ಮಗನ ಸಾವು, ಆಸ್ಪತ್ರೆಯಲ್ಲಿ ಕಾರ್ಮಿಕ ರಂಪುಕರ್ ಕಣ್ಣೀರು
ಪಾಟ್ನಾ, ಮೇ 20: ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ವಲಸೆ ಕಾರ್ಮಿಕನ ಫೋಟೋ ವೈರಲ್ ಆಗಿತ್ತು. ಬಹುತೇಕ ಸುದ್ದಿ ಮಾದ್ಯಮಗಳು ಈ ಫೋಟೋವನ್ನು ಬಳಸಿಕೊಂಡಿದ್ದವು.
ರಸ್ತೆಯ ಮಧ್ಯೆ ಕೂತು ಅಳುತ್ತಾ ಫೋನ್ನಲ್ಲಿ ಮಾತನಾಡುತ್ತಿರುವ ವ್ಯಕ್ತಿಯ ಫೋಟೋ ಇದಾಗಿತ್ತು. ಈ ಫೋಟೋ ನೋಡಿ, ಎಲ್ಲರಿಗೂ ಸಂಕಟವಾಗಿತ್ತು. ಕೊರೊನಾ ಲಾಕ್ಡೌನ್ನಿಂದ ವಲಸೆ ಕಾರ್ಮಿಕರ ಪರಿಸ್ಥಿತಿಯನ್ನು ಈ ಫೋಟೋ ಹೇಳುತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಹರಿದಾಡಿತ್ತು.
ಆ ಫೋಟೋದಲ್ಲಿ ಇರುವ ವ್ಯಕ್ತಿ ಬಿಹಾರದ ರಂಪುಕರ್ ಪಂಡಿತ್. ವಲಸೆ ಕಾರ್ಮಿಕರಾಗಿರುವ ಇವರು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ವೈರಸ್ನಿಂದ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾದ ಸಮಯದಲ್ಲಿ ಊರು ಸೇರಲು ಆಗದೆ ಇವರು ಪರದಾಡಿದರು. ಆದರೆ, ಅಂತು ಈ ವ್ಯಕ್ತಿ ಈಗ ಊರು ಸೇರಿದ್ದಾರೆ.

ಮಗನ ಸಾವಿನ ಸುದ್ದಿ
ಬಿಹಾರದ ರಂಪುಕರ್ ಪಂಡಿತ್ ದೆಹಲಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಲಾಕ್ಡೌನ್ ಸಮಯದಲ್ಲಿ ಕೆಲಸವೇ ಇಲ್ಲ ಪರದಾಟ ನಡೆಸಿದರು. ಆದರೆ, ಅದೇ ಸಮಯಕ್ಕೆ ತಮ್ಮ ಒಂದು ವರ್ಷದ ಮಗುವಿನ ಸಾವಿನ ಸುದ್ದಿ ಕೇಳಿ ಬಂತು. ಊರಿಗೆ ಹೋಗಲೇ ಬೇಕು ಅಂತ ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯ ಆಗಲಿಲ್ಲ. ಕಾಲುನಡಿಗೆಯಲ್ಲಿಯೇ ಹೋಗುವಾಗ ದಾರಿ ಮಧ್ಯದಲ್ಲಿ ಫೋನ್ನಲ್ಲಿ ಮಾತನಾಡುತ್ತಾ ತಮ್ಮ ಪರಿಸ್ಥಿತಿ ನೆನೆದು ಅತ್ತರು.

ಊರು ಸೇರಿದ ವ್ಯಕ್ತಿ
ಕಾರ್ಮಿಕ ರಂಪುಕರ್ ಪಂಡಿತ್ ರೈಲಿನ ಮೂಲಕ ಊರು ಸೇರಿದ್ದಾರೆ. ಸದ್ಯ, ಕ್ವಾರಂಟೈನ್ನಲ್ಲಿ ಇಡಲಾಗಿದೆ. ಕೋವಿಡ್ ಪರೀಕ್ಷೆ ನಡೆಸಿದ್ದು, ವರದಿ ಬರುವುದು ಬಾಕಿ ಇದೆ. ಕೊರೊನಾ ಭೀತಿ ಇರುವ ಕಾರಣ ತಮ್ಮ ಕುಟುಂಬದೊಂದಿಗೆ ದೂರ ಇರಲು ಸೂಚನೆ ನೀಡಲಾಗಿದೆ. ಈ ದುಃಖದ ಸಮಯದಲ್ಲಿ ಕುಟುಂಬದ ಜೊತೆಗಿಲ್ಲ ಎನ್ನುವ ನೋವು ಅವರಿಗಿದೆ.

ಆಸ್ಪತ್ರೆಗೆ ಬಂದ ಪತ್ನಿ
ರಂಪುಕರ್ ಪಂಡಿತ್ ಪತ್ನಿ ಹಾಗೂ ಒಂಬತ್ತು ವರ್ಷದ ಮಗಳು ಅವರನ್ನು ನೋಡಲು ಬಂದಿದ್ದರು. ಆದರೆ, ಸಾಮಾಜಿಕ ಅಂತರ ಕಾಪಾಡಬೇಕಿದ್ದ ಕಾರಣ ದೂರದಿಂದ ನೋಡಲು ಮಾತ್ರ ಅನುಮತಿ ನೀಡಲಾಗಿತ್ತು. ''ನಿನ್ನೆ ಸಂಜೆ ಮಾಸ್ಕ್ ಧರಿಸಿ ಪತ್ನಿ ಮತ್ತು ಮಗಳು ಬಂದಿದ್ದರು, ಅವರನ್ನು ದೂರದಿಂದಲೇ ನೋಡಬೇಕಿತ್ತು. ನನ್ನ ನೋವಿನಿಂದ ಅವರು ಊಟ ಮಾಡಿರಲಿಲ್ಲ'' ಎಂದು ಹೇಳಿದ್ದಾರೆ.

ಸರ್ಕಾರ ಸಹಾಯ ಮಾಡಬೇಕು
''ನನಗೆ ಮತ್ತು ನನ್ನಂತಹ ಜನರಿಗೆ ಸಹಾಯ ಮಾಡುವಂತೆ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನಾವು ಬಡವರು ಇಲ್ಲದಿದ್ದರೆ ಸಾಯುತ್ತೇವೆ.'' ಎಂದು ರಂಪುಕರ್ ಪಂಡಿತ್ ಕಣ್ಣೀರು ಹಾಕಿದ್ದಾರೆ. ಒಂದು ಕಡೆ ಮಗನನ್ನು ಕಳೆದುಕೊಂಡು, ಮತ್ತೊಂದು ಕಡೆ ಕೆಲಸ, ಹಣ ಇಲ್ಲದೆ ಊಟಕ್ಕೂ ಕಷ್ಟವಾಗಿದೆ. ಇಂತಹ ಪರಿಸ್ಥಿತಿ ಸಾಕಷ್ಟು ವಲಸೆ ಕಾರ್ಮಿಕರಿಗೆ ಇದ್ದು, ಅವರ ನೆರವಿಗೆ ಸರ್ಕಾರ ಬರಬೇಕು ಎಂದು ರಂಪುಕರ್ ಮನವಿ ಮಾಡಿದ್ದಾರೆ.












Click it and Unblock the Notifications