ಬಿಹಾರ: ವಿಪಕ್ಷ ನಾಯಕ ತೇಜಸ್ವಿ ಯಾದವ್ ಮೇಲೆ ಚಪ್ಪಲಿ ಎಸೆತ
ಪಾಟ್ನ, ಅ. 20: ಬಿಹಾರದ ವಿಪಕ್ಷ ನಾಯಕ, ಆರ್ ಜೆ ಡಿ ಮುಖಂಡ ತೇಜಸ್ವಿ ಯಾದವ್ ಅವರ ಮೇಲೆ ಚಪ್ಪಲಿ ಎಸೆದಿರುವ ಘಟನೆ ನಡೆದಿದೆ. ಪಾಟ್ನಾದಿಂದ 125 ಕಿ.ಮೀ ದೂರದಲ್ಲಿರುವ ಔರಂಗಾಬಾದ್ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಒಟ್ಟು ಎರಡು ಚಪ್ಪಲಿ ಎಸೆಯಲಾಗಿದ್ದು, ಒಂದು ಸಂಪೂರ್ಣವಾಗಿ ಗುರಿ ತಪ್ಪಿದ್ದರೆ, ಮತ್ತೊಂದು ತೇಜಸ್ವಿ ಕೈ ತಲುಪಿರುವುದು ವಿಡಿಯೋ ಕ್ಲಿಪ್ಪಿಂಗ್ ನಲ್ಲಿ ಸ್ಪಷ್ಟವಾಗುತ್ತದೆ.
ಲೋಕನೀತಿ-ಸಿಎಸ್ಡಿಎಸ್ ಅಭಿಮತ: ಬಿಹಾರಕ್ಕೆ ನಿತೀಶ್ ಸಿಎಂ
ಔರಂಗಬಾದಿನ ಕುಟುಂಬ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಪಕ್ಷದ ಕಾರ್ಯಕರ್ತರ ಜಯಘೋಷದ ನಡುವೆ ವೇದಿಕೆ ಮೇಲೆ ಆಸನರಾದ ತಕ್ಷಣವೇ ಚಪ್ಪಲಿ ಎಸೆತ ಘಟನೆ ನಡೆದಿದೆ.
ಆದರೆ, ಈ ಘಟನೆಯಿಂದ ವಿಚಲಿತರಾಗದ 30 ವರ್ಷ ವಯಸ್ಸಿನ ತೇಜಸ್ವಿಯಾದವ್ ಅವರು, ತಮ್ಮ ಭಾಷಣದಲ್ಲೂ ಈ ಬಗ್ಗೆ ಪ್ರಸ್ತಾಪಿಸಲಿಲ್ಲ, ನಿತೀಶ್ ಸರ್ಕಾರದ ವಿರುದ್ಧ ಭಾಷಣದುದ್ದಕ್ಕೂ ಕಿಡಿಕಾರಿದರು.
ಕಳೆದ 15 ವರ್ಷಗಳಿಂದ ಬಿಹಾರಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿಲ್ಲವೆಂದು ಜನರು ಕೋಪಗೊಂಡಿದ್ದಾರೆ. ಬಡತನ, ನಿರುದ್ಯೋಗ ಸಮಸ್ಯೆ ಇಂದಿಗೂ ಕಾಡುತ್ತಿದೆ. ನಿತೀಶ್ ಅವರ ಡಬ್ಬಲ್ ಇಂಜಿನ್ ಸರ್ಕಾರ ನಿಲ್ಲಿಸಬೇಕಿದೆ ಎಂದರು.
243 ವಿಧಾನಸಭಾ ಕ್ಷೇತ್ರಗಳ ಪೈಕಿ 144 ಕ್ಷೇತ್ರಗಳಲ್ಲಿ ಆರ್ ಜೆ ಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. 243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
"ಉದ್ಯೋಗದ ಆಶ್ವಾಸನೆ ನೀಡುವುದೇ ಅನೇಕರಿಗೆ ಹೊಸ ಉದ್ಯೋಗ"
ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.