ಕೈಕೊಟ್ಟ ಮಳೆ: ತರಕಾರಿ ಬೆಲೆ ದುಪ್ಪಟ್ಟು, ರಾಯಚೂರು ಮಾರುಕಟ್ಟೆಯಲ್ಲಿ ಇಂದಿನ ದರ ಎಷ್ಟು?
ರಾಯಚೂರು, ಜೂನ್ 29: ಮುಂಗಾರು ಮುನಿಸಿನಿಂದಾಗಿ ಜಿಲ್ಲೆಯಲ್ಲಿ ತರಕಾರಿ ಉತ್ಪಾದನೆ ಕಡಿಮೆಯಾಗಿದ್ದು ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳದಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಪ್ರಸಕ್ತ ವರ್ಷ ಕೃಷಿ ಚಟುವಟಿಕೆ ಆರಂಭಿಸಲು ಮಳೆರಾಯನ ಅವಕೃಪೆ ಹೆಚ್ಚಿದೆ. ಹೀಗಾಗಿ ತರಕಾರಿ, ಹಣ್ಣುಗಳ ದಾಸ್ತಾನು ನಿಧಾನವಾಗಿ ಕಡಿಮೆಯಾಗುತ್ತಿದೆ.
ಆಷಾಢ ಮಾಸಕ್ಕೂ ಮುನ್ನ ಹಲವಾರು ಸಮಾರಂಭಗಳು ನಡೆಯುತ್ತಿದ್ದು ಕಾರ್ಯಕ್ರಮಗಳಿಗೆ ಹೇರಳವಾಗಿ ತರಕಾರಿಗಳು ಮಾರಾಟವಾಗುತ್ತಿರುವುದರಿಂದ ತರಕಾರಿಗಳ ಕೊರತೆಯಾಗಿದೆ. ಹೀಗಾಗಿ ಬೆಲೆ ಜಾಸ್ತಿಯಾಗಿದ್ದು ಗ್ರಾಹಕರು ಹೆಚ್ಚು ಹಣ ಕೊಟ್ಟು ಖರೀದಿಸುವಂತಾಗಿದೆ.

ಜಿಲ್ಲೆಯ ಗ್ರಾಮೀಣ ಭಾಗ ಸೇರಿದಂತೆ ಪಕ್ಕದ ಆಂಧ್ರಪ್ರದೇಶ , ತೆಲಂಗಾಣ ರಾಜ್ಯದ ತರಕಾರಿ ರಾಯಚೂರು ಮಾರುಕಟ್ಟೆಗೆ ಪ್ರತಿ ನಿತ್ಯವೂ ಬರುತ್ತಿತ್ತು. ಆದರೆ ಮಳೆ ಕೊರತೆಯಿಂದ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಕೇವಲ ಬೋರ್ ವೆಲ್ ಹೊಂದಿದ ರೈತರು ಮಾತ್ರ ತರಕಾರಿ ಬೆಳೆದ ಫಲವಾಗಿ ಕಡಿಮೆ ಪ್ರಮಾಣದಲ್ಲಿ ತರಕಾರಿ ಬರುತ್ತಿರುವುದರಿಂದ ದರದಲ್ಲಿ ಹೆಚ್ಚಳ ಕಂಡು ಬಂದಿದೆ.
ಮಳೆ ಕೊರತೆಯಿಂದ ಪಕ್ಕದ ರಾಜ್ಯದಿಂದ ತರಕಾರಿ ಮಾರುಕಟ್ಟೆಗೆ ಸರಿಯಾಗಿ ಬಾರದೇ ಇರುವುದರಿಂದ ತರಕಾರಿ ಬೆಲೆ ಗಗನಕ್ಕೇರಿದ್ದು ಗ್ರಾಹಕರು ದುಪಟ್ಟು ದರಕ್ಕೆ ಖರೀದಿಸುವಚಿತಾಗಿದೆ. ನಗರದ ತರಕಾರಿ ಉಸ್ಮಾನಿಯ ಮಾರುಕಟ್ಟೆಯಲ್ಲಿ ಬಿನ್ಸ್ ಕೆ.ಜಿ.ಗೆ 130 ರೂಪಾಯಿ , ಹಸಿಮೆಣಿಸಿನಕಾಯಿ ಕೆ.ಜಿ.ಗೆ 80 ರೂಪಾಯಿ, ಟೊಮೊಟೊ ಕೆ.ಜಿ.ಗೆ 80 ರೂಪಾಯಿ, 50 ನಿಂಬೆಹಣ್ಣಿಗೆ 100 ರೂಪಾಯಿ , ಹೂಕೋಸು ಒಂದಕ್ಕೆ 50 ರೂಪಾಯಿ , 10ಕೆ.ಜಿ. ಚವಳಿಕಾಯಿಗೆ 250 ರೂಪಾಯಿ , ಜವಾರಿ ಚವಳಿಕಾಯಿ 10 ಕೆ.ಜಿ.ಗೆ 400 ರೂಪಾಯಿ , ಡೊಣ್ಣಗಾಯಿ ಮೆಣಿಸಿನಕಾಯಿ 10 ಕೆ.ಜಿ.ಗೆ 400 ರೂಪಾಯಿ , 5 ಕೆ.ಜಿ.ಹಿರೇಕಾಯಿಗೆ 250 ರೂಪಾಯಿ ಇದೆ. ಈರುಳ್ಳಿ , ಆಲೂಗಡ್ಡೆ ಬೆಲೆ ಯಲ್ಲಿ ಗ್ರಾಹಕರಲ್ಲಿ ನಿರಾಳತೆ ಮೂಡಿಸುವ ಬೆಲೆ ಕಾಯ್ದುಕೊಂಡಿದೆ. ಆಲೂಗಡ್ಡೆ ಕೆ.ಜಿ.ಗೆ 50 ರೂಪಾಯಿ , ಕೆ.ಜಿ.ಗೆ ಕ್ಯಾರಟ್ 60 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.

ಸೊಪ್ಪಿನ ದರ ಕೇಳಿದರೆ ಅಚ್ಚರಿಯಾಗಲಿದೆ. ಒಂದು ಕೊತ್ತಂಬರಿ ಸೊಪ್ಪಿಗೆ 20 ರೂಪಾಯಿ , 5 ಕಟ್ಟು ಪುಂಡಿಪಲ್ಲೆ ಸೊಪ್ಪಿಗೆ 25 ರೂಪಾಯಿ ಮುಟ್ಟಿದೆ. ಕಳೆದ ವಾರದ ಹಿಂದೆ 10 ರೂಪಾಯಿಗೆ 5 ಕಟ್ಟು ಮಾರುತ್ತಿದ್ದ ಮೆಂತೆ ಸೊಪ್ಪು ಒಂದು ಕಟ್ಟಿಗೆ 30 ರೂಪಾಯಿಗೆ ತಲುಪಿದೆ. ಹೀಗೆ ಪಾಲಕ್ , ಸಬ್ಬಸಗಿ ಸೊಪ್ಪುಗಳ ದರದಲ್ಲೂ ಹೆಚ್ಚಳವಾಗಿದೆ.
ಮಳೆ ಕೊರತೆಯಿಂದ ಪರದಾಡುವ ರೈತರು ತಮ್ಮ ಜಮೀನಿನಲ್ಲಿ ಅಷ್ಟಿಷ್ಟು ನೀರಿನಲ್ಲಿ ತರಕಾರಿ ಬೆಳೆದು ಮಾರುಕಟ್ಟೆಗೆ ತಂದರೂ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದ ತರಕಾರಿ ಬೆಲೆ ಏರಿಕೆಯಾಗಿದೆ. ಆದರೆ ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಾಗಿಲ್ಲ. ಬೆಳೆದ ಬೆಳೆಗಳು ಹಾಳಾಗಿ ಹೆಚ್ಚಿನ ಬೆಲೆ ಸಿಕ್ಕರೂ ಲಾಭ ಮರೀಚಿಕೆಯಾಗಿದೆ. ಇರುವ ಬೆಳೆ ರಕ್ಷಿಸಿಕೊಳ್ಳಲು ಹರ ಸಾಹಸ ಮಾಡುವಂತಾಗಿದ್ದು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹೊರೆಯಾಗುತ್ತಿದೆ.
ಕಳೆದ ವರ್ಷ ಮುಂಗಾರು ಪ್ರವೇಶದ ಆರಂಭದಲ್ಲಿ ಹೆಚ್ಚಿನ ಮಳೆಯಾಗಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ತರಕಾರಿ ಬೆಳೆದಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ತರಕಾರಿ ಕೊರತೆಯಿಂದ ದರ ಹೆಚ್ಚಾಗಿದೆ ಎಂದು ರಾಯಚೂರು ಉಸ್ಮಾನಿಯ ತರಕಾರಿ ಮಾರುಕಟ್ಟೆ ಅಧ್ಯಕ್ಷ ಎನ್.ಮಹಾವೀರ ಹೇಳಿದರು.












Click it and Unblock the Notifications