ಬ್ಯಾಂಕ್ ಆಫ್ ಮಹಾರಾಷ್ಟ್ರದ ಎಂಡಿ ಸೇರಿ ಆರು ಮಂದಿ ಬಂಧನ
ಪುಣೆ, ಜೂನ್ 21: ಭಾರತೀಯ ರಿಸರ್ವ್ ಬ್ಯಾಂಕ್ನ ಮಾರ್ಗದರ್ಶಿಗಳನ್ನು ಉಲ್ಲಂಘಿಸಿ ಮತ್ತು ನಿರ್ದಿಷ್ಟ ಪ್ರಕ್ರಿಯೆ ಪಾಲಿಸದೆ ಡಿಎಸ್ಕೆ ಡೆವಲಪರ್ಸ್ ಲಿಮಿಟೆಡ್ (ಡಿಎಸ್ಕೆಡಿಎಲ್) ಕಂಪೆನಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಿದ್ದಕ್ಕಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸೇರಿದಂತೆ ಆರು ಮಂದಿಯನ್ನು ಪುಣೆಯ ಆರ್ಥಿಕ ಅಪರಾಧಗಳ ಘಟಕದ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಎಂಡಿ, ಸಿಇಒ ರವೀಂದ್ರ ಮರಾಠೆ, ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಗುಪ್ತಾ ಮತ್ತು ಬ್ಯಾಂಕ್ನ ಇಬ್ಬರು ಅಧಿಕಾರಿಗಳು ಬಂಧಿತರಲ್ಲಿ ಸೇರಿದ್ದಾರೆ.
ಪುಣೆಯ ಡೆವಲಪರ್ ಡಿ.ಎಸ್. ಕುಲಕರ್ಣಿ ಮತ್ತು ಅವರ ಸಮೂಹ ಕಂಪೆನಿಗಳಿಂದ ನಡೆದ 2,043 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯ ಭಾಗವಾಗಿ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುಶೀಲ್ ಮುನ್ಹೋಟ್, ವಲಯ ವ್ಯವಸ್ಥಾಪಕ ನಿತ್ಯಾನಂದ ದೇಶಪಾಂಡೆ, ಡಿಎಸ್ ಕುಲಕರ್ಣಿ ಅವರ ಲೆಕ್ಕಪರಿಶೋಧಕ ಸುನೀಲ್ ಘಟಪಾಂಡೆ ಮತ್ತು ಕಂಪೆನಿಯ ಮುಖ್ಯ ಎಂಜಿನಿಯರ್ ರಾಜೀವ್ ನೆವಾಸ್ಕರ್ ಈ ಪ್ರಕರಣದಲ್ಲಿ ಬಂಧಿತರಾಗಿರುವ ಇತರೆ ಆರೋಪಿಗಳು.
ಪುಣೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಏಕೈಕ ರಾಷ್ಟ್ರೀಕೃತ ಬ್ಯಾಂಕ್ ಎನಿಸಿಕೊಂಡಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ, ಡಿಎಸ್ಕೆಡಿಎಲ್ ಕಂಪೆನಿಗೆ ಸೂಕ್ತ ಲೆಕ್ಕಪತ್ರಗಳಿಲ್ಲದೆ 50 ಕೋಟಿ ಸಾಲ ನೀಡಿತ್ತು.
ಇದಲ್ಲದೆ ಇತರೆ ಐದು ರಾಷ್ಟ್ರೀಕೃತ ಬ್ಯಾಂಕ್ಗಳು 2016ರಲ್ಲಿ ಕಂಪೆನಿಯ 'ಡ್ರೀಮ್ ಸಿಟಿ' ಮೆಗಾ ಹೌಸಿಂಗ್ ಪ್ರಾಜೆಕ್ಟ್ಗಾಗಿ ಸುಮಾರು 600 ಕೋಟಿ ರೂ ಸಾಲ ನೀಡಿದ್ದವು.
ಬ್ಯಾಂಕ್ ಆಫ್ ಮಹಾರಾಷ್ಟ್ರ 100 ಕೋಟಿ ನೀಡಲು ಒಪ್ಪಿಕೊಂಡಿತ್ತು. 2016ರಲ್ಲಿ ಆರ್ಬಿಐ ನಿಯಮಾವಳಿಗಳನ್ನು ಉಲ್ಲಂಘಿಸಿ ಅಧಿಕಾರಿಗಳು 50 ಕೋಟಿ ಮಂಜೂರು ಮಾಡಿದ್ದರು.
ಬಂಧಿತರನ್ನು ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅವರನ್ನು ಜೂನ್ 27ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.












Click it and Unblock the Notifications