ಪುಣೆಯಲ್ಲಿ ಭೂ ಕುಸಿತ : 15 ಮಂದಿ ಸಾವು
ಪುಣೆ, ಜು.30: ಪುಣೆ ಬಳಿ ನೈಸರ್ಗಿಕ ವಿಕೋಪಕ್ಕೆ 15 ಮಂದಿ ಬಲಿಯಾಗಿದ್ದಾರೆ. ಅಂಬೇಗಾವ್ ತಾಲೂಕಿನ ಮಾಳಿಣ ಗ್ರಾಮದ 45 ಮನೆಗಳ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ 15 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ಇನ್ನೂ 150ಕ್ಕೂ ಹೆಚ್ಚು ಗ್ರಾಮಸ್ಥರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾರಆಷ್ಟ್ರದ ವಿವಿಧೆಡೆ ಭಾರಿ ಮಳೆಯಿಂದಾಗಿ ಗುಡ್ಡ ಕುಸಿದು ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಸುಮಾರು 80 ಜನರುಳ್ಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(NDRF) ಆಗಮಿಸಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಪುಣೆಯ ವಿವಿಧ ಭಾಗಗಳಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಈ ನಡುವೆ ಥಾಣೆ ಜಿಲ್ಲೆಯಲ್ಲಿ 50 ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಮಳೆಯಿಂದಾಗಿ ಗ್ರಾಮಗಳಿಗೆ ಸಂಪರ್ಕ ಒದಗಿಸುವ ಸೇತುವೆ ಕುಸಿದು ಬಿದ್ದಿದೆ. ಸೂರ್ಯ ನದಿ ಪ್ರಾಂತ್ಯದ ಪಾಲ್ಘಾರ್ ತಾಲೂಕಿನ 150 ಗ್ರಾಮಗಳು ಮಳೆಯ ಭೀತಿಯಲ್ಲಿವೆ. ದಾಮಿನಿ ನದಿ ಅಣೆಕಟ್ಟಿನಿಂದ ಸುಮಾರು 4,500 ಕ್ಯೂಸೆಕ್ಸ್ ನೀರನ್ನು ಬಿಡಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾದ್ ಚಂದ್ರಸೇನ್ ಪವಾರ್ ಹೇಳಿದ್ದಾರೆ.
ಮೂರ್ಬಾದ್ ತಾಲೂಕಿನ ಕಾಪ್ರಿ ಅಣೆಕಟ್ಟು ಮುಳುಗಿದೆ. ಈ ಭಾಗದ 40 ಗ್ರಾಮಗಳು ಆತಂಕದಲ್ಲಿವೆ. ಮುಂಬೈ ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದ್ದು, ಮಾಸ್ವಾನ್ ಸೇತುವೆ ಅರ್ಧ ಮುಳುಗಿದೆ. ನಾಸಿಕ್ ಬಳಿಯ ಕಸಾರಾ ಘಾಟ್, ಮಾಲ್ಶೇಜ್ ಘಾಟ್ ಕೂಡಾ ಮಳೆ ಹೊಡೆತಕ್ಕೆ ಸಿಲುಕಿವೆ.












Click it and Unblock the Notifications