ಬಿಹಾರದಲ್ಲಿ ಪಕ್ಷ ಬದಲಿಸಿ ನಿತೀಶ್ ಕುಮಾರ್ ಜನರನ್ನು ವಂಚಿಸಿದ್ದಾರೆ; ಅಮಿತ್ ಶಾ
ಪಾಟ್ನಾ, ಸೆ. 23: ಬಿಹಾರ ಚುನಾವಣೆಯಲ್ಲಿ ಮತದಾರರು ಬಿಜೆಪಿ-ಜೆಡಿ(ಯು) ಮೈತ್ರಿಯನ್ನು ಆಯ್ಕೆ ಮಾಡಿದ ನಂತರ ನಿತೀಶ್ ಕುಮಾರ್ ಪಕ್ಷ ಬದಲಿಸುವ ಮೂಲಕ ಜನರನ್ನು ವಂಚಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ.
ಬಿಹಾರ ರಾಜ್ಯದಲ್ಲಿ ಬಿಜೆಪಿ-ಜೆಡಿ(ಯು) ಮೈತ್ರಿ ಮುರಿದು ಬಿದ್ದ ನಂತರ ತಮ್ಮ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಮಾತನಾಡಿದ್ದಾರೆ. ನಿತೀಶ್ ಕುಮಾರ್ ಅವರು ಇತ್ತೀಚೆಗೆ ಬಿಜೆಪಿ ಜೊತೆಗಿನ ಮೈತ್ರಿ ಮುರಿದು, ಮಹಾಮೈತ್ರಿಕೂಟಕ್ಕೆ ಮರಳಿದ್ದಾರೆ. ಬಳಿಕ ಎಂಟನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಆರು ವರ್ಷಗಳ ನಂತರ ಸೋನಿಯಾ ಗಾಂಧಿ, ನಿತೀಶ್ ಕುಮಾರ್, ಲಾಲು ಯಾದವ್ ಭೇಟಿ ನಿಗದಿ
"ಇಲ್ಲಿನ ಬೃಹತ್ ಜನಸಮೂಹವು ನಿತೀಶ್ ಕುಮಾರ್ ಮತ್ತು ಲಾಲು ಯಾದವ್ಗೆ ಎಚ್ಚರಿಕೆಯಾಗಿದೆ" ಎಂದು ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ಪಕ್ಷ ಬದಲಿಸಿ ಜನರಿಗೆ ಮೋಸ ಮಾಡಿದ್ದಾರೆ ನಿತೀಶ್ ಕುಮಾರ್!
"ಬಿಹಾರದಲ್ಲಿ ಜಂಗಲ್ ರಾಜ್ ಬೆದರಿಕೆಯು ಮತ್ತೆ ಬಂದಿದೆ. ನಾನು ಜನರಿಗೆ ಹೇಳಲು ಬಯಸುತ್ತೇನೆ. ಈ ನಿತೀಶ್ ಕುಮಾರ್ - ಲಾಲು ಪ್ರಸಾದ್ ಯಾದವ್ ಜೋಡಿ ಈಗ ಬಹಿರಂಗವಾಗಿದೆ. ಮೂರು ವರ್ಷಗಳ ಆಡಳಿತದಲ್ಲಿ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಎಡಪಂಥೀಯ ಗುಂಪುಗಳ ಭಯೋತ್ಪಾದನೆಯನ್ನು ತೊಡೆದುಹಾಕಲು ಬಿಜೆಪಿ ಸಹಾಯ ಮಾಡಿದೆ" ಎಂದು ಅಮಿತ್ ಶಾ ಹೇಳಿದರು.
2024 ರ ರಾಷ್ಟ್ರೀಯ ಚುನಾವಣೆಗೆ ಬಿಜೆಪಿ ಸಿದ್ಧತೆ
2024 ರ ರಾಷ್ಟ್ರೀಯ ಚುನಾವಣೆಯನ್ನು ಉಲ್ಲೇಖಿಸಿರುವ ಅಮಿತ್ ಶಾ, "ನಿತೀಶ್ ಕುಮಾರ್ ಪಕ್ಷಗಳನ್ನು ಬದಲಾಯಿಸುವ ಮೂಲಕ ಪ್ರಧಾನಿಯಾಗಬಹುದೇ?" ಎಂದು ಪ್ರಶ್ನಿಸಿದ್ದಾರೆ.
2024 ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರುದ್ಧ ಪ್ರಬಲವಾದ ಪೈಪೋಟೆ ನೀಡಲು ಪ್ರತಿಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನದಲ್ಲಿರುವ ನಿತೀಶ್ ಕುಮಾರ್, ತಾವು ಪ್ರಧಾನಿ ಹುದ್ದೆಯ ಸ್ಪರ್ಧೆಯ ಭಾಗವಾಗಲು ಪರಿಗಣಿಸುತ್ತಿಲ್ಲ ಎಂದು ಪದೇ ಪದೇ ಹೇಳಿದ್ದಾರೆ.
ಇನ್ನು, ನಿತೀಶ್ ಕುಮಾರ್ ಅವರು ಶೀಘ್ರದಲ್ಲೇ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ನಿತೀಶ್ ಕುಮಾರ್, ಆರ್ಜೆಡಿ ಬಿಟ್ಟು ಬಿಜೆಪಿಗೆ ಮತ್ತೆ ಬರಬಹುದು!
ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬಿಹಾರದ ಪುರ್ನಿಯಾದಲ್ಲಿ ಚುನಾಪುರದ ವಾಯುಪಡೆ ನಿಲ್ದಾಣಕ್ಕೆ ಬಂದಿಳಿದ ಕೇಂದ್ರ ಸಚಿವರು ಅಲ್ಲಿಂದ 'ಮಹಾಸಭಾ ಜನಸಭಾ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದಾರೆ.
ರ್ಯಾಲಿಯಲ್ಲಿ, ಮುಂದಿನ ರಾಜ್ಯ ಚುನಾವಣೆಯಲ್ಲಿ ಮೈತ್ರಿಯಿಲ್ಲದೆ ಬಿಜೆಪಿ ಸರ್ಕಾರ ರಚನೆಗೆ ಸಹಾಯ ಮಾಡುವಂತೆ ಸ್ಥಳೀಯರನ್ನು ಒತ್ತಾಯಿಸಿದರು.
"ನಿತೀಶ್ ಕುಮಾರ್ ಮತ್ತೆ ಆರ್ಜೆಡಿ ತೊರೆದು ಬಿಜೆಪಿಗೆ ಮರಳಬಹುದು. ಅವರಿಗೆ ಇರುವುದು ಒಂದೇ ಒಂದು ನೀತಿ ನನ್ನ ಕುರ್ಚಿ ಹಾಗೇ ಉಳಿಯಬೇಕು" ಎಂದು ಗೃಹ ಸಚಿವರು ಹೇಳಿದರು.
"ನಿತೀಶ್ ಜೀ, ನೀವು 2014 ರಲ್ಲಿ ಅದೇ ಕೆಲಸವನ್ನು ಮಾಡಿದ್ದೀರಿ ಮತ್ತು ಅನುಭವಿಸಿದ್ದೀರಿ. 2024 ರ ಲೋಕಸಭೆ ಚುನಾವಣೆ ಬರಲಿ, ಬಿಹಾರದ ಜನರು ಈ ಜೋಡಿಯನ್ನು ಅಳಿಸಿಹಾಕುತ್ತಾರೆ. 2025 ರಲ್ಲಿಯೂ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ" ಎಂದು ಹೇಳಿದರು.
ಇಂದು ಸಂಜೆ ಬಿಹಾರದ ಪಕ್ಷದ ಎಲ್ಲಾ ನಾಯಕರ ಜೊತೆಗೆ ಸಭೆ
ಜನಭವನ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ನಂತರ, ಅಮಿತ್ ಕಿಶನ್ಗಂಜ್ಗೆ ತೆರಳಲಿದ್ದಾರೆ. ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಅವರು, ಕಿಶನ್ಗಂಜ್ನಲ್ಲಿ ಸಂಜೆ 4 ಗಂಟೆಗೆ ಬಿಹಾರದ ಬಿಜೆಪಿಯ ಎಲ್ಲಾ 17 ಲೋಕಸಭಾ ಸದಸ್ಯರು (ನಾಲ್ಕು ಕೇಂದ್ರ ಸಚಿವರು ಸೇರಿದಂತೆ), ಐದು ರಾಜ್ಯಸಭಾ ಸದಸ್ಯರು, ಎಲ್ಲಾ 77 ಶಾಸಕರು, 23 ಎಂಎಲ್ಸಿಗಳು ಮತ್ತು ಸಾಂಸ್ಥಿಕ ಪದಾಧಿಕಾರಿಗಳ ಜೊತೆಗೆ ರಾಜ್ಯದ ಪ್ರಸ್ತುತ ರಾಜಕೀಯ ಸನ್ನಿವೇಶದ ಕುರಿತು ಚರ್ಚೆ ನಡೆಸಲಿದ್ದಾರೆ.
2024 ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಪ್ರಚಾರವನ್ನು ಪರಿಣಾಮಕಾರಿಯಾಗಿ ಪ್ರಾರಂಭಿಸಿದ್ದಾರೆ. ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಕೇಂದ್ರ ಗೃಹ ಸಚಿವರು ಭಾರೀ ವಾಗ್ದಾಳಿ ನಡೆಸಿದ್ದು, ಜನತಾ ದಳ (ಯುನೈಟೆಡ್) ನಾಯಕ ಬಿಜೆಪಿಗೆ ದ್ರೋಹ ಮಾಡಿದ್ದಾರೆ ಎಂದು ಹೇಳಿದ್ದಾರೆ.