ಭಾರತೀಯ ಪೊಲೀಸರಿಗೆ ಅವಮಾನ ಮಾಡಿದರೆ ರಾಹುಲ್?
ರಾಯಚೂರು, ಫೆಬ್ರವರಿ 12 : ಐಪಿಎಸ್ ಅಂದ್ರೆ ಏನು? ಯಾವುದೇ ಭಾರತೀಯನ ಪ್ರಕಾರ ಇಂಡಿಯನ್ ಪೊಲೀಸ್ ಸರ್ವೀಸ್. ಆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಪ್ರಕಾರ, ಐಪಿಎಸ್ ಅಂದ್ರೆ 'ಇಂಡಿಯನ್ ಪಕೋಡಾ ಸರ್ವೀಸ್'!
ಪಕೋಡಾ ಮಾರುವವರನ್ನು ಪ್ರಧಾನಿ ನರೇಂದ್ರ ಮೋದಿ ಅವಮಾನ ಮಾಡಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಟೀಕಿಸುವ ರಾಹುಲ್ ಗಾಂಧಿ ಅವರು, ರಾಯಚೂರು ಬಳಿ ಟೀ ಅಂಗಡಿಯೊಂದರಲ್ಲಿ ಮಿರ್ಚಿ, ಬಜ್ಜಿ, ಮಿಸಳಭಾಜಿ ಸವಿಯುತ್ತಲೇ ಐಪಿಎಸ್ ಗೆ ಹೊಸ ಅರ್ಥ ನೀಡಿದ್ದಾರೆ.
ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಡಿಕೆ ಶಿವಕುಮಾರ್, ಕೆಸಿ ವೇಣುಗೋಪಾಲ್ ಮುಂತಾದವರೊಂದಿಗೆ ಮಿರ್ಚಿ ಮೆಲ್ಲುತ್ತಿದ್ದ ರಾಹುಲ್ ಅವರಿಗೆ ಆಹೊತ್ತಿನಲ್ಲಿ ಹೊಸ ಐಡಿಯಾ ಹೊಳೆದಿದೆ. ಅದನ್ನು ಖರ್ಗೆ ಅವರ ಬಳಿ ಹೇಳುತ್ತ, ಇದು ಐಪಿಎಸ್ ಇಂಡಿಯನ್ ಪಕೋಡಾ ಸರ್ವೀಸ್ ಎಂದು ತಮಾಷೆ ಮಾಡಿದರು.

ಆದರೆ, ರಾಹುಲ್ ಗಾಂಧಿಯವರು ಮಾಡಿರುವ ಈ ತಮಾಷೆಯನ್ನು ಕರ್ನಾಟಕದ ಪೊಲೀಸರು ತಮಾಷೆಯಾಗಿ ಪರಿಗಣಿಸಿಲ್ಲ. ಗಂಬೀರವಾಗಿಯೇ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಐಪಿಎಸ್ ಅನ್ನು ಇಂಡಿಯನ್ ಪಕೋಡಾ ಸರ್ವೀಸ್ ಎಂದು ಕರೆದು ಭಾರತೀಯ ಪೊಲೀಸರನ್ನು ರಾಹುಲ್ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಅವರು, ಭಾರತೀಯ ಪೊಲೀಸರ ಬಗ್ಗೆ ರಾಹುಲ್ ಗಾಂಧಿಯವರು ಅಷ್ಟು ಹಗುರವಾಗಿ ಮಾತನಾಡಬಾರದಿತ್ತು ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಆದರೆ, ಬಿಜೆಪಿ ನಾಯಕರು ಯಾಕೋ ಇದರ ಬಗ್ಗೆ ಅಷ್ಟು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ.
ಸೋಷಿಯಲ್ ಮೀಡಿಯಾದಲ್ಲಿಯೂ ಕೂಡ ರಾಹುಲ್ ಅವರ ತಮಾಷೆಯ ಮಾತಿಗೆ ಕಿಡಿ ಕಾರಲಾಗುತ್ತಿದೆ. 65 ವರ್ಷ ಭಾರತವನ್ನು ಆಳಿದ ಪಕ್ಷ ಇಂಥ ನಾಯಕರನ್ನು ಉತ್ಪಾದಿಸಿದ್ದು ನಿಜಕ್ಕೂ ನಾಚಿಕೆಗೇಡಿನದು. ಇಂಥವರು ಭಾರತದ ಭವಿಷ್ಯವನ್ನೇ ಹಾಳು ಮಾಡುತ್ತಾರೆ ಎಂದು ಅಜಿತ್ ಕಾರಿಗಾರ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications