ಕೊರೊನಾ ಸಮಯದಲ್ಲಿ ಬಟ್ಟ ಬಯಲಾದ ನಿತೀಶ್ ಕುಮಾರ್ ಸಾಧನೆ
ಪಾಟ್ನಾ, ಜುಲೈ 14: ಬಿಹಾರದಲ್ಲಿ ಒಂದೂವರೆ ದಶಕಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿರುವ ನಿತೀಶ್ ಕುಮಾರ್ ಸಾಧನೆಯನ್ನು ಕೊರೊನಾ ಲಾಕ್ಡೌನ್ ಹಾಗೂ ಮಹಾಮಾರಿ ಬಯಲು ಮಾಡಿದೆ ಎಂದು ಆರ್ಎಲ್ಎಸ್ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಟೀಕಿಸಿದ್ದಾರೆ.
ನಿತೀಶ್ ಕುಮಾರ್ ಮಾಜಿ ಸ್ನೇಹಿತ ಹಾಗೂ ಎನ್ಡಿಎ ಮೈತ್ರಿಕೂಟದ ಭಾಗವಾಗಿದ್ದ ಉಪೇಂದ್ರ ಕುಶ್ವಾಹ ಬಿಹಾರ ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದ್ದಾರೆ. ಬಿಹಾರವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾರ್ಪಡಿಸುತ್ತೇನೆ, ಬಿಹಾರದ ಅಭಿವೃದ್ಧಿ ಪಥವನ್ನು ಬದಲಿಸುತ್ತೇನೆ ಎಂದು ನಿತೀಶ್ ಕುಮಾರ್ ಹೇಳಿಕೊಂಡಿದ್ದರು.
ಇದಲ್ಲದೆ ತನ್ನ ಅಧಿಕಾರಾವಧಿಯಲ್ಲಿ ಉದ್ಯೋಗವನ್ನರಸಿ ಬಿಹಾರದಿಂದ ವಲಸೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ಲಾಕ್ಡೌನ್ ಹಾಗೂ ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಬಿಹಾರದ ನೈಜ ಸ್ಥಿತಿ ತಿಳಿದುಬಂದಿದೆ. ಬಿಹಾರದಿಂದ ಎಷ್ಟು ಜನ ವಲಸೆ ಹೋಗಿದ್ದರು, ವಾಪಸ್ ಅವರು ಬಿಹಾರಕ್ಕೆ ಬರುವಾಗ ಪಟ್ಟ ಕಷ್ಟವೇನು ಎಂಬುದು ತಿಳಿದುಬಂದಿದೆ.

ಬೇರೆ ರಾಜ್ಯಗಳಿಂದ ಜನರು ಬಿಹಾರಕ್ಕೆ ವಾಪಸ್
ನಿತೀಶ್ ಕುಮಾರ್ ಹೇಳಿಕೊಳ್ಳುತ್ತಿರುವುದೆಲ್ಲಾ ನಿಜವಾಗಿದ್ದರೆ ಯಾಕೆ ಇಷ್ಟೊಂದು ಪ್ರಮಾಣದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಿಹಾರಕ್ಕೆ ಜನರು ಹಿಂದಿರುಗಿದರು ಎಂದು ಕುಶ್ವಾಹ ಪ್ರಶ್ನಿಸಿದ್ದಾರೆ.

ಲಾಲೂ ಸರ್ಕಾರಕ್ಕಿಂತ ಹೆಚ್ಚಿನ ಅಭಿವೃದ್ಧಿ
ಅಭಿವೃದ್ಧಿ ಬಗ್ಗೆ ಈಗ ಪ್ರಶ್ನೆ ಕೇಳಿದರೆ, ಹಿಂದಿನ ಲಾಲೂ ಸರ್ಕಾರಕ್ಕಿಂತ ನಮ್ಮ ಸರ್ಕಾರ ಹೆಚ್ಚಿನ ಸಾಧನೆ ಮಾಡಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಜನರ ಬಳಿ ಮತ ಕೇಳುವಾಗ ನಿತೀಶ್ ಕುಮಾರ್ ಹೀಗೆ ಹೇಳಿರಲಿಲ್ಲ. ಜನರಿಗೆ ನೀಡಿದ ಭರವಸೆಯನ್ನು ನಿತೀಶ್ ಕುಮಾರ್ ಮರೆತಂತಿದೆ ಎಂದು ಕುಶ್ವಾಹ ಆಕ್ರೋಶ ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ
ಮಹಾಘಟಬಂಧನಕ್ಕೆ ಶೀಘ್ರದಲ್ಲೇ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಹಾಘಟಬಂಧನದಲ್ಲಿ ಯಾವುದೇ ಒಡಕಿಲ್ಲ, ಯಾರೂ ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎನ್ನುವುದರ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ, ಸೀಟು ಹಂಚಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಚುನಾವಣೆಗೂ ಮುನ್ನ ಈ ಬಗ್ಗೆ ಸಿಲುವು ಸ್ಪಷ್ಟಪಡಿಸಲಾಗುವುದು, ಈ ಬಗ್ಗೆ ಯಾವುದೇ ಗೊಂದಲದ ಅಗತ್ಯವಿಲ್ಲ ಎಂದು ಕುಶ್ವಾಹ ಹೇಳಿದ್ದಾರೆ.

ಮಹಾಘಟಬಂಧನದೊಳಗೆ ಪಾಸ್ವಾನ್
ಇನ್ನು ಎಲ್ಜೆಪಿಯ ರಾಮ್ವಿಲಾಸ್ ಪಾಸ್ವಾನ್ ಅವರನ್ನು ಮಹಾಘಟಬಂಧನದೊಳಗೆ ಸೇರಿಸಿಕೊಳ್ಳುವ ಬಗ್ಗೆ ಮಾತನಾಡಿರುವ ಕುಶ್ವಾಹ ತಾನಿರುವ ಮೈತ್ರಿಕೂಟದಲ್ಲಿ ಸೀಟು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಪಾಸ್ವಾನ್ ಮಾತನಾಡುತ್ತಿದ್ದಾರೆ. ಅದನ್ನು ಹೊರತುಪಡಿಸಿ, ಮಹಾಮೈತ್ರಿಗೆ ಸೇರುತ್ತಾರೆ ಎನ್ನುವ ವಿಚಾರದ ಬಗ್ಗೆ ಚರ್ಚೆ ಅನಗತ್ಯ ಎಂದು ಕುಶ್ವಾಹ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications