ಮುಂದಿನ ಸಿಎಂ ನೀವೇನಾ? ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ನಗುವಿನಲ್ಲೇ ಉತ್ತರ ಕೊಟ್ಟ ಡಿ.ಕೆ.ಶಿವಕುಮಾರ್
ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಪುನರ್ರಚನೆ, ಅಧಿಕಾರ ಹಂಚಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ 'ಮುಖ್ಯಮಂತ್ರಿ ಬದಲಾವಣೆ'ಯ ಹೈಡ್ರಾಮಾ ಈಗ ದೇಶದ ರಾಜಧಾನಿ ನವದೆಹಲಿಯ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಇಂದು ಹೈಕಮಾಂಡ್ ನಾಯಕರ ಜೊತೆ ಹೈವೋಲ್ಟೇಜ್ ಮೀಟಿಂಗ್ ನಡೆಯಲಿದೆ. ಇಂದು ಸಂಜೆಯೊಳಗೆ ರಾಜ್ಯ ರಾಜಕೀಯದ ದಿಕ್ಸೂಚಿ ಬದಲಾಗುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿವೆ.
ಆ ಒಂದು ನಗುವಿನಲ್ಲಿದೆ 'ಅಧಿಕಾರ'ದ ರಹಸ್ಯ
ಇವೆಲ್ಲದರ ನಡುವೆ, ದೆಹಲಿಗೆ ಕಾಲಿಡುತ್ತಿದ್ದಂತೆ ಮಾಧ್ಯಮಗಳು ಡಿ.ಕೆ.ಶಿವಕುಮಾರ್ ಅವರನ್ನು ಸುತ್ತುವರೆದು ನೇರ ಪ್ರಶ್ನೆಯೊಂದನ್ನು ಕೇಳಿದವು. "ಸರ್, ಕರ್ನಾಟಕದ ಮುಂದಿನ ಸಿಎಂ ನೀವೇನಾ? ಲೀಡರ್ಶಿಪ್ ಚೇಂಜ್ ಫಿಕ್ಸ್ ಆಯಿತಾ?" ಎಂದು ಕೇಳಿದಾಗ ಡಿಕೆಶಿ ಕೊಟ್ಟ ರಿಯಾಕ್ಷನ್ ಈಗ ಸಂಚಲನ ಮೂಡಿಸಿದೆ. ಇನ್ನು ಮಾಧ್ಯಮಗಳ ಪ್ರಶ್ನೆಗೆ ಹೌದು ಎಂದಾಗಲಿ ಅಥವಾ ಇಲ್ಲ ಎಂದಾಗಲಿ ಯಾವುದೇ ಮೌಖಿಕ ಉತ್ತರ ನೀಡದ ಡಿಸಿಎಂ ಡಿ.ಕೆ.ಶಿವಕುಮಾರ್, ನಿಗೂಢವಾದ ನಗೆ ಬೀರುತ್ತಾ ಮುಂದೆ ಸಾಗಿದರು.

ರಾಜಕೀಯದಲ್ಲಿ ಒಮ್ಮೊಮ್ಮೆ ಮಾತುಗಳಿಗಿಂತ ಮೌನ ಮತ್ತು ನಗು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಸದ್ಯ ಡಿಕೆಶಿ ಅವರ ಈ ನಗು ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಹೈಕಮಾಂಡ್ ಮಟ್ಟದಲ್ಲಿ ಈಗಾಗಲೇ ಡಿಕೆಶಿ ಅವರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆಯೇ? ಅದಕ್ಕಾಗಿಯೇ ಈ ಆತ್ಮವಿಶ್ವಾಸದ ನಗುವೇ? ಎಂಬ ಚರ್ಚೆಗಳು ಜೋರಾಗಿವೆ.
ಇಂದು ದೆಹಲಿಯಲ್ಲಿ ಹಣೆಬರಹ ನಿರ್ಧಾರ?
ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಇಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರತ್ಯೇಕ ಮತ್ತು ಜಂಟಿ ಸಭೆಗಳು ನಡೆಯಲಿವೆ. ಎರಡೂವರೆ ವರ್ಷಗಳ ಅಧಿಕಾರಾವಧಿಯ ಒಪ್ಪಂದದ ಅಸಲಿ ಕಥೆ ಏನು? ಯಾರಿಗೆ ಕೋಕ್ ಸಿಗಲಿದೆ? ಯಾರಿಗೆ ಸಚಿವ ಸ್ಥಾನ ಒಲಿಯಲಿದೆ? ಎನ್ನುವುದಕ್ಕೇ ಇಂದೇ ತೆರೆಬೀಳುವ ಸಾಧ್ಯತೆ ಇದೆ. ದೆಹಲಿಯ ರಾಜಕೀಯ ಚದುರಂಗದಾಟದಲ್ಲಿ ಯಾರ ಕೈ ಮೇಲಾಗಲಿದೆ? ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಮುಂದುವರಿಯುತ್ತಾರಾ ಅಥವಾ ಡಿಕೆಶಿ ಅವರ ಆ ನಗು ನಿಜವಾಗಿ 'ಮುಖ್ಯಮಂತ್ರಿ' ಪಟ್ಟ ಅಲಂಕರಿಸುವ ಮುನ್ಸೂಚನೆಯಾ? ಇಡೀ ಕರ್ನಾಟಕ ರಾಜಕಾರಣದ ಕಣ್ಣು ಸದ್ಯ ದೆಹಲಿಯತ್ತ ನೆಟ್ಟಿದೆ.
#WATCH | Karnataka Deputy CM DK Shivakumar, who is in Delhi to meet top Congress leaders today, responds with a smile and silence on being asked if he is going to be the next CM amid leadership change speculations pic.twitter.com/UbJjyFvPBu
— ANI (@ANI) May 26, 2026
ದೆಹಲಿಯ ಇಂದಿರಾ ಭವನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಅವರ ಸಮ್ಮುಖದಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರಮುಖವಾಗಿ ಮೂರು ಸೂತ್ರಗಳ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಿ, ಹೊಸಬರಿಗೆ ಸಚಿವ ಸ್ಥಾನ ಅವಕಾಶ ನೀಡುವುದು. ಅಥವಾ ಮೊದಲೇ ಒಪ್ಪಿಕೊಂಡಿದ್ದ 'ಅರ್ಧಾವಧಿ ಅಧಿಕಾರ ಹಂಚಿಕೆ' ಸೂತ್ರದಂತೆ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಪಟ್ಟ ನೀಡುವುದು ಈಗ ಹೈಕಮಾಂಡ್ ಮುಂದೆ ಇರುವ ಆಯ್ಕೆಗಳು ಎನ್ನಲಾಗಿದೆ.
ರಾಜ್ಯದಲ್ಲಿ ಕೇವಲ ಈ ಇಬ್ಬರು ನಾಯಕರು ಮಾತ್ರವಲ್ಲದೆ, ಅವರ ಜೊತೆಗೆ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಕೂಡ ಈಗಾಗಲೇ ದೆಹಲಿ ತಲುಪಿದ್ದಾರೆ. ಸಂಪುಟ ಪುನಾರಚನೆಯಾದರೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಹೈಕಮಾಂಡ್ ನಾಯಕರ ಮನೆ ಬಾಗಿಲಿಗೆ ಶಾಸಕರು ಸರಣಿ ಭೇಟಿ ನೀಡುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಪ್ರಕಾರ, ಈ ಭೇಟಿಗೆ ಕೇವಲ ನಾಯಕತ್ವ ಬದಲಾವಣೆ ಮಾತ್ರ ಕಾರಣವಲ್ಲ. ರಾಜ್ಯದಲ್ಲಿ ಸದ್ಯದಲ್ಲೇ ನಡೆಯಲಿರುವ ರಾಜ್ಯಸಭೆ ಚುನಾವಣೆ ಬಗ್ಗೆಯೂ ಚರ್ಚೆಯಾಗಲಿದೆ. ಕಾಂಗ್ರೆಸ್ ಹೈಕಮಾಂಡ್ ಮೂಲಗಳ ಪ್ರಕಾರ, ಕರ್ನಾಟಕದ ನಾಯಕತ್ವ ಗೊಂದಲ ಮತ್ತು ಸಿಎಂ ಕುರ್ಚಿಯ ಭವಿಷ್ಯದ ಕುರಿತು ಮುಂದಿನ 2-3 ದಿನಗಳಲ್ಲಿ ದೆಹಲಿಯಿಂದ ಅಧಿಕೃತ ಮತ್ತು ಅಂತಿಮ ನಿರ್ಧಾರ ಹೊರಬೀಳಲಿದೆ. ಇದರಿಂದಾಗಿ ಇಂದು ನಡೆಯಲಿರುವ ಹೈಕಮಾಂಡ್ ಸಭೆಯು ಕರ್ನಾಟಕದ ರಾಜಕೀಯದಲ್ಲಿ ಮಹತ್ವದ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.













Click it and Unblock the Notifications