ಬೆಂಗಳೂರು: ಕೈಗೆಟುಕದ ಹೊಟೇಲ್ ಊಟ, ಇನ್ನು ದೋಸೆ, ಇಡ್ಲಿ ಬೆಲೆ 80, 150 ರೂ
ಬೆಂಗಳೂರು: ರಾಜ್ಯ ಸರ್ಕಾರ ಕಾರ್ಮಿಕರ ಕನಿಷ್ಠ ವೇತನವನ್ನು ಶೇ. 60ರಷ್ಟು ಹೆಚ್ಚಿಸುವ ನಿರ್ಧಾರವು ಹೋಟೆಲ್ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಇದರ ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೋಟೆಲ್ ಮಾಲೀಕರು ಎಚ್ಚರಿಸಿದ್ದಾರೆ. ಇದರ ಜೊತೆಗೆ ಇತ್ತೀಚಿನ ಇಂಧನ ಬೆಲೆ ಏರಿಕೆ ಕೂಡ ಪರೋಕ್ಷವಾಗಿ ಹೋಟೆಲ್ ತಿಂಡಿಗಳ ದರ ಹೆಚ್ಚಳಕ್ಕೆ ಕಾರಣವಾಗಲಿದೆ. ಮುಂಬರುವ ದಿನಗಳಲ್ಲಿ ಒಂದು ಪ್ಲೇಟ್ ಇಡ್ಲಿಯ ಬೆಲೆ 80 ರೂಪಾಯಿ ಮುಟ್ಟಬಹುದು ಮತ್ತು ದೋಸೆಗೆ ಬರೋಬ್ಬರಿ 150 ರೂಪಾಯಿ ತಗುಲಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
"ಕನಿಷ್ಠ ವೇತನವು ಶೇ. 60ರಷ್ಟು ಹೆಚ್ಚಾಗಿದೆ. ಹೀಗಾಗಿ, ಅನಿವಾರ್ಯವಾಗಿ ನಾವು ಆಹಾರ ಪದಾರ್ಥಗಳ ಬೆಲೆಗಳನ್ನು ಹೆಚ್ಚಿಸಬೇಕಾಗುತ್ತದೆ. ಪ್ರಸ್ತುತ 50 ರೂಪಾಯಿ ಇರುವ ಒಂದು ಪ್ಲೇಟ್ ಇಡ್ಲಿಯ ದರ 80 ರೂ.ಗೆ ಏರಿಕೆಯಾಗಬಹುದು. ಅದೇ ರೀತಿ, ಈಗ 80 ರಿಂದ 90 ರೂಪಾಯಿ ಆಸುಪಾಸಿನಲ್ಲಿರುವ ಮಸಾಲೆ ದೋಸೆಯ ಬೆಲೆ 150 ರೂ.ಗೆ ತಲುಪಬಹುದು" ಎಂದು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ತಿಳಿಸಿದ್ದಾರೆ.

ಹೋಟೆಲ್ ಮೆನುವಿನಲ್ಲಿರುವ ಬಹುತೇಕ ಎಲ್ಲಾ ಪದಾರ್ಥಗಳ ಬೆಲೆಗಳು ದುಬಾರಿಯಾಗುವ ಎಚ್ಚರಿಕೆಯನ್ನು ಮಾಲೀಕರು ನೀಡಿದ್ದಾರೆ. ಪ್ರಸ್ತುತ 150 ರಿಂದ 200 ರೂಪಾಯಿ ಇರುವ ಸಸ್ಯಾಹಾರಿ ಊಟದ ದರ 250 ರಿಂದ 300 ರೂಪಾಯಿಗೆ ಹೆಚ್ಚಾಗಬಹುದು ಮತ್ತು 300-350 ರೂ. ಇರುವ ಬಿರಿಯಾನಿ ದರವು 500 ರೂಪಾಯಿಗೆ ತಲುಪುವ ಸಾಧ್ಯತೆ ಇದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ನಿರಂತರ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಉದ್ಯಮಕ್ಕೆ ಈಗ ಕನಿಷ್ಠ ವೇತನ ಹೆಚ್ಚಳವು ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ ಎಂದು ಶೆಟ್ಟಿ ವಿವರಿಸಿದ್ದಾರೆ.
"ಹೋಟೆಲ್ ಕಾರ್ಯಾಚರಣೆಯ ವೆಚ್ಚಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿವೆ. ಇದು ನಿರ್ದಿಷ್ಟವಾಗಿ ಹೆಚ್ಚುತ್ತಿರುವ ವೆಚ್ಚಗಳೊಂದಿಗೆ ಈಗಾಗಲೇ ಹೆಣಗಾಡುತ್ತಿರುವ ಸಣ್ಣ ಹೋಟೆಲ್ಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕೆಲವೇ ತಿಂಗಳುಗಳಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 1,884 ರೂ.ಗಳಿಂದ 3,152 ರೂ.ಗೆ ಹೆಚ್ಚಿಸಲಾಗಿದೆ. ದಿನಸಿ ವಸ್ತುಗಳು, ವಿದ್ಯುತ್ ದರಗಳು, ಕಸದ ಸೆಸ್ ಸೇರಿದಂತೆ ಎಲ್ಲವೂ ದುಬಾರಿಯಾಗಿದೆ" ಎಂದು ಅವರು ತಮ್ಮ ಅಳಲು ತೋಡಿಕೊಂಡರು. ಕನಿಷ್ಠ ವೇತನ ಪರಿಷ್ಕರಣೆಯನ್ನು ಜಾರಿಗೆ ತರುವಾಗ ಹೋಟೆಲ್ ಉದ್ಯಮವನ್ನು ಪ್ರತ್ಯೇಕವಾಗಿ ವರ್ಗೀಕರಿಸುವಂತೆ ಆತಿಥ್ಯ ಉದ್ಯಮವು ಈ ಹಿಂದೆ ಸರ್ಕಾರಕ್ಕೆ ಮನವಿ ಮಾಡಿತ್ತು.
ಬೆಲೆ ಏರಿಕೆ ಅನಿವಾರ್ಯ
ಆಯ್ದ ಪದಾರ್ಥಗಳ ಬೆಲೆಗಳನ್ನು ಹೆಚ್ಚಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಬೆಂಗಳೂರಿನ ಹೋಟೆಲ್ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ದರ್ಶಿನಿ ಮಾಲೀಕರಾದ ಅನೀಶ್ ಶಾಸ್ತ್ರಿ ಈ ಬಗ್ಗೆ ಪ್ರತಿಕ್ರಿಯಿಸಿ, "ಇದು ನಮಗೆ ಎರಡು ಪಟ್ಟು ಪೆಟ್ಟು ನೀಡಿದೆ. ನಾವು ಕಾರ್ಮಿಕರ ವೇತನವನ್ನು ಹೆಚ್ಚಿಸಬೇಕು ಹಾಗೂ ಹೆಚ್ಚುವರಿ ಸಾರಿಗೆ ವೆಚ್ಚಗಳನ್ನು ಭರಿಸಬೇಕು. ನಾವು ದೋಸೆ, ಪೂರಿ ಮತ್ತು ವಿವಿಧ ಖಾದ್ಯಗಳನ್ನು ಒಳಗೊಂಡಿರುವ ಊಟದಂತಹ ಎಣ್ಣೆ-ಆಧಾರಿತ ಪದಾರ್ಥಗಳ ಬೆಲೆಯನ್ನು ಹೆಚ್ಚಿಸದ ಹೊರತು ಈ ಎಲ್ಲ ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಿಲ್ಲ" ಎಂದಿದ್ದಾರೆ.
ಕಲ್ಯಾಣ್ ನಗರದ ವೇ ಕೆಫೆ ಮಾಲೀಕ ರೋಹಿತ್ ಶಂಕರ್ ಮಾತನಾಡಿ, "ನಾನು ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒದಗಿಸುವ ಸಣ್ಣ ಹೋಟೆಲ್ ನಡೆಸುತ್ತಿದ್ದೇನೆ. ನನ್ನ ಬಳಿ ಇಬ್ಬರು ಕೆಲಸಗಾರರಿದ್ದರು, ಆದರೆ ಒಬ್ಬನಿಗೆ ಸಂಬಳ ನೀಡಲು ಸಾಧ್ಯವಾಗದ ಕಾರಣ ಆತನನ್ನು ಕೆಲಸದಿಂದ ತೆಗೆಯಬೇಕಾಯಿತು. ಹೀಗಾಗಿ ಈಗ ಒಬ್ಬನೇ ಕೆಲಸಗಾರನಿದ್ದಾನೆ. ಜೊತೆಗೆ, ನಾನು ಕೆಲವು ತಿಂಡಿಗಳ ಬೆಲೆಯನ್ನು ಪ್ರತಿ ಪ್ಲೇಟ್ಗೆ 20 ರೂಪಾಯಿಗಳಷ್ಟು ಹೆಚ್ಚಿಸಿದ್ದೇನೆ" ಎಂದು ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು.












Click it and Unblock the Notifications