ಶಾಲೆ ಆರಂಭ; ಎತ್ತಿನ ಬಂಡಿಯಲ್ಲಿ ಬಂದ ಮಕ್ಕಳು
ರಾಯಚೂರು, ಮೇ 16: ರಾಯಚೂರು ಜಿಲ್ಲೆಯ ಕೊರವಿಹಾಳ ಗ್ರಾಮದಲ್ಲಿ ಎತ್ತಿನ ಬಂಡಿ ಮೂಲಕ ಮಕ್ಕಳು ಶಾಲೆಗೆ ಆಗಮಿಸಿದರು. ಸರಸ್ವತಿ ಭಾವಚಿತ್ರದ ಮೆರವಣಿಗೆ ನಡೆಸಿ, ಡೊಳ್ಳು ಕುಣಿತ ಮತ್ತು ವಾದ್ಯ ಮೇಳದೊಂದಿಗೆ ಮಕ್ಕಳನ್ನು ಸ್ವಾಗತಿಸಲಾಯಿತು.
ಶಕ್ತಿನಗರದ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ದಯಾನಂದ ಆಂಗ್ಲೋ ವೇದಿಕೆ (ಡಿಎವಿ ಪಬ್ಲಿಕ್ ಸ್ಕೂಲ್) ಶಾಲೆಯಲ್ಲಿ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದ ದಿನ ಮಕ್ಕಳಿಗೆ ಸಿಹಿ ನೀಡಲಾಯಿತು.
ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ತಳಿರು ತೋರಣಗಳು, ವರ್ಣರಂಜಿತ ಬಲೂನುಗಳು ಹಾಗೂ ಆಕರ್ಷಕ ರಂಗೋಲಿಗಳ ಮೂಲಕ ಶಾಲಾ ಆವರಣವನ್ನು ಸಜ್ಜುಗೊಳಿಸಿದ್ದರು. ಹೂವಿನ ಪಕಳೆಗಳ ಸಿಂಚನ ಹಾಗೂ ಸಿಹಿ ವಿತರಣೆಯ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.
ಕೋವಿಡ್ ಪರಿಸ್ಥಿತಿ ನಂತರ ಶಾಲೆಗಳ ಚಟುವಟಿಕೆಗಳಿಂದ ಹೊರಗುಳಿದ ಮಕ್ಕಳು ಮೊಬೈಲ್ಗಳ ವ್ಯಸನಕ್ಕೆ ಗುರಿಯಾಗಿರುವ ಅನೇಕ ಉದಾಹರಣೆಗಳಿವೆ. ಇದು ಆತಂಕಕಾರಿ ಬೆಳವಣಿಗೆ, ಇಂತಹ ಚಟುವಟಿಕೆಗಳಿಂದ ಮಕ್ಕಳನ್ನು ದೂರವಿರಿಸುವುದು ಆಯಾ ಪಾಲಕರ ಜವಾಬ್ದಾರಿಯಾಗಿದೆ.
ಆರ್ ಟಿಪಿಎಸ್ ವಿದ್ಯುಕ್ತವಾಗಿ ಉದ್ಘಾಟನೆ; ಸಿವಿಲ್ ವಿಭಾಗದ ಮುಖ್ಯ ಎಂಜಿನಿಯರ್ ಹಾಗೂ ದಯಾನಂದ ಆಂಗ್ಲೋ ವೇದಿಕೆ (ಡಿಎವಿ ಪಬ್ಲಿಕ್ ಸ್ಕೂಲ್) ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷರು ಪ್ರಭುಸ್ವಾಮಿ, ಉಭಯ ಶಾಲಾ ಕಟ್ಟಡಗಳಲ್ಲಿ ಸಾಂಕೇತಿಕವಾಗಿ ರಿಬ್ಬನ್ ಕತ್ತರಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟನೆ ಮಾಡಿ, ಶಾಲಾ ಕಾರ್ಯಕಲಾಪಗಳು ನಡೆಯುವಂತಾಗಲಿ ಎಂದು ಹಾರೈಸಿದರು.
ಯರಮರಸ ಗ್ರಾಮದ ಆದರ್ಶ ವಿದ್ಯಾಲಯ ಶಾಲೆಯು ಅತ್ಯಂತ ಸಡಗರ ಸಂಭ್ರಮ, ಉತ್ಸಾಹದಿಂದ ಆರಂಭಗೊಂಡಿತು. ಶಾಲೆಯನ್ನು ತಳಿರು, ತೊರಣ, ಹೂಗಳಿಂದ ಅಲಂಕಾರಮಾಡಲಾಗಿದ್ದು. ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡುವದರ ಮೂಲಕ ಶಾಲಾ ಅಭಿವೃದ್ಧಿ ಮತ್ತು ಮೆಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ತಾಯಣ್ಣ ಕಲಮಲ ಸ್ವಾಗತಿಸಿದರು.