ರಾಯಚೂರು: ಶತಮಾನ ಪೂರೈಸಿದ ಆಂಧ್ರ ಗಡಿಭಾಗದ ಕನ್ನಡ ಮಾಧ್ಯಮ ಶಾಲೆ
ರಾಯಚೂರು, ನವೆಂಬರ್, 01: ಆಂಧ್ರಪ್ರದೇಶದ ನದಿಚಾಗಿ ಗ್ರಾಮದಲ್ಲಿರುವ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಶತಮಾನ ಪೂರೈಸಿದೆ. ಹಾಗೆಯೇ ಕನ್ನಡ ಮಾಧ್ಯಮ ಉನ್ನತ ಪ್ರೌಢಶಾಲೆ ಐವತ್ತು ವರ್ಷಗಳನ್ನು ಪೂರೈಸಿರುವುದು ಅಲ್ಲಿನ ಜನರಿಗೆ ಕನ್ನಡ ನಾಡು, ನುಡಿಯ ಬಗ್ಗೆ ಇರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಈ ಕನ್ನಡ ಮಾಧ್ಯಮ ಶಾಲೆ ಮಾನ್ವಿ ತಾಲೂಕು ಚೀಕಲಪರ್ವಿ ಗ್ರಾಮದ ತುಂಗಭದ್ರಾ ನದಿ ದಡದ ಸಮೀಪದಲ್ಲಿ ಇದೆ. ರಾಜ್ಯದಲ್ಲಿ ಅನೇಕ ಕಡೆ ವಿದ್ಯಾರ್ಥಿಗಳ ಕೊರತೆಯಿಂದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಆದರೆ ಆಂಧ್ರ ಪ್ರದೇಶದ ಗಡಿಭಾಗದಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯವ ಮೂಲಕ ಕನ್ನಡ ಭಾಷಾ ಪ್ರೇಮವನ್ನು ಮೆರೆಯುತ್ತಿದ್ದಾರೆ.
ನೈಸರ್ಗಿಕ ಕೃಷಿಯಲ್ಲಿನ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಚಂದ್ರಶೇಖರ್
ಶಾಲೆಯಲ್ಲಿರುವ ಒಟ್ಟು ಮಕ್ಕಳ ಸಂಖ್ಯೆ
ನದಿಚಾಗಿಯ ಕನ್ನಡ ಮಾಧ್ಯಮ ಶಾಲೆಯನ್ನು 1913ರಲ್ಲಿ ಬ್ರಿಟೀಷ್ ಅಧಿಕಾರಿಗಳು ಬಳ್ಳಾರಿ ಶಿಕ್ಷಣಾಧಿಕಾರಿಗಳಿಂದ ಮಂಜೂರು ಮಾಡಿಸಿದ್ದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಒಟ್ಟು 227 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ ಎಂದು ಮುಖ್ಯ ಶಿಕ್ಷಕ ಗುರುರಾಜ ಶೆಟ್ಟಿ ಅವರು ತಿಳಿಸಿದ್ದಾರೆ. ಇನ್ನು ಐವತ್ತು ವರ್ಷಗಳನ್ನು ಪೂರೈಸಿರುವ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 6ರಿಂದ 10ನೇ ತರಗತಿವರೆಗೆ 263 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಎಸ್.ಲಕ್ಷ್ಮಿಕಾಂತನಾರಾಯಣ ಮಾಹಿತಿ ನೀಡಿದ್ದಾರೆ.
ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲು ಮನವಿ
ಆಂಧ್ರ ಪ್ರದೇಶದ ಕೌತಳಂ ಮಂಡಲದ ವ್ಯಾಪ್ತಿಯ ಗ್ರಾಮಗಳಾದ ನದಿಚಾಗಿ, ಮೈಲಾಪೂರ, ವಲ್ಲೂರು, ಅಗಸಲದಿನ್ನಿ, ಬಾಪೂರಂ, ರೌಡೂರು, ಉಪ್ಪರಹಾಳು, ಕುಂಟ್ನಾಳ್, ಬದನೇಹಾಳ್, ಕಾಮಾವರಂ, ಕೌತಳಂ ಗ್ರಾಮಗಳಲ್ಲಿನ ಒಟ್ಟು 11 ಜಿಲ್ಲಾ ಪರಿಷತ್ ಮಂಡಲ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಗಳು ಇವೆ. ಇಲ್ಲಿ 1,886 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಹಾಗೂ 8 ಜಿಲ್ಲಾ ಪರಿಷತ್ ಕನ್ನಡ ಉನ್ನತ ಪ್ರೌಢಶಾಲೆಗಳಲ್ಲಿ 1,754 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರವು ಆಂಧ್ರದ ಗಡಿ ಭಾಗದಲ್ಲಿನ ಕನ್ನಡ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸುತ್ತಿದೆ. ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಬೋಧನೆಗೆ ಅಗತ್ಯ ಶಿಕ್ಷಕರ ನೇಮಕ ಸೇರಿದಂತೆ ಮೂಲಸೌಕರ್ಯವನ್ನು ಕಲ್ಪಿಸಬೇಕು. ಇಲ್ಲಿನ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕೈಗೊಳ್ಳಲು ಅವಕಾಶವನ್ನು ಕಲ್ಪಿಸಬೇಕು. ಕರ್ನಾಟಕ ರಾಜ್ಯದಲ್ಲಿನ ವಸತಿ ನಿಲಯಗಳಲ್ಲಿ ಪ್ರವೇಶಕ್ಕೆ ಅವಕಾಶ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ವಿಶೇಷ ಮೀಸಲಾತಿ ನೀಡಬೇಕು ಎಂದು ಆಂಧ್ರಪ್ರದೇಶದ ಗಡಿಭಾಗದ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ, ಸಾವಿತ್ರಿ ಪೂಜಾರ್ಗೆ ಸನ್ಮಾನ