3000 ಕಿಮೀ ಪಾದಯಾತ್ರೆ; ಇದೇನಿದು ಚುನಾವಣಾ ಚಾಣಕ್ಯನ ಬಿಗ್ ಪ್ಲ್ಯಾನ್?
ಪಾಟ್ನಾ, ಮೇ 5: ಬಿಹಾರದಲ್ಲಿ ರಾಜಕೀಯದ ಎರಡನೇ ಇನ್ನಿಂಗ್ಸ್ ಶುರು ಮಾಡುವ ನಿಟ್ಟಿನಲ್ಲಿ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಮಹತ್ವದ ಹೆಜ್ಜೆ ಇರಿಸಿದ್ದಾರೆ. ರಾಜ್ಯದ ಜನರ ನಾಡಿ ಮಿಡಿತ ಅರಿಯಲು ರಾಜ್ಯಾದ್ಯಂತ 3000 ಕಿಲೋ ಮೀಟರ್ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.
ಮುಂಬರುವ ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಿಂದ ಬಿಹಾರ ರಾಜ್ಯಾದ್ಯಂತ ಸಂಚಾರ ಮಾಡುವುದಾಗಿ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಜನರ ನಾಡಿ ಮಿಡಿವನ್ನು ಅರಿಯುವುದಾಗಿ ತಿಳಿಸಿದ್ದಾರೆ.
"ನನಗೆ ಯಾವುದೇ ಪಕ್ಷವಿಲ್ಲ, ವೇದಿಕೆಯೂ ಇಲ್ಲ, ನನ್ನಲ್ಲಿರುವುದು ಒಂದೇ ಒಂದು ಚಿಂತನೆ, ಬಿಹಾರದ ಅಭಿವೃದ್ಧಿಗೆ ನನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಿದ್ದೇನೆ" ಎಂದು ಪ್ರಶಾಂತ್ ಕಿಶೋರ್ ಗುರುವಾರ ತಿಳಿಸಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಪ್ರಶಾಂತ್ ಕಿಶೋರ್ ಮಾಡಿಕೊಂಡಿರುವ ಪ್ಲ್ಯಾನ್ ಹಾಗೂ ರೂಪಿಸಿರುವ ಯೋಜನೆಯ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಪಾನ್ ಬಿಹಾರ ಪಾದಯಾತ್ರೆ ನಡೆಸುವುದಾಗಿ ಘೋಷಣೆ
"ಬಿಹಾರದ ಜನರನ್ನು ತಲುಪಲು ರಾಜ್ಯದ ಮೂಲೆ ಮೂಲೆಗೆ ಹೋಗುವುದು ಹೆಚ್ಚು ಮುಖ್ಯವಾಗಿದೆ. ಜನರಿಗೆ 'ಜನ್ ಸೂರಜ್' ಪರಿಕಲ್ಪನೆಯ ಬಗ್ಗೆ ಹೇಳಲು, ಅವರ ದೃಷ್ಟಿಕೋನವನ್ನು ತೆಗೆದುಕೊಳ್ಳಲು, ಅವರ ಸಮಸ್ಯೆಗಳು ಮತ್ತು ಆಕಾಂಕ್ಷೆಗಳನ್ನು ತಿಳಿದುಕೊಳ್ಳುವುದಕ್ಕಾಗಿಯೇ ಅಕ್ಟೋಬರ್ 2ರಿಂದ ನಾನು ಪಶ್ಚಿಮ ಚಂಪಾರಣ್ನ ಗಾಂಧಿ ಆಶ್ರಮದಿಂದ 3,000 ಕಿ.ಮೀ ಪ್ಯಾನ್-ಬಿಹಾರ ಪಾದಯಾತ್ರೆಯನ್ನು ಪ್ರಾರಂಭಿಸುತ್ತೇನೆ" ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಬಿಹಾರದಲ್ಲಿ ಅತಿಹೆಚ್ಚು ಜನರನ್ನು ತಲುಪುವ ಯತ್ನ
"ಮುಂದಿನ ಎಂಟು ತಿಂಗಳಿಂದ ಒಂದು ವರ್ಷದಲ್ಲಿ, ನಾನು ಬಿಹಾರದ ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ನಾವು ಸಾರ್ವಜನಿಕರ ಮನೆ ಮನೆಗೆ ತೆರಳಿ ಅವರ ಬಾಗಿಲು ತಟ್ಟುತ್ತೇವೆ, ಅವರ ಕಚೇರಿಗಳಿಗೆ ತಲುಪುತ್ತೇವೆ. ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತೇವೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತೇವೆ, ಇದರ ಜೊತೆಗೆ ನಮ್ಮ ಕಾರ್ಯಕ್ರಮದಲ್ಲಿ ಅವರನ್ನೂ ಸೇರಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇವೆ" ಎಂದು ಪ್ರಶಾಂತ್ ಕಿಶೋರ್ ತಿಳಿಸಿದರು.

ಕಾಂಗ್ರೆಸ್ ಕೈ ಹಿಡಿಯಲು ಮುಂದಾಗಿದ್ದ ಪ್ರಶಾಂತ್ ಕಿಶೋರ್
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮತ್ತು ಪಶ್ಚಿಮ ಬಂಗಾಳವನ್ನು ಮಮತಾ ಬ್ಯಾನರ್ಜಿ ಉಳಿಸಿಕೊಳ್ಳಲು ಸಹಾಯ ಮಾಡಿದ ಪ್ರಸಿದ್ಧ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಇತ್ತೀಚೆಗೆ ಕಾಂಗ್ರೆಸ್ನೊಂದಿಗೆ ವಿಸ್ತಾರವಾದ ಪುನರುಜ್ಜೀವನದ ಯೋಜನೆ ಕುರಿತು ಚರ್ಚೆ ನಡೆಸುತ್ತಿದ್ದರು. ಆದರೆ ವರದಿಗಳ ಪ್ರಕಾರ ಅವರು ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಬಲಪಡಿಸಲು, ಗಾಂಧಿಯೇತರ ಪಕ್ಷದ ಅಧ್ಯಕ್ಷರನ್ನು ನೇಮಿಸಲು ಮತ್ತು 543 ಲೋಕಸಭಾ ಸ್ಥಾನಗಳಲ್ಲಿ 400ರಲ್ಲಿ ಸ್ಪರ್ಧಿಸಲು ಪರಿಗಣಿಸುವಂತೆ ಸಲಹೆ ನೀಡಿದರು. ಅವರೂ ಪಕ್ಷ ಸೇರುವ ಯೋಚನೆಯಲ್ಲಿದ್ದರು. ಆದರೆ, ಅವರ ಸಲಹೆಗಳನ್ನು ಪರಿಗಣಿಸಲು ಕಾಂಗ್ರೆಸ್ ವರಿಷ್ಠರು ರಚಿಸಿದ ಸಮಿತಿ ನಿರಾಕರಿಸಿದ ಹಿನ್ನಲೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.
"ಇಎಜಿಯ ಭಾಗವಾಗಿ ಪಕ್ಷಕ್ಕೆ ಸೇರಲು ಮತ್ತು ಚುನಾವಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಕಾಂಗ್ರೆಸ್ಸಿನ ಉದಾರ ಪ್ರಸ್ತಾಪವನ್ನು ನಾನು ನಿರಾಕರಿಸಿದೆ. ನನ್ನ ವಿನಮ್ರ ಅಭಿಪ್ರಾಯದಲ್ಲಿ, ನನಗಿಂತ ಹೆಚ್ಚಾಗಿ, ಪಕ್ಷಕ್ಕೆ ಆಳವಾಗಿ ಬೇರೂರಿರುವ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಪರಿವರ್ತನೆಯ ಸುಧಾರಣೆ, ನಾಯಕತ್ವ ಮತ್ತು ಸಾಮೂಹಿಕ ಇಚ್ಛಾಶಕ್ತಿಯ ಅಗತ್ಯವಿದೆ" ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಪ್ರಶಾಂತ್ ಕಿಶೋರ್ ಅಗತ್ಯವಿಲ್ಲ
"ಕಾಂಗ್ರೆಸ್ ಮುಂದೆ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಅದುವೇ ನಿರ್ಧರಿಸಬೇಕೇ ವಿನಃ ನಾನಲ್ಲ. ಅವರು ಮುಖ್ಯವೆಂದು ಪರಿಗಣಿಸಿದ ನಿರ್ಧಾರವನ್ನು ಅವರು ತೆಗೆದುಕೊಂಡರು ಮತ್ತು ನಾನು ಕೂಡ ಹಾಗೆ ಮಾಡಿದ್ದೇನೆ. ಆದರೆ ಕಾಂಗ್ರೆಸ್ಗೆ ಯಾವುದೇ ಪ್ರಶಾಂತ್ ಕಿಶೋರ್ ಅಗತ್ಯವಿಲ್ಲ, ಪಕ್ಷವು ಇನ್ನೂ ಹೆಚ್ಚು ಸಮರ್ಥರನ್ನು ಹೊಂದಿದೆ. ಅವರು ಏನು ಮಾಡಬೇಕೆಂದು ಅವರಿಗೆ ತಿಳಿದಿದೆ" ಎಂದು ಪ್ರಶಾಂತ್ ಕಿಶೋರ್ ಹೇಳಿದರು.












Click it and Unblock the Notifications