ಮಕ್ಕಳಲ್ಲಿ ಅಪೌಷ್ಟಿಕತೆ ತಡೆಯಲು ರಾಯಚೂರು ಜಿಲ್ಲೆಯಲ್ಲಿ ಸಿರಿಧಾನ್ಯ ಲಡ್ಡು ಯೋಜನೆ
ರಾಯಚೂರು ಸೆಪ್ಟೆಂಬರ್, 19: ಅಪೌಷ್ಟಿಕ ಮಕ್ಕಳಗೆ ಕೆಲವೇ ದಿನಗಳಲ್ಲಿ ಪೌಷ್ಟಿಕಯುಕ್ತ ಸಿರಿಧಾನ್ಯದಿಂದ ತಯಾರಿಸಿದ ಲಡ್ಡು ಲಭ್ಯವಾಗಲಿದೆ. ಹೀಗೆ ವಿನೂತನ ಪ್ರಯೋಗಕ್ಕೆ ಮುಂದಾಗಿರುವ ರಾಯಚೂರು ಜಿಲ್ಲಾಡಳಿತ, ಇಡೀ ರಾಜ್ಯದ ಗಮನ ನಸೆಳೆದಿದೆ.
ರಾಜ್ಯ ಸರ್ಕಾರ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ, ಅಪೌಷ್ಟಿಕತೆ ಸಂಪೂರ್ಣ ನಿವಾರಣೆ ಆಗದೇ ಈಗಲೂ ಸವಾಲಾಗಿ ಪರಿಣಮಿಸಿದೆ. ರಾಯಚೂರು ಜಿಲ್ಲೆಯಲ್ಲಿರುವ ಮಕ್ಕಳಲ್ಲಿ ನಾನಾ ಕಾರಣಗಳಿಂದ ಅಪೌಷ್ಟಿಕತೆ ಸಮಸ್ಯೆ ಕಾಡುತ್ತಿದೆ. ಹಿಂದುಳಿದ ಪ್ರದೇಶ ಆಗಿರುವ ಕಾರಣದಿಂದ ಆರೋಗ್ಯ ಸಂಬಂಧಿ ಜಾಗೃತಿಯ ಕೊರತೆ ಎದ್ದು ಕಾಣುತ್ತಿದೆ. ತಾಯಂದಿರ ಗರ್ಭಾವಸ್ಥೆ ಸೇರಿದಂತೆ ಸಾಮಾಜಿಕ ಕಾಳಜಿ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಅಪೌಷ್ಟಿಕತೆ ಹೆಚ್ಚಳಕ್ಕೆ ಕಾರಣವಾಗಿವೆ. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಅಂಗನವಾಡಿ ಕೇಂದ್ರಗಳ ಮೂಲಕ ಅಪೌಷ್ಟಿಕ ಮಕ್ಕಳಿಗೆ ಸಿರಿಧಾನ್ಯಗಳಿಂದ ತಯಾರಿಸಿದ ಲಡ್ಡು ವಿತರಿಸಲು ಮುಂದಾಗಿದೆ.
ಜಿಲ್ಲಾಡಳಿತದ ಚಿತ್ತ ಮಕ್ಕಳ ಆರೋಗ್ಯದ ಕಡೆ
ಜಿಲ್ಲೆಯಲ್ಲಿ 35 ಸಾವಿರ ಮಕ್ಕಳು ತೀವ್ರ ಹಾಗೂ ಸಾಮಾನ್ಯ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಆಗಮಿಸುವ ಮಕ್ಕಳು, ತಾಯಂದಿರಿಗೆ ಆರೋಗ್ಯ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ. ಕಡಿಮೆ ತೂಕದ ಮಕ್ಕಳ ನಿರಂತರ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮ ಜಾರಿಯಲ್ಲಿದೆ. ಇದರಿಂದ ಮಕ್ಕಳ ತೂಕ ಮತ್ತು ಆರೋಗ್ಯದಲ್ಲಿ ಸುಧಾರಣೆ ಆಗಿದೆ. ಪ್ರಮುಖವಾಗಿ ಅಂಗನವಾಡಿ ಕೇಂದ್ರಗಳ ಸಿಬ್ಬಂದಿ ನಮ್ಮ ಬಳಿಗೆ ಬರುವ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಚಿಕಿತ್ಸೆ ಕೊಡಿಸುವುದು, ಪೌಷ್ಟಿಕ ಆಹಾರ ವಿತರಿಸುವುದರಿಂದ ಮಕ್ಕಳಿಗೆ ತುಂಬಾ ಸಹಾಯಕವಾಗುತ್ತಿದೆ ಎಂದು ಜಿಲ್ಲಾಡಳಿತ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

15 ದಿನಕ್ಕೊಮ್ಮೆ ಪೌಷ್ಟಿಕ ಆಹಾರ ವಿತರಣೆ:
ತೀವ್ರ ಹಾಗೂ ಸಾಮಾನ್ಯ ಅಪೌಷ್ಟಿಕತೆ ಎದುರಿಸುವ ಮಕ್ಕಳಿಗೆ ಹೊಸದಾಗಿ ಇನ್ನೂ ಹೆಚ್ಚು ಪೌಷ್ಟಿಕ ಆಹಾರ ನೀಡಲು ಜಿಲ್ಲಾಡಳಿತ ಸಿದ್ಧವಾಗಿದೆ. ಮಕ್ಕಳಿಗೆ ಈಗಾಗಲೇ ಮೊಟ್ಟೆ ಜೊತೆಗೆ ಪ್ರತಿ 15 ದಿನಕ್ಕೊಮ್ಮೆ ಪೌಷ್ಟಿಕ ಆಹಾರ, ಪೌಷ್ಟಿಕಾಂಶದಿಂದ ಕೂಡಿದ ಸಿರಿಧಾನ್ಯ ಬಳಸಿ ತಯಾರಿಸಿದ ಲಡ್ಡು ನೀಡಲು ಯೋಜಿಸಲಾಗಿದೆ. ಮುಂದಿನ ಒಂದು ವರ್ಷ ಈ ಕಾರ್ಯಕ್ರಮ ಜಾರಿಯಲ್ಲಿ ಇರಲಿದೆ. ಪ್ರತಿ ನಾಲ್ಕರಿಂದ ಐದು ತಿಂಗಳಿಗೆ 2.50 ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಅಗತ್ಯ ಸಿದ್ಧತೆಯನ್ನಯ ಕೈಗೊಳ್ಳಲಾಗಿದೆ. ಗುಣಮಟ್ಟದ ಲಡ್ಡು ಪೂರೈಕೆ ಮೇಲೆ ಜಿಲ್ಲಾಡಳಿತದ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿರುವ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೆ ಸಿರಿಧಾನ್ಯಗಳಿಂದ ತಯಾರಿಸಿದ ಲಡ್ಡು ವಿತರಣೆಗೆ ಯೋಜಿಸಲಾಗಿದೆ. ಈ ಬಗ್ಗೆ ಇತ್ತೀಚೆಗೆ ಸಭೆ ಕರೆದು ಚರ್ಚಿಸಲಾಗಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯ್ಕ ಅವರು ತಿಳಿಸಿದರು.












Click it and Unblock the Notifications