ಬ್ರೇಕಿಂಗ್ ನ್ಯೂಸ್: ರಾಯಚೂರಲ್ಲಿ ಮಹಾ ನಂಟು ಉಳ್ಳವರಿಗೆ ಕೊರೊನಾ ಅಂಟು!
ರಾಯಚೂರು, ಮೇ.18: ನೊವೆಲ್ ಕೊರೊನಾ ವೈರಸ್ ಸೋಂಕು ರಾಜ್ಯದ ಹಸಿರು ವಲಯಗಳಿಗೂ ಲಗ್ಗೆ ಇಡುತ್ತಿದೆ. ತವರಿಗೆ ವಾಪಸ್ ಆಗುತ್ತಿರುವುದು ವಲಸೆ ಕಾರ್ಮಿಕರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದ್ದು ಆತಂಕ ಹೆಚ್ಚಿಸಿದೆ.
ಹಸಿರು ವಲಯದಲ್ಲಿ ಇರುವ ರಾಯಚೂರಿಗೂ ಕೊರೊನಾ ವೈರಸ್ ಸೋಂಕು ಲಗ್ಗೆ ಇಡುವ ಲಕ್ಷಣಗಳು ಗೋಚರಿಸುತ್ತಿವೆ. ಮಹಾರಾಷ್ಟ್ರದ ಮುಂಬೈನಿಂದ ರಾಯಚೂರಿಗೆ ಆಗಮಿಸಿದ ಆರು ಮಂದಿ ವಲಸೆ ಕಾರ್ಮಿಕರಲ್ಲಿ ಕೊರೊನಾ ವೈರಸ್ ಸೋಂಕಿತ ಲಕ್ಷಣಗಳು ಕಾಣಿಸಿಕೊಂಡಿವೆ.
ಕೊರೊನಾ ವೈರಸ್ ಸೋಂಕು ಶಂಕೆ ಹಿನ್ನೆಲೆ ಆರು ಮಂದಿ ವಲಸೆ ಕಾರ್ಮಿಕರ ರಕ್ತ ಹಾಗೂ ಗಂಟಲು ಮಾದರಿಯನ್ನು ಸಂಗ್ರಹಿಸಿದ್ದು, ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಡಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ ಆರು ಮಂದಿ ವಲಸೆ ಕಾರ್ಮಿಕರನ್ನು ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ.

ಮಹಾ ನಂಟು ಉಳ್ಳವರಿಗೆ ಕೊರೊನಾ ಅಂಟು:
ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. ವಾಣಿಜ್ಯ ನಗರಿ ಮುಂಬೈನಿಂದ ಹಿಂತಿರುಗಿದ ಬಹುತೇಕ ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಭಾನುವಾರವಷ್ಟೇ ಮುಂಬೈ ನಂಟು ಹೊಂದಿದ್ದ ಮಂಡ್ಯ 22 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು.
ರಾಯಚೂರಿನಲ್ಲಿ ಮೇ.31ರವೆಗೂ ನಿಷೇಧಾಜ್ಞೆ:
ರಾಯಚೂರಿನ ಜನರಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುವ ಲಕ್ಷಣಗಳು ಕಂಡು ಬಂದ ಹಿನ್ನೆಲೆ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದೆ. ಮೇ.31ರವರೆಗೂ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.












Click it and Unblock the Notifications