೊಲೆಯಾದ ವ್ಯಕ್ತಿ ನಿವೃತ್ತ ಪೊಲೀಸ್ ಅಧಿಕಾರಿ ಸಿದ್ದಲಿಂಗಯ್ಯ (64) ಬೆಂಗಳೂರಿನ ಸಿಸಿಬಿಯಲ್ಲಿ ಕಾರ್ಯನಿರ್ವಹಿಸಿ 2015ರಲ್ಲಿ ನಿವೃತ್ತಿ ಹೊಂದಿದ್ದರು. ಇವರು ಮೂಲತಃ ಕನಕಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ನಿವಾಸಿ.
ಬಿಜೆಪಿ ಮುಖಂಡನ ಹತ್ಯೆ:ಅವಾರ್ಡ್ ವಾಪ್ಸಿ, ಜಸ್ಟ್ ಆಸ್ಕಿಂಗ್ ಮೌನವೇಕೆ!?
ಬೆಂಗಳೂರಿನ ಜರಗನಹಳ್ಳಿಯಲ್ಲಿ ವಾಸವಾಗಿದ್ದ ಸಿದ್ದಲಿಂಗಯ್ಯ ಅವರನ್ನು ಶಂಕರ್ ಎಂಬಾತ ಚೇತಕ್ ಬೈಕ್ ನಲ್ಲಿ ಬೆಂಗಳೂರಿನಿಂದ ಕರೆದುಕೊಂಡು ಬಂದು ಚನ್ನಪಟ್ಟಣದ ಗೌಡಗೆರೆ ಗೇಟ್ ಬಳಿ ಕಣ್ಣಿಗೆ ಕಾರದಪುಡಿ ಎರಚಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ ಚನ್ನಪಟ್ಟಣದ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಮುಳಬಾಗಿಲು ಮೂಲದ ಸಿದ್ದಲಿಂಗಯ್ಯ, ಶಂಕರ್ ಕಳೆದ ಮೂವತ್ತು ವರ್ಷಗಳಿಂದ ಸ್ನೇಹಿತರಾಗಿದ್ದು, ಅವರ ನಡುವೆ ಹಣಕಾಸಿನ ವ್ಯವಹಾರವಿತ್ತು ಎನ್ನಲಾಗಿದೆ. ಇನ್ನು ಆರೋಪಿ ಸಿದ್ದಲಿಂಗಯ್ಯನ ಮನೆಯಲ್ಲೇ ವಾಸವಾಗಿದ್ದ ಎನ್ನಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಎಂ.ಕೆ.ದೊಡ್ಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.