ಲೋಕ ಅದಾಲತ್: ದಾಂಪತ್ಯ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ ರಾಯಚೂರಿನ 15 ಜೋಡಿಗಳು
ರಾಯಚೂರು, ಜುಲೈ 11: ಈ ಬದುಕೇ ಹಾಗೆ. ಸಿಟ್ಟಿನ ಕೈಯಲ್ಲಿ ಬುದ್ಧಿಕೊಟ್ಟು, ಹತ್ತಾರು ವರ್ಷ ನ್ಯಾಯಾಲಯದ ಮೆಟ್ಟಿಲೇರಿ ಎದುಸಿರು ಬಿಡುತ್ತಿದ್ದು 15 ಜೋಡಿಗಳು ಇದೀಗ ಮತ್ತೆ ಒಂದಾಗುವ ಮೂಲಕ ದಾಂಪತ್ಯ ಜೀವನದ ಎರಡನೇ ಇನ್ನಿಂಗ್ಸ್ಗೆ ಮುನ್ನುಡಿ ಬರೆದಿದ್ದಾರೆ.
ಕುಟುಂಬದಲ್ಲಿನ ಸಣ್ಣಪುಟ್ಟ ಮನಸ್ತಾಪದಿಂದ ದೂರವಾಗಿ ವಿವಾಹ ವಿಚ್ಛೇದನ ಬಯಸಿ ಜಿಲ್ಲಾ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಜೋಡಿಗಳು ಲೋಕ ಆದಾಲತ್ನ ರಾಜಿ ಸಂಧಾನದ ಮೂಲಕ ಒಂದಾದರು. ನ್ಯಾಯಲಯದ ಆವರಣದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಮರಳಿ ಸಂಸಾರ ನಡೆಸಲು ನಗರದ ಜಿಲ್ಲಾ ಕೌಟುಂಬಿಕ ನ್ಯಾಯಲಯವು ವಿಶೇಷ ಕಾರ್ಯಕ್ರಮ ನಡೆಸಿ ಅನುವು ಮಾಡಿಕೊಟ್ಟಿತು.

ಪತಿ-ಪತ್ನಿ ಪರಸ್ಪರ ಮುನಿಸಿಕೊಂಡು ವಿಚ್ಛೇದನಕ್ಕಾಗಿ ನ್ಯಾಯಲಯ ಮೊರೆ ಹೋಗಿದ್ದರು. ಕೆಲವರು ನ್ಯಾಯಾಲಯದ ಕಟ್ಟೆ ಏರಿ ಅನೇಕ ವರ್ಷಗಳು ಗತಿಸಿವೆ. ರಾಯಚೂರು ಜಿಲ್ಲಾ ಕುಟುಂಬ ನ್ಯಾಯಾಲಯ ದಂಪತಿಗೆ ಕೌಟುಂಬಿಕ ಹಾಗೂ ಜೀವನ ಮೌಲ್ಯದ ಪಾಠ ಮಾಡುವ ಮೂಲಕ ದಂಪತಿ ಸಂಸಾರ ಮತ್ತೆ ಜೊತೆಯಾಗಿ ಹಳಿಯಲ್ಲಿ ಸಾಗುವಂತೆ ಮಾಡಿದೆ.
'2012ರಲ್ಲಿ ನಮ್ಮ ವಿವಾಹವಾಗಿತ್ತು. ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ ವಿಚ್ಛೇದನಕ್ಕಾಗಿ ನ್ಯಾಯಲಯಕ್ಕೆ ಮೊರೆ ಹೋಗಿದ್ದೆವು. ಇಷ್ಟು ದಿನಗಳ ಕಾಲ ನೆಮ್ಮದಿಯೊಂದಿಗೆ ಹಣ ಹಾಗೂ ಸಮಯ ವ್ಯರ್ಥ ಮಾಡಿಕೊಂಡಿದ್ದೇವೆ. ಜೀವನ ಇಷ್ಟೇ ಎನ್ನುವುದು ಅರಿವಾಗಿದೆ. ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿದ್ದೇವೆ' ಎಂದು ಮಮತಾ ಹಾಗೂ ಸೂಗೂರೇಶ ಗಬ್ಬೂರು ದಂಪತಿ ತಿಳಿಸಿದ್ದಾರೆ.

'ಕೌಟುಂಬಿಕ ಕಲಹಗಳಿಂದಾಗಿ ದೂರ ಇದ್ದೇವು. ಮಕ್ಕಳು ಮೊಮ್ಮಕ್ಕಳನ್ನು ನೋಡಿದ್ದೇವೆ. ಇಳಿ ವಯಸ್ಸಿನಲ್ಲಿ ವಿಚ್ಛೇದನದ ಗೊಡವೆಗೆ ಹೋಗದೆ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಇಬ್ಬರು ಒಂದಾಗಿ ಮುಂದಿನ ಜೀವನ ನಡೆಸಲು ನಿರ್ಧರಿಸಿದ್ದೇವೆ' ಎಂದು ಸತ್ಯನಾರಾಯಣ ದಂಪತಿ ಪ್ರತಿಕ್ರಿಯಿಸಿದ್ದಾರೆ.
'ತಿಳಿದೋ ತಿಳಿಯದೆಯೋ ಪತಿಯಿಂದ ಎಂಟು ವರ್ಷ ದೂರವಾಗಿದ್ದೆ. ವಯಸ್ಸಾಗುತ್ತಿರುವ ಹೊತ್ತಿಗೆ ನ್ಯಾಯಲಯದಲ್ಲಿ ವಿಚ್ಛೇದನಕ್ಕಾಗಿ ದಾವೆ ಹೂಡುವುದು ಸರಿಯಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ. ನ್ಯಾಯಲಯವೂ ನಮಗೆ ತಿಳುವಳಿಕೆ ನೀಡುವ ಕೆಲಸ ಮಾಡಿದೆ. ಉತ್ತಮವಾಗಿ ಬದುಕಲು ತೀರ್ಮಾನಿಸಿದ್ದೇವೆ' ಎಂದು ಶಾಂತಮ್ಮ ಸತ್ಯನಾರಾಯಣ ಹೇಳಿದರು.
ಪ್ರಧಾನ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಾರುತಿ ಬಗಾಡೆ ಮಾತನಾಡಿ 'ಎರಡನೇ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 80 ಸಾವಿರ ಪ್ರಕರಣಗಳು ಇತ್ಯರ್ಥವಾಗುವ ಸಾಧ್ಯತೆ ಇದೆ' ಎಂದು ತಿಳಿಸಿದರು.












Click it and Unblock the Notifications