Breaking: ತೇಜಸ್ವಿ ಯಾದವ್ ಜೊತೆಗೆ ನಿತೀಶ್ ಕುಮಾರ್ ರಾಜ್ಯಪಾಲರ ಭೇಟಿ
ಪಾಟ್ನಾ, ಆಗಸ್ಟ್ 09: ಬಿಹಾರದಲ್ಲಿ ಸೋಮವಾರದಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೆಳ ಬೆನ್ನಲ್ಲೇ ಬಿಜೆಪಿ ಜೊತೆಗಿನ ಮೈತ್ರಿಯನ್ನು ನಿತೀಶ್ ಕುಮಾರ್ ಕೊನೆಗೊಳಿಸಿದ್ದಾರೆ. ಸಂಜೆ ವಿಪಕ್ಷ ನಾಯಕ ತೇಜಸ್ವಿ ಯಾದವ್ ಜೊತೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.
ಬಿಹಾರದ ಮುಖ್ಯಮಂತ್ರಿಯಾಗಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್ ಎರಡು ಪಕ್ಷಗಳ ನಡುವಿನ ಭಿನ್ನಾಭಿಪ್ರಾಯದ ವದಂತಿಗಳ ನಡುವೆಯೇ ಬಿಜೆಪಿಯೊಂದಿಗೆ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಮಂಗಳವಾರ ಸಂಜೆ ರಾಜಭವನದಲ್ಲಿ ಬಿಹಾರ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ನಿತೀಶ್ ಕುಮಾರ್ ಭೇಟಿ ಮಾಡಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಇಂದು ಬೆಳಗ್ಗೆ ನಡೆದ ಜೆಡಿಯು ಸಭೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಮತ್ತು ಸಂಸದರು ಸಿಎಂ ನಿತೀಶ್ ಕುಮಾರ್ ಅವರ ನಿರ್ಧಾರವನ್ನು ಬೆಂಬಲಿಸಿ ಅವರ ಜೊತೆಗಿದ್ದೇವೆ ಎಂದು ಹೇಳಿದ್ದಾರೆ. ಅವರು ಏನು ನಿರ್ಧರಿಸಿದರೂ ಅವರು ಯಾವಾಗಲೂ ಅವರೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದ್ದರು.
ಇನ್ನು ಬಿಹಾರದ ಏಕೈಕ ದೊಡ್ಡ ಪಕ್ಷವಾಗಿರುವ ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ನಂತಹ ವಿರೋಧ ಪಕ್ಷಗಳು ಜೆಡಿಯು ಅನ್ನು ಬೆಂಬಲಿಸುವ ನಿರೀಕ್ಷೆಯಿದೆ. ಜೆಡಿಯು ಪಕ್ಷದ ಸಭೆ ನಡುವೆಯೇ, ಆರ್ ಜೆಡಿ, ಕಾಂಗ್ರೆಸ್ ಕೂಡ ಪ್ರತ್ಯೇಕವಾಗಿ ಸಭೆ ನಡೆಸಿವೆ. ನಿತೀಶ್ ಕುಮಾರ್ ಕೂಡ ಸೋನಿಯಾ ಗಾಂಧಿ ಅವರಿಗೆ ಭಾನುವಾರವೇ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
ಲಾಲು ಪ್ರಸಾದ್ ಯಾದವ್ ಕೂಡ ಬಿಹಾರದಲ್ಲಿ ನಡೆಯುತ್ತಿರುವ ಪ್ರತಿ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಆದರೆ ಎಲ್ಲ ಕೆಲಸವನ್ನೂ ವಿಪಕ್ಷ ನಾಯಕ ತೇಜಸ್ವಿ ಯಾದವ್ ಮಾಡುತ್ತಿದ್ದಾರೆ ಎಂದು ಆರ್ಜೆಡಿ ಮೂಲಗಳು ತಿಳಿಸಿವೆ.
ಬಿಹಾರ ರಾಜಕೀಯ ಬಿಕ್ಕಟಿನ ಹಿನ್ನೆಲೆ ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ಪಾಟ್ನಾದ ನಿವಾಸದ ಹೊರಗೆ ಭಾರಿ ಭದ್ರತೆ ನೀಡಲಾಗಿದ್ದು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Recommended Video
ಬಿಹಾರದಲ್ಲಿ ಮಹಾರಾಷ್ಟ್ರ ಮಾದರಿಯನ್ನು ಪುನರಾವರ್ತಿಸಲು ಗೃಹ ಸಚಿವ ಅಮಿತ್ ಶಾ ಬಯಸುತ್ತಿದ್ದಾರೆ ಎಂದು ನಿತೀಶ್ ಕುಮಾರ್ ಮನಗಂಡಿದ್ದಾರೆ ಎನ್ನಲಾಗಿದೆ. ಉದ್ಧವ್ ಠಾಕ್ರೆ ಅವರ ಶಿವಸೇನೆಯಿಂದ ಹಿರಿಯ ನಾಯಕ ಏಕನಾಥ್ ಶಿಂಧೆ ಅವರನ್ನು ಬಂಡಾಯ ಏಳುವಂತೆ ಮಾಡಿ, ನಂತರ ಬಿಜೆಪಿ ಬೆಂಬಲ ಘೋಷಿಸಿ ಸರಕಾರ ರಚಿಸಿದೆ.