ಬಿಜೆಪಿ ದೊಡ್ಡ ಶತ್ರು, ನಾನು ಕೇಂದ್ರಕ್ಕೆ ತಲೆ ಬಾಗುವುದಿಲ್ಲ: ಲಾಲು ಪ್ರಸಾದ್ ಯಾದವ್
ಪಾಟ್ನಾ, ಸೆ.22: ಭಾರತೀಯ ಜನತಾ ಪಕ್ಷ ತನ್ನ ದೊಡ್ಡ ಶತ್ರುವಾಗಿದ್ದು, ಕೇಂದ್ರದ ಆಡಳಿತಾರೂಢ ಪಕ್ಷಕ್ಕೆ ನಾನು ಬಗ್ಗುವುದಿಲ್ಲ ಎಂದು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಪಾಟ್ನಾದಲ್ಲಿ ನಡೆದ ಆರ್ಜೆಡಿ ರಾಜ್ಯ ಕೌನ್ಸಿಲ್ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾನು ನನ್ನ ಸಿದ್ಧಾಂತದ ಜೊತೆಗೆ ದೃಢವಾಗಿ ನಿಲ್ಲುತ್ತೇನೆ. ಹಲವು ಪಕ್ಷಗಳು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮಂಡಿಯೂರಿ ಬಿದ್ದಿವೆ. ಆದರೆ ನಾನು ತಲೆಬಾಗುವುದಿಲ್ಲ ಅಥವಾ ನಾನು ಎಂದಿಗೂ ಬಗ್ಗುವುದಿಲ್ಲ. ಬಿಜೆಪಿ ನಮ್ಮ ದೊಡ್ಡ ಶತ್ರುವಾಗಿದೆ. ನಾನು ತಲೆಬಾಗಿದ್ದರೆ ಇಷ್ಟು ದಿನ ಜೈಲಿನಲ್ಲಿ ಇರುತ್ತಿರಲಿಲ್ಲ" ಎಂದು ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಭೇಟಿಯಾದ ನಟ ಮನೋಜ್ ಬಾಜಪೇಯಿ
ಬಿಹಾರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದ ಕೂಡಲೇ ಬಿಜೆಪಿ ಜಂಗಲ್ ರಾಜ್ ಎಂಬ ಘೋಷಣೆಯನ್ನು ಆರಂಭಿಸಿತು ಎಂದು ಲಾಲು ಪ್ರಸಾದ್ ಯಾದವ್ ಹೇಳಿದರು.
"ಎಲ್ಲರೂ ಎಚ್ಚೆತ್ತುಕೊಳ್ಳಬೇಕು, 2024 ರಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತೊಗೆಯಬೇಕು. ಶೀಘ್ರದಲ್ಲೇ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುತ್ತೇನೆ, ರಾಹುಲ್ ಗಾಂಧಿಯನ್ನೂ ಭೇಟಿ ಮಾಡುತ್ತೇನೆ' ಎಂದು ಆರ್ಜೆಡಿ ವರಿಷ್ಠರು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಂಬರುವ ಸೀಮಾಂಚಲ್ ಭೇಟಿಯ ಕುರಿತು ಮಾತನಾಡಿದ ಯಾದವ್, ಬಿಜೆಪಿ ಮನಸ್ಸಿನಲ್ಲಿ ಕೆಲವು ಕೆಟ್ಟ ಉದ್ದೇಶವನ್ನು ಹೊಂದಿರಬೇಕು. ರಾಜಕೀಯ ಲಾಭ ಪಡೆಯಲು ಬಿಜೆಪಿ ಜನರನ್ನು ಒಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಅಮಿತ್ ಶಾ ಸೆಪ್ಟೆಂಬರ್ 23 ಮತ್ತು 24 ರಂದು ಬಿಹಾರಕ್ಕೆ ಎರಡು ದಿನಗಳು ಪ್ರವಾಸ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್ ಶನಿವಾರ ಹೇಳಿದ್ದಾರೆ. ಈ ವೇಳೆ ಬಿಜೆಪಿಯ ಉನ್ನತ ನಾಯಕರು ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.
ಸೆಪ್ಟೆಂಬರ್ 24 ರಂದು ಅರಾರಿಯಾ, ಕಿಶನ್ಗಂಜ್, ಪೂರ್ಣಿಯಾ ಮತ್ತು ಕತಿಹಾರ್ನ ಪದಾಧಿಕಾರಿಗಳನ್ನು ಅಮಿತ್ ಶಾ ಭೇಟಿ ಮಾಡಲಿದ್ದಾರೆ ಎಂದು ಜೈಸ್ವಾಲ್ ಹೇಳಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳೆದ ತಿಂಗಳು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಯಿಂದ ಬೇರ್ಪಟ್ಟು. ಆರ್ಜೆಡಿಯೊಂದಿಗೆ ಮತ್ತೆ ಕೈಜೋಡಿಸಿ ಮಹಾಘಟಬಂಧನ್ ಸರ್ಕಾರವನ್ನು ರಚಿಸಿದ್ದಾರೆ.
2020 ರಲ್ಲಿ ಬಿಹಾರದಲ್ಲಿ ಬಿಜೆಪಿ-ಜೆಡಿಯು ಪರಸ್ಪರ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಗೆದ್ದಾಗ ಮತ್ತು ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಗೆದ್ದರೂ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು.