ಬಿಹಾರದಲ್ಲಿ ನಿತೀಶ್ ನಿರ್ಗಮನವನ್ನು ಏಕೆ ತಡೆಯಲಿಲ್ಲ ಬಿಜೆಪಿ!?
ಪಾಟ್ನಾ, ಆಗಸ್ಟ್ 9: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೈತ್ರಿಕೂಟವನ್ನು ತ್ಯಜಿಸುತ್ತಾರೆ ಎಂಬುದು ಮೊದಲೇ ತಿಳಿದಿದ್ದರೂ ಭಾರತೀಯ ಜನತಾ ಪಕ್ಷವು ಅವರನ್ನು ತಡೆಯಲು ಪ್ರಯತ್ನಿಸಲಿಲ್ಲ ಎಂದು ಗೊತ್ತಾಗಿದೆ.
ಬಿಜೆಪಿ ಮೈತ್ರಿ ಮುರಿದುಕೊಳ್ಳುವ ಮೂಲಕ ನಿತೀಶ್ ಕುಮಾರ್ ದ್ರೋಹ ಮಾಡಿದ್ದಾರೆ. ಆಗಾಗ ಪಕ್ಷ ಬದಲಾಯಿಸುವ ಮೂಲಕ ಅವರು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ.
ಬಿಹಾರ ಸಿಎಂಗೆ ಆಪ್ತರಿಂದಲೇ ಅಪಾಯ: ಹೀಗೆ ಹೇಳಿದ್ದೇಕೆ ಚಿರಾಗ್ ಪಾಸ್ವಾನ್?
ಉತ್ತಮ ಆಯ್ಕೆಯನ್ನು ಹುಡುಕುತ್ತಿರುವ ನಿತೀಶ್ ಕುಮಾರ್ 2024ರ ಸಾರ್ವವತ್ರಿಕ ಚುನಾವಣೆಯಲ್ಲಿ ಪ್ರತಿಪಕ್ಷಗಳನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಳ್ಳುವು ಸಾಧ್ಯತೆಯಿದೆ ಎಂದು ಕೇಸರಿ ಪಕ್ಷ ಅಂದಾಜಿಸಿದೆ.
ಅಮಿತ್ ಶಾ ಕರೆ ಮಾಡಿದರೂ ಮನವೊಲಿಕೆ ಸಾಧ್ಯವಾಗಲಿಲ್ಲ
ಬಿಜೆಪಿಯ ಉನ್ನತ ನಾಯಕರು ಸೋಮವಾರದಿಂದಲೂ ಘಟನೆಗಳನ್ನು ಮೌನವಾಗಿ ನೋಡುತ್ತಿದ್ದಾರೆ. ನಿತೀಶ್ ಕುಮಾರ್ ಅವರಿಗೆ ಸ್ವತಃ ಕೇಂದ್ರ ಸಚಿವ ಅಮಿತ್ ಶಾ ಕರೆ ಮಾಡಿದ್ದರೂ, ಸಾಲು ಸಾಲು ನಾಯಕರು ಹಾಗೂ ರಾಜ್ಯದ ಪ್ರಮುಖರು ನಿತೀಶ್ ನಿವಾಸಕ್ಕೆ ವಿಸಿಟ್ ಕೊಟ್ಟರೂ ಪರಿಸ್ಥಿತಿ ಬದಲಾಗಲಿಲ್ಲ. ನಿತೀಶ್ ಕುಮಾರ್ ಮನವೊಲಿಕೆ ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಈ ರಾಜಕೀಯ ಬೆಳವಣಿಗೆ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬಿಜೆಪಿಯು ತನ್ನ ಮೈತ್ರಿಧರ್ಮವನ್ನು ಕಾಪಾಡಿಕೊಂಡು ಬಂದಿದೆ. ಈ ಹಿಂದೆ 63 ಸ್ಥಾನಗಳನ್ನು ಹೊಂದಿದಾಗಲೂ, 36 ಸ್ಥಾನವುಳ್ಳ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಟ್ಟಿದ್ದೀವಿ ಎಂದಿದ್ದರು.
ಕೇಸರಿ ಪಕ್ಷಕ್ಕೆ ಕೈ ಕೊಟ್ಟಿದ್ದೇಕೆ ನಿತೀಶ್ ಕುಮಾರ್?
ಬಿಹಾರ ವಿಧಾನಸಭೆ ಚುನಾವಣೆ ನಂತರದಲ್ಲಿ ಬಿಜೆಪಿಯು ದೊಡ್ಡಣ್ಣನ ನಿಲುವು ಪ್ರದರ್ಶಿಸುವುದಕ್ಕೆ ಶುರು ಮಾಡಿತ್ತು. ಬಿಜೆಪಿ ನಾಯಕರ ನಡುವಳಿಕೆಗೆ ಸ್ವತಃ ಮುಖ್ಯಮಂತ್ರಿಗೆ ಇರಿಸು-ಮುರಿಸು ಉಂಟು ಮಾಡಿತ್ತು. ಬಿಹಾರವನ್ನು ಮತ್ತೊಂದು ಮಹಾರಾಷ್ಟ್ರವನ್ನಾಗಿ ಮಾಡುತ್ತಾರೆ ಎಂಬ ಅನುಮಾನ ಮೂಡಿತು. ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ನಿತೀಶ್ ಕುಮಾರ್, ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಟ್ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರವನ್ನು ಕೆಡವಿದ ರೀತಿಯಲ್ಲಿ ಬಿಜೆಪಿ ತನ್ನ ಜನತಾದಳ ಯುನೈಟೆಡ್(ಜೆಡಿಯು) ಅನ್ನು ಒಡೆದು ಮುಖ್ಯಮಂತ್ರಿಯನ್ನೇ ಬದಲಾಯಿಸುವ ಆತಂಕವು ನಿತೀಶ್ ಕುಮಾರ್ ಅನ್ನು ಕಾಡಿತು.
ಆರ್ಸಿಪಿ ಸಿಂಗ್ ಮೇಲೆ ನಿತೀಶ್ ಕುಮಾರ್ ಅನುಮಾನ
ಮಹಾರಾಷ್ಟ್ರದಂತೆ ಬಿಹಾರದಲ್ಲಿ ಜೆಡಿಯು ಪಕ್ಷವನ್ನು ಒಡೆಯುವುದಕ್ಕೆ ಆರ್ಸಿಪಿ ಸಿಂಗ್ ಅನ್ನು ದಾಳವಾಗಿ ಬಳಸಿಕೊಳ್ಳಬಹುದು ಎಂಬುದು ನಿತೀಶ್ ಕುಮಾರ್ ಅನುಮಾನ ಆಗಿತ್ತು. ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದ ಏಕೈಕ ಜೆಡಿಯು ಸದಸ್ಯರಾಗಿದ್ದ ಆರ್ಸಿಪಿ ಸಿಂಗ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಅವರನ್ನು ಎರಡನೇ ಅವಧಿಗೆ ರಾಜ್ಯಸಭೆಗೆ ಆಯ್ಕೆ ಮಾಡಿರಲಿಲ್ಲ. ಅಲ್ಲದೇ ಕೇಂದ್ರ ಸಂಪುಟದಿಂದ ತೆಗೆದು ಹಾಕುವಂತೆ ಒತ್ತಾಯಿಸಲಾಗಿತ್ತು. ಇದರ ಮಧ್ಯೆ ಇತ್ತೀಚಿಗೆ ಜೆಡಿಯು ಪಕ್ಷದಿಂದ ಆರ್ಸಿಪಿ ಸಿಂಗ್ ಹೊರ ನಡೆದಿದ್ದರು.
ಲಾಲೂ ಪಕ್ಷದೊಂದಿಗೆ ನಿತೀಶ್ ಕುಮಾರ್ ಮರು ದೋಸ್ತಿ
ಬಿಹಾರ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳದೊಂದಿಗೆ ನಿತೀಶ್ ಕುಮಾರ್ ಕೈ ಜೋಡಿಸಿದ್ದಾರೆ. ಆರ್ ಜೆಡಿ ಜೊತೆಗೆ ಇತರೆ 9 ಪಕ್ಷಗಳೊಂದಿಗೆ ಜೆಡಿಯು ಮೈತ್ರಿಗೆ ಮುಂದಾಗಿದೆ. ಹೀಗಾಗಿ 243 ಕ್ಷೇತ್ರಗಳ ಮೇಲೆ ತನ್ನ ಲಕ್ಷ್ಯವನ್ನು ಕೇಂದ್ರೀಕರಿಸುತ್ತದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಈ ಹಿಂದೆ 2015ರ ಚುನಾವಣೆಯಲ್ಲಿ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ RJD, JD(U) ಮತ್ತು BJP ಪೈಕಿ ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿರಲಿಲ್ಲ. ಎರಡು ಪಕ್ಷಗಳು ಒಟ್ಟಾಗಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆದರೆ ನಿತೀಶ್ ಕುಮಾರ್ ಶಕ್ತಿ ಕಡಿಮೆಯಾಗುತ್ತಿರುವುದರಿಂದ ಮುಂದಿನ ವರ್ಷಗಳಲ್ಲಿ ರಾಜ್ಯ ರಾಜಕೀಯ ಇಬ್ಭಾಗವಾಗಬಹುದು ಎಂದು ಮೂಲಗಳು ಹೇಳಿವೆ.