ಸ್ನೇಹಿತರ ವಿಡಿಯೋ ಮಾಡುವ ಮೋಜಿಗೆ ನೀರಿನಲ್ಲಿ ಮುಳುಗಿ ಯುವಕ ಸಾವು
ರಾಮನಗರ, ಜನವರಿ 30: ಮೋಜು-ಮಸ್ತಿ ಗುಂಗಿನಲ್ಲಿದ್ದ ಸ್ನೇಹಿತರು ವಿಡಿಯೋ ಮಾಡಲು ಈಜು ಬಾರದ ಗೆಳೆಯನ್ನು ಬಾವಿಗೆ ನೂಕಿದ್ದಾರೆ, ಯುವಕ ನೀರಿನಲ್ಲಿ ಮುಳುಗಿ ಸಾವನ್ನಪಿರುವ ಘಟನೆ ಮಾಗಡಿ ತಾಲೂಕಿನ ತಗಚ್ಚಕುಪ್ಪೆ ಬಳಿ ನಡೆದಿದೆ.
ಸ್ನೇಹಿತರ ಮೋಜಿಗೆ ಬಲಿಯಾದ ಯುವಕನ್ನು ಹೆಬ್ಬೂರು ಮೂಲದವನಾಗಿದ್ದು, ಬೆಂಗಳೂರು ಹೊರವಲಯದ ತಾವರೆಕೆರೆಯಲ್ಲಿ ವಾಸವಿದ್ದ ಲಕ್ಷ್ಮಿಕಾಂತ (27) ಮೃತ ದುರ್ದೈವಿಯಾಗಿದ್ದಾನೆ.
ಮಾಚೋಹಳ್ಳಿ ಅದೀಶ್ವರ್ ವೇರ್ ಹೌಸ್ ನಲ್ಲಿ ಎಕ್ಸ್ಯೂಕ್ಯೂಟಿವ್ ಆಗಿದ್ದ ಲಕ್ಷ್ಮಿಕಾಂತ, ಸುರೇಶ್, ಶಿವರಾಜು, ಮುರುಳಿಧರ, ಬಸವರಾಜು, ಉಮೇಶ, ಪವನ್ ಕುಮಾರ್, ಪ್ರವೀಣ ಈ ಎಂಟು ಮಂದಿ ಒಂದೇ ರೂಂನಲ್ಲಿ ವಾಸಿಸುತ್ತಿದ್ದರು. ಶುಕ್ರವಾರ (ಜ.29) ಕೆಲಸಕ್ಕೆ ರಜೆ ಹಾಕಿ ಪಾರ್ಟಿ ಮಾಡಲು ಮಾಗಡಿಗೆ ಬಂದಿದ್ದರು.

ಪಾರ್ಟಿ ಮಾಡಿದ ನಂತರ ವಾಪಸ್ಸು ತೆರಳುವ ಮಾರ್ಗ ಮಧ್ಯದಲ್ಲಿ ಮಾಗಡಿ-ಬೆಂಗಳೂರು ಮುಖ್ಯರಸ್ತೆಯ ತಗಚ್ಚಕುಪ್ಪೆ ಬಳಿಯ ಗೊಲ್ಲರಪಾಳ್ಯ ಬಲರಾಮು ಎಂಬುವವರ ಕಲ್ಲು ಬಾವಿ ನೋಡಿದ ಮದ್ಯದ ನಶೆಯಲ್ಲಿದ್ದ 8 ಮಂದಿ ಸ್ನೇಹಿತರು ಈಜಾಡಲು ಮುಂದಾಗಿದ್ದಾರೆ.
ಈ ಸಮಯದಲ್ಲಿ ಈಜಲು ಬಾರದ ಲಕ್ಷ್ಮಿಕಾಂತನನ್ನು ಸುರೇಶ್ ಎಂಬಾತ ಬಾವಿಗೆ ತಳ್ಳಿ ಈಜಾಡಲು ಕಷ್ಟಪಡುತ್ತಿದ್ದ ಗೆಳೆಯನ ವಿಡಿಯೋ ಮಾಡಿ ಖುಷಿಪಡುತ್ತಿದ್ದರು. ಆದರೆ ಲಕ್ಷ್ಮಿಕಾಂತ ನೀರಲ್ಲಿ ಮುಳುಗಿ ಮೇಲೇಳದೆ ಇರುವುದನ್ನು ಕಂಡ 7 ಮಂದಿ ಸ್ನೇಹಿತರು ಲಕ್ಷ್ಮಿಕಾಂತನ್ನು ಬಾವಿಯಿಂದ ಮೇಲಕ್ಕೆತ್ತಲು ಪ್ರಯತ್ನಿಸಿದರು, ನೀರಿನ ಪಾಚಿಗೆ ಸಿಲುಕಿ ಲಕ್ಷ್ಮಿಕಾಂತ ಆಗಲೇ ಮೃತಪಟ್ಟಿದ್ದಾನೆ.

ಈ ಘಟನೆ ನಡೆಯುತ್ತಿದಂತೆ ಪರಾರಿಯಾಗುತ್ತಿದ್ದ 7 ಮಂದಿಯನ್ನು ಗ್ರಾಮಸ್ಥರು ಹಿಡಿದು ತೆಂಗಿನಮರಕ್ಕೆ ಕಟ್ಟಲು ಮುಂದಾದಾಗ ಪ್ರವೀಣ, ಉಮೇಶ್ ಎಂಬ ಇಬ್ಬರು ಯುವಕರು ಪರಾರಿಯಾಗಿದ್ದಾರೆ. ಈ ವೇಳೆ ಸುರೇಶ್ ಎಂಬುವನ ಕಾಲಿಗೆ ತೀವ್ರ ಪೆಟ್ಟಾಗಿದೆ. ಮೃತ ಲಕ್ಷ್ಮಿಕಾಂತ್ ಗೆ ಮದುವೆಯಾಗಿ ಒಂದು ಮಗುವಿದ್ದು, ಉಳಿದ 7 ಮಂದಿಗೆ ಮದುವೆಯಾಗಿಲ್ಲ ಎನ್ನಲಾಗಿದೆ.
ಘಟನೆ ತಿಳಿಯುತ್ತಿದಂತೆ ತಾವರೆಕೆರೆ ಸಿಪಿಐ ಜಗದೀಶ್, ಪಿಎಸ್ಐ ನರೇಂದ್ರ ಬಾಬು, ಪ್ರೋಬೆಷನರಿ ಪಿಎಸ್ಐ ರಾಮಚಂದ್ರ ಸ್ಥಳಕ್ಕೆ ಭೇಟಿ ನೀಡಿ, ಅಗ್ನಿಶಾಮಕ ದಳದವರನ್ನು ಕರೆಸಿ ಬಾವಿಯಿಂದ ಶವವನ್ನು ಮೇಲಕ್ಕೆತ್ತಿ ಮಾಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಇನ್ನು ಮೃತನ 5 ಮಂದಿ ಸ್ನೇಹಿತರನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದು, ಪರಾರಿಯಾಗಿರುವ ಇಬ್ಬರ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಘಟನೆ ಕುರಿತು ತಾವರೆ ಕರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications