ಜಾಗೃತಿ ಮೂಡಿಸಿದರೂ ಪ್ರಯೋಜನವಿಲ್ಲ; ‘ಫ್ರೂಟ್ಸ್’ ನೋಂದಣಿಗೆ ರಾಯಚೂರು ರೈತರ ನಿರಾಸಕ್ತಿ!
ರಾಯಚೂರು ಡಿಸೆಂಬರ್ 26: ರಾಜ್ಯದಲ್ಲಿ ಮುಂಗಾರು, ಹಿಂಗಾರು ಮಳೆ ಕೊರತೆಯಿಂದ ತೀವ್ರ ನಷ್ಟ ಅನುಭವಿಸಿದ ರೈತರಿಗೆ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರೂಟ್ಸ್) ನೋಂದಣಿ ಜಾರಿ ಮಾಡಲಾಗಿದೆ. ಆದರೆ, ರೈತರು ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ.
ರೈತರ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಬೆಳೆ ಪರಿಹಾರ ಹಾಗೂ ನಾನಾ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆಗಾಗಿ ಸರಕಾರ ಜಾರಿ ಮಾಡಿದ ಫ್ರೂಟ್ಸ್ ನೋಂದಣಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ನೋಂದಣಿಗಾಗಿ ನಿಗದಿಪಡಿಸಿದ ದಿನಾಂಕ ವಿಸ್ತರಣೆ ಮಾಡುತ್ತಾ ಬಂದರೂ ಪ್ರಗತಿ ಕಂಡಿಲ್ಲ.

ಜಿಲ್ಲೆಯಲ್ಲಿ ಸುಮಾರು 4,70,655 ಜನ ರೈತರು ಫ್ರೂಟ್ಸ್ ನೋಂದಣಿ ಮಾಡಿದ್ದು, ಈ ಪೈಕಿ ರಾಯಚೂರು 93,600, ಮಾನ್ವಿ 49,846, ಸಿರವಾರ 43,781, ದೇವದುರ್ಗ 74,342, ಲಿಂಗಸುಗೂರು 60,154, ಮಸ್ಕಿ 56,375, ಸಿಂಧನೂರು 92,557 ರೈತರು ನೋಂದಣಿ ಮಾಡಿಸಿಕೊಂಡಿದ್ದು, ಜಿಲ್ಲೆ ರಾಜ್ಯದಲ್ಲಿ 22ನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಶೇ.69 ರಷ್ಟು ನೋಂದಣಿಯಾಗಿದೆ. ಅಧಿಕಾರಿಗಳು ಹಾಗೂ ಸಚಿವರು ಫ್ರೂಟ್ಸ್ ನೋಂದಣಿಗಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ನೋಂದಣಿಯಾಗುತ್ತಿಲ್ಲ. ಸರಕಾರವು ಫ್ರೂಟ್ಸ್ ಪೋರ್ಟಲ್ ಆರಂಭಿಸಿದ್ದು, ರೈತರು ತಮ್ಮ ಭೂಮಿ, ಬೆಳೆದ ಬೆಳೆಗಳು ಹಾಗೂ ಭೂಮಿಯ ಸ್ಥಳಕ್ಕೆ ಸಂಬಂಧಿಸಿದಂತೆ ಹವಾಮಾನ ಮುನ್ಸೂಚನೆಯನ್ನು ಸಂಘಟನೆ ಹಾಗೂ ಪರಿಶೀಲನೆ ಉದ್ದೇಶಕ್ಕಾಗಿ ಈ ವ್ಯವಸ್ಥೆ ಜಾರಿಗೆ ತಂದಿದೆ.
ಅರ್ಜಿಗಳ ಪರಿಶೀಲನೆ, ಮಂಜೂರಾತಿ, ಪಾವತಿ ಪ್ರಕ್ರಿಯೆ ಒಳಗೊಳ್ಳದೇ ಅರ್ಹತೆ ಆಧಾರಿತ ಪ್ರಯೋಜನೆ ವಿತರಣೆಗೆ ಫ್ರೂಟ್ಸ್ ವ್ಯವಸ್ಥೆ ಸುಗಮಗೊಳಿಸುವ ಉದ್ದೇಶ ಸರಕಾರ ಹೊಂದಿದೆ. ಜಿಲ್ಲೆ ಸೇರಿ ರಾಜ್ಯಾದ್ಯಂತ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲು ಹಿಂದೇಟು ಹಾಕುತ್ತಿದ್ದು, ಅದರಂತೆ ಕೃಷಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸುತ್ತಿದ್ದಾರೆ. ರಾಜ್ಯದಲ್ಲಿ ಮುಂದುವರಿದ ಜಿಲ್ಲೆಗಳಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿರೈತರು ನೋಂದಣಿ ಮಾಡಿಲ್ಲ.

ಫ್ರೂಟ್ಸ್ನಲ್ಲಿ ರೈತರು ಬೆಳೆಯುವ ಪ್ರದೇಶವನ್ನು ಪ್ಲಾಟ್ಗಳನ್ನಾಗಿ ಪರಿಗಣಿಸಲಾಗುತ್ತದೆ. ಒಬ್ಬ ರೈತನ ಭೂಮಿಯು ಎರಡು ಅಥವಾ ಮೂರು ಸರ್ವೆ ನಂಬರ್ ಹೊಂದಿರುತ್ತದೆ. ಈ ಕಾರಣದಿಂದ ಪ್ಲಾಟ್ಗಳೆಂದು ಸರಕಾರ ಪರಿಗಣಿಸುತ್ತಿದೆ. ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರೂಟ್ಸ್)ನಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಒಟ್ಟು 2,18,00,104 ಪ್ಲಾಟ್ಗಳನ್ನು ಜಿಲ್ಲಾಡಳಿತಗಳು ಗುರುತಿಸಿವೆ. ಅದರಲ್ಲಿ1,51,84,875 ಪ್ಲಾಟ್ಗಳನ್ನು ಫ್ರೂಟ್ಸ್ ವ್ಯವಸ್ಥೆಯಲ್ಲಿ ನೋಂದಣಿ ಮಾಡಲಾಗಿದೆ.
66,15,229 ಪ್ಲಾಟ್ಗಳನ್ನು ಫ್ರೂಟ್ಸ್ನಲ್ಲಿ ನೋಂದಣಿ ಮಾಡುವುದು ಬಾಕಿ ಉಳಿದಿದೆ. ಇನ್ನೂ 1,09,011 ಪ್ಲಾಟ್ಗಳನ್ನು ಗುರುತಿಸಲಾಗಿದೆ. 38,126 ಪ್ಲಾಟ್ಗಳ ವಿವರಗಳು ಅನುಮೋದನೆಗೆ ಬಾಕಿ ಉಳಿದಿವೆ. ರಾಜ್ಯದಲ್ಲಿಒಟ್ಟು ಶೇ. 69.66ರಷ್ಟು ಪ್ಲಾಟ್ಗಳು ಫ್ರೂಟ್ಸ್ ವ್ಯವಸ್ಥೆಯಲ್ಲಿ ನೋಂದಣಿಯಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಯಚೂರು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ದೇವಿಕಾ ಆರ್, ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿರುವುದರಿಂದ ಬೆಳೆ ಪರಿಹಾರ ಸೇರಿ ರೈತರಿಗೆ ಸರಕಾರದ ಸೌಲಭ್ಯಗಳು ದೊರೆಯಲು ಫ್ರೂಟ್ಸ್ ತಂತ್ರಾಂಶ ಜಾರಿ ಮಾಡಿದ್ದು, ನಮ್ಮ ಇಲಾಖೆ ಮೂಲಕ ಶೇ.70ರಷ್ಟು ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.












Click it and Unblock the Notifications