ರಾಯಚೂರಿನಲ್ಲಿ ನರೇಗಾ ಕೆಲಸಕ್ಕೆ ಕಾರ್ಮಿಕರ ಕೊರತೆ
ರಾಯಚೂರು ನವೆಂಬರ್ 19: ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಕಾರ್ಮಿಕರು ಸಿಗದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪರದಾಡುತ್ತಿದ್ದಾರೆ. ಖಾತ್ರಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಕೆಲಸ ಕೊಡಬೇಕಿರುವುದು ನಿಯಮ. ಕೆಲಸ ಕೊಡದಿದ್ದರೆ ತೊಂದರೆ ಸಿಲುಕುವ ಆತಂಕದಿಂದ ಪಿಡಿಒಗಳು ಕೂಲಿ ಕಾರ್ಮಿಕರ ಹುಡುಕಾಟಕ್ಕೆ ಮುಂದಾಗಿದ್ದಾರೆ.
ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್ಟಿಪಿಎಸ್) ಮತ್ತು ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ(ವೈಟಿಪಿಎಸ್) ವಿದ್ಯುತ್ ಘಟಕಗಳ ಕಂಪನಿಗಳಲ್ಲಿ ಹೆಚ್ಚಿನ ವೇತನಕ್ಕಾಗಿ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗುತ್ತಿದ್ದಾರೆ. ಇಲ್ಲಿನ ಕೂಲಿ ಕಾರ್ಮಿಕರಿಗೆ ಕನಿಷ್ಠ 6 ಸಾವಿರ ಸಂಬಳವು ನಿಗದಿತ ವೇಳೆಗೆ ಸಿಗುವುದರಿಂದ ಕಾರ್ಮಿಕರು ಖಾತ್ರಿ ಯೋಜನೆಯ ಕೆಲಸ ಇಷ್ಟಪಡುತ್ತಿಲ್ಲ. ಕಾರ್ಮಿಕರು ಹೆಚ್ಚಿನ ಸಂಬಳ ಸಿಗುವ ಕಡೆ ಕೆಲಸಕ್ಕೆ ತೆರಳುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ರಾಯಚೂರು ತಾಲೂಕಿನ ದೇವಸೂಗೂರು, ಡಿ.ಯದ್ಲಾಪುರ, ಕರೇಕಲ್, ಎಚ್.ತಿಮ್ಮಾಪುರ, ಚಿಕ್ಕಸೂಗೂರು, ವಡ್ಲೂರು, ಏಗನೂರು, ಗಂಜಳ್ಳಿ, ಹನುಮನದೊಡ್ಡಿ ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ನರೇಗಾ ಯೋಜನೆಯಡಿ ಕೃಷಿ ಹೊಂಡ, ಚೆಕ್ ಡ್ಯಾಂ, ಬಾವಿಯಲ್ಲಿ ಹೂಳು ತೆಗೆಯುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಯಾವುದೇ ಕೆಲಸ ಆರಂಭಿಸಲು ಕಾರ್ಮಿಕರು ಸಿಗುತ್ತಿಲ್ಲ. ಇದರಿಂದ ಅಧಿಕಾರಿಗಳನ್ನು ಸಂಕಷ್ಟಕ್ಕೆದೂಡಿದಂತಾಗಿದೆ.
ಆರ್ಟಿಪಿಎಸ್ ಮತ್ತು ವೈಟಿಪಿಎಸ್ ದಂತಹ ಕೈಗಾರಿಕಾ ಕಂಪನಿಗಳಿಂದಾಗಿ ರಾಯಚೂರು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆ ಕಾಮಗಾರಿ ನೆನೆಗುದ್ದಿಗೆ ಬಿದ್ದಿದೆ ಎನ್ನುವುದು ಸ್ಥಳೀಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
"ನರೇಗಾ ಯೋಜನೆ ಅಡಿ ಕೆಲಸ ಮಾಡುವ ಕೂಲಿಕಾರರಿಗೆ ಕೂಲಿ ಹಣ ನಿಗದಿತ ಅವದಿಗೆ ಸಿಗುವುದಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ತೊಂದರೆ ಆಗುತ್ತದೆ. ಹಾಗಾಗಿ ಉದ್ಯೋಗ ಖಾತ್ರಿಯಲ್ಲಿ ಕೂಲಿಕಾರರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆರ್ಟಿಪಿಎಸ್ ಮತ್ತು ವೈಟಿಪಿಎಸ್ ನಲ್ಲಿ ಪ್ರತಿ ತಿಂಗಳ 10 ತಾರೀಖಿನೊಳಗೆ ಸಂಬಳ ಸಿಗುತ್ತದೆ ಎಂದು ಕಾರ್ಮಿಕರಾ್ ಸುರೇಶ್ ಮತ್ತು ಮಲ್ಲಿಕಾರ್ಜುನ ಹೇಳಿದ್ದಾರೆ.
ಇನ್ನು ನರೇಗಾ ಯೋಜನೆ ಅಡಿ ಕೆಲಸ ಮಾಡುವ ಕಾರ್ಮಿಕರಿಗೆ ಹೆಚ್ಚಿನ ಮತ್ತು ನಿಗದಿತ ಸಮಯಕ್ಕೆ ಸಂಬಳ ನೀಡಿದರೆ ಕಾರ್ಮಿಕರು ಮತ್ತೆ ಕೆಲಸಕ್ಕೆ ಬರುವ ನಿರೀಕ್ಷೆ ಇದೆ. ಸದ್ಯ ಕುಟುಂಬ ನಿರ್ವಹಣೆಗಾಗಿ ರಾಯಚೂರು ತಾಲೂಕಿನ ಕೂಲಿಕಾರ್ಮಿಕರು ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್ ಟಿಪಿಎಸ್) ಮತ್ತು ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ(ವೈಟಿಪಿಎಸ್) ವಿದ್ಯುತ್ ಘಟಕಗಳ ಕಂಪನಿಗಳಿಗೆ ಕೆಲಸಕ್ಕೆ ತೆರಳುತ್ತಿದ್ದಾರೆ.