ದೇವರ ಹೆಸರಲ್ಲಿ ಶಾಲೆಯ ಜಾಗ ಕಬಳಿಸುವ ಯತ್ನ, ಶೆಡ್ ನಿರ್ಮಿಸಿ ಶಿವಲಿಂಗ ಇಟ್ಟ ಭೂಗಳ್ಳರು
ರಾಯಚೂರು, ಆಗಸ್ಟ್ 14: ರಾಯಚೂರು ಇಲ್ಲಿನ ಎಲ್ಬಿಎಸ್ ನಗರದ ಸರ್ಕಾರಿ ಪ್ರೌಢಶಾಲಾ ನಿರ್ಮಾಣಕ್ಕಾಗಿ ರಾಯಚೂರು ನಗರಾಭಿವೃಧ್ಧಿ ಪ್ರಾಧಿಕಾರ( ಆರ್ಡಿಎ) ನೀಡಿದ ನಿವೇಶನವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ . ದೇವರ ಹೆಸರಲ್ಲಿ ಶಾಲೆಯ ಜಾಗ ಕಬಳಿಸುವ ಪ್ರಯತ್ನ ನಡೆದಿರುವುದು ಶಾಲೆಯ ಆಡಳಿತ ಮಂಡಳಿಗೆ ತಲೆನೋವಾಗಿದೆ.
ಎಲ್ಬಿಎಸ್ ನಗರದ ಅಲ್ಲಮಪ್ರಭು ಕಾಲೋನಿಯ ಸರ್ಕಾರಿ ಪ್ರೌಢ ಶಾಲೆ ನಿರ್ಮಾಣಕ್ಕೆ ಅದೇ ಬಡಾವಣೆಯ ಚಂದ್ರಬಂಡಾ ರಸ್ತೆಯಲ್ಲಿರುವ ವಿಶ್ವನಾಥ ಕಾಲೋನಿಯಲ್ಲಿ ಸರ್ವೆ ನಂಬರ್ 384/1 5 ಎಕರೆ ಸಿ.ಎ ಸೈಟ್ ನ್ನು 2017ರ ಎಪ್ರಿಲ್ 20ರಂದು ಆರ್ ಡಿಎ ವತಿಯಿಂದ ₹6,61,343 ಮೊತ್ತ ಪಾವತಿಸಿ ಶಾಲೆಯ ಮುಖ್ಯೋಪಾಧ್ಯಾಯ ಮಕ್ಬೂಲ್ ಅಹ್ಮದ್ ಅವರ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿದೆ.

ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದ ಕೊರ್ಮರಾವ್ ಅವರು ಶಿಕ್ಷಣದ ಮೇಲಿನ ಕಾಳಜಿಯಿಂದ 2017ರಲ್ಲಿಯೇ ಸಿ.ಎ.ಸೈಟ್ ಮಂಜೂರು ಮಾಡಿದರು. ಭೂಗಳ್ಳರು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ನಂತರ ಅಲ್ಲಿ ಶಿವಲಿಂಗ ಇಟ್ಟು ಒತ್ತುವರಿ ಮಾಡಿಕೊಳ್ಳಲು ಹುನ್ನಾರ ನಡೆಸಿದ್ದಾರೆ. ಶಾಲೆಯ ಆಡಳಿತ ಮಂಡಳಿಯವರ ಗಮನಕ್ಕೆ ಬಂದು ಪ್ರಶ್ನೆ ಮಾಡಿದರೆ ಗುಡಿಯ ಜಾಗ ಎಂದು ಕ್ಯಾತೆ ತೆಗೆಯುತ್ತಿದ್ದಾರೆ. ನಿವೇಶನಕ್ಕೆ ಬೇಲಿ ಹಾಕಲು ಸಹ ಭೂಗಳ್ಳರು ಅಡ್ಡಿಪಡಿಸುತ್ತಿದ್ದಾರೆ.
ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಾಲೆ ನಿರ್ಮಾಣಕ್ಕೆ ಮುಂದಾಗಬೇಕು ಇಲ್ಲದಿದ್ದರೆ ಶಾಲೆಯ ಎಲ್ಲಾ ಮಕ್ಕಳ ಪಾಲಕರೊಂದಿಗೆ ಧರಣಿ ಕೂರಲಾಗುವುದು ಎಂದು ಮಕ್ಕಳ ಪಾಲಕ ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನರಸಿಂಹಲು ಎಚ್ಚರಿಸಿದ್ದಾರೆ.
ಸದ್ಯ ಚಂದ್ರಬಂಡಾ ಮಾರ್ಗದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಹಿಳಾ ಪದವಿಪೂರ್ವ ಕಾಲೇಜಿನ ಕಟ್ಟಡದಲ್ಲಿ ಅಲ್ಲಮಪ್ರಭು ಕಾಲೋನಿಯ ಶಾಲೆಯ ಪ್ರೌಢಶಾಲೆ ನಡೆಯುತ್ತಿದೆ. ಈ ಶಾಲೆಯಲ್ಲಿ ಪ್ರಸ್ತುತ 8ನೇ ತರಗತಿಯಲ್ಲಿ 86, 9ನೇ ತರಗತಿ 60 ಹಾಗೂ 10ನೇ ತರಗತಿಯ 47 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕೂಲಿ ಮಾಡುವವರ ಮಕ್ಕಳು ಹಾಗೂ ಅಲ್ಪಸಂಖ್ಯಾತರ ಮಕ್ಕಳೇ ಹೆಚ್ಚಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆ ಅದೆಷ್ಟು ಬೇಗ ಶಾಲಾ ಕಟ್ಟಡದ ನಿರ್ಮಾಣ ಮಾಡಬೇಕು ಎಂದು ಶಿಕ್ಷಣ ಪ್ರೇಮಿ ಸಾಧಿಕ್ ಪಾಶಾ ಹೇಳುತ್ತಾರೆ

ಶಾಲೆಯ ಜಾಗ ಒತ್ತುವರಿ ಮಾಡಿರುವುದು ಅಪರಾಧ. ಈಗಾಗಲೇ ಪೊಲಿಸ್ ಇಲಾಖೆಗೆ ದೂರು ಕೊಡಲಾಗಿದೆ. ಒಂದು ವಾರದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಅತಿಕ್ರಮಣ ತೆರವಿಗೆ ಪ್ರಯತ್ನಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ಹೇಳಿದರು.
ಇನ್ನು ಈ ಬಗ್ಗೆ ಶಾಲೆಯ ಸಮಗ್ರ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಶಿಕ್ಷಣ ಇಲಾಖೆಯಿಂದ ಮಾಹಿತಿ ಪಡೆದು ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ ಹೇಳಿದರು.












Click it and Unblock the Notifications