ರಾಯಚೂರು; ಕೃಷ್ಣಾ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತದ ಎಚ್ಚರಿಕೆ
ರಾಯಚೂರು, ಜೂ24: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಹೆಚ್ಚಾಗಿ ರಾಜ್ಯದ ಮೂರನೇ ದೊಡ್ಡ ಅಣೆಕಟ್ಟು ಎಂದು ಪ್ರಸಿದ್ಧಿ ಪಡೆದಿರುವ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಬಂದಲ್ಲಿ ಕೃಷ್ಣಾ ನದಿಗೆ ಯಾವುದೇ ಕ್ಷಣದಲ್ಲಿ ನೀರು ಹರಿಬಿಡುವ ಸಾಧ್ಯತೆಯಿದೆ.
ನಾರಾಯಣಪುರ ಅಣೆಕಟ್ಟು ಕೆಳಭಾಗದ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನರು-ಜಾನುವಾರುಗಳೊಂದಿಗೆ ಸುರಕ್ಷತೆ ಮತ್ತು ಮುಂಜಾಗೃತೆ ವಹಿಸಲು ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಮಳೆ ಮುನ್ಸೂಚನೆ ಕಾರಣ ಬಸವಸಾಗರ ಜಲಾಶಯಕ್ಕೆ ಒಂದೊಮ್ಮೆ ಒಳಹರಿವು ಹೆಚ್ಚಾಗಿ ಜಲಾಶಯದ ಗರಿಷ್ಠ ಮಟ್ಟಕ್ಕೆ ನೀರು ಬಂದರೆ ಜಲಾಶಯದಿಂದ ಕೃಷ್ಣಾ ನದಿಗೆ ಯಾವುದೇ ಸಂದರ್ಭದಲ್ಲಿ ನೀರು ಹರಿಬಿಡುವ ಸಾಧ್ಯತೆಗಳಿವೆ. ಹೀಗಾಗಿ ನದಿ ತೀರದ ಗ್ರಾಮಗಳ ಜನ ಜಾನುವಾರುಗಳು ನದಿಗೆ ಇಳಿಯದಂತೆ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದ್ದಾರೆ.
ರಾಯಚೂರಿನಲ್ಲಿ ಭಾರೀ ಮಳೆ; ಜನ-ಜಾನುವಾರುಗಳ ರಕ್ಷಣೆಗೆ ಎನ್ಡಿಆರ್ಎಫ್ ತಂಡ ಆಗಮನ
ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆಯ ಜೂ.24 ರಿಂದ ಜೂ.26 ರವರೆಗೂ ಕರ್ನಾಟಕದ ಉತ್ತರ ಒಳನಾಡಿನ ಯಾದಗಿರಿ, ವಿಜಯಪುರ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಜಲಾಶಯದ ಪೂರ್ಣ ಮಟ್ಟ 492.25 ಮೀಟರ್. ಈಗ 490.97 ಮೀಟರ್ ನೀರಿದೆ. ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಅಣೆಕಟ್ಟು ವಿಭಾಗದ ಅಧಿಕಾರಿಗಳು ತಿಳಿಸಿದರು.
ಒಂದೊಮ್ಮೆ ಬಸವಸಾಗರ ಜಲಾಶಯಕ್ಕೆ ಒಳಹರಿವು ಆರಂಭವಾದರೆ ಯಾವುದೇ ಸಂದರ್ಭದಲ್ಲಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ಆಣೆಕಟ್ಟು ಕೆಳ ಭಾಗದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಕೃಷ್ಣಾ ನದಿ ಪಾತ್ರಗಳ ಗ್ರಾಮಗಳ ಜನ, ಜಾನುವಾರುಗಳ ಸುರಕ್ಷತೆಗೆ ಎರಡು ಜಿಲ್ಲಾಡಳಿತಗಳಿಗೆ ಪ್ರವಾಹ ಮುನ್ಸೂಚನೆ ಕುರಿತು ಅಗತ್ಯ ಕ್ರಮ ವಹಿಸುವಂತೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬಸವಸಾಗರ ಜಲಾಶಯ ಸುರಪುರದಿಂದ 22 ಕಿ.ಮೀ. ಅಂತರದಲ್ಲಿದೆ. ಬಸವ ಸಾಗರ ಜಲಾಶಯವು ಯಾದಗಿರಿ, ಬಾಗಲಕೋಟೆ, ವಿಜಯಾಪುರ ಜಿಲ್ಲೆಗಳಿಗೆ ವರದಾನವಾಗಿದೆ. ಇದೊಂದು ಸುಂದರವಾದ ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರಿಗೆ ಉಲ್ಲಾಸ ನೀಡುವ ತಾಣವಾಗಿದೆ. ಸರಿಸುಮಾರು ಅರ್ಧ ಕಿ.ಮೀ. ಉದ್ದವಿರುವ ಜಲಾಶಯ ಬೇಸಿಗೆ ಕಾಲದಲ್ಲಿಯೂ ಸೂಸುವ ಆಹ್ಲಾದಕರ ತಂಗಾಳಿ ವಿಹಾರಿಗಳಿಗೆ ಪ್ರವಾಸಿಗರಿಗೆ ಹಿತಕರ ಅನುಭವ ನೀಡುವ ತಾಣವಾಗಿದೆ.
Recommended Video