ಎನ್ಆರ್ಸಿ ಜಾರಿಯಿಲ್ಲ: ಬಿಹಾರ ಸರ್ಕಾರ ನಿರ್ಣಯ
ಪಟ್ನಾ, ಫೆಬ್ರವರಿ 27: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಜಾರಿಗೆ ತರುವುದಿಲ್ಲ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್ಪಿಆರ್) ಒಂದು ತಿದ್ದುಪಡಿಯೊಂದಿಗೆ 2010ರ ಮಾದರಿಯಲ್ಲಿಯೇ ಜಾರಿಗೆ ತರಬೇಕು ಎಂದು ಬಿಹಾರ ವಿಧಾನಸಭೆ ಅವಿರೋಧವಾಗಿ ನಿರ್ಣಯ ಕೈಗೊಂಡಿದೆ. ಎನ್ಡಿಎ ಸರ್ಕಾರದ ಆಡಳಿತವಿರುವ ರಾಜ್ಯದಲ್ಲಿ ಈ ರೀತಿ ನಿರ್ಣಯ ತೆಗೆದುಕೊಂಡಿರುವುದು ಇದೇ ಮೊದಲು.
ವಿರೋಧಪಕ್ಷದ ನಾಯಕ ತೇಜಸ್ವಿ ಯಾದವ್ ಮತ್ತು ಇತರರು ಮಂಡಿಸಿದ ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ನಿಲುವಳಿ ಸೂಚನೆ ಕುರಿತು ಪ್ರತಿಕ್ರಿಯಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎನ್ಪಿಆರ್ ಅರ್ಜಿಯಲ್ಲಿನ ವಿವಾದಾಸ್ಪದ ಸಂಗತಿಗಳನ್ನು ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು.
ಸಿಎಎ ವಿರುದ್ಧ ನಿರ್ಣಯ ಪಾಸ್: ಇದು ಮಮತಾ ಸರ್ಕಾರದ ನಿರ್ಧಾರ
ಜತೆಗೆ ಅರ್ಜಿಯಲ್ಲಿ ತೃತೀಯ ಲಿಂಗಿಗಳ ಕಾಲಂಅನ್ನು ಅಳವಡಿಸುವಂತೆ ತಮ್ಮ ಸರ್ಕಾರ ಕೇಳಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಹಾರದಲ್ಲಿ ಜೆಡಿಯು ಮಿತ್ರಪಕ್ಷವಾಗಿರುವ ಬಿಜೆಪಿಯ ಯಾವ ಸದಸ್ಯರೂ ಸದನದಲ್ಲಿ ಹಾಜರಿರಲಿಲ್ಲ ಎನ್ನಲಾಗಿದೆ.
ಎನ್ಆರ್ಸಿ/ಎನ್ಪಿಆರ್ಅನ್ನು ಅನುಷ್ಠಾನಗೊಳಿಸದೆ ಇರಲು ಬಿಹಾರ ವಿಧಾನಸಭೆ ಅವಿರೋಧವಾಗಿ ನಿರ್ಣಯ ಅಂಗೀಕರಿಸಿದೆ ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದರು.
ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜಸ್ಥಾನ ಸರ್ಕಾರ
ಎನ್ಪಿಆರ್ ಕುರಿತಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಂದಲೂ ಪ್ರತಿಕ್ರಿಯೆ ನೀಡಿದೆ. ಈ ಸಂದರ್ಭವನ್ನು ಎನ್ಆರ್ಸಿ ಕುರಿತಾದ ತಮ್ಮ ಸರ್ಕಾರದ ನಿಲುವು ಪ್ರದರ್ಶಿಸಲು ಬಳಸಿಕೊಂಡಿರುವುದಾಗಿ ನಿತೀಶ್ ಕುಮಾರ್ ತಿಳಿಸಿದರು.
'ಎನ್ಪಿಆರ್ ಮಾದರಿಯು 2010ರಲ್ಲಿ ಹೇಗಿತ್ತೋ ಹಾಗೆಯೇ ಇರಲಿ ಎಂದು ಕೇಂದ್ರ ಸರ್ಕಾರಕ್ಕೆ ಬಿಹಾರ ಸರ್ಕಾರ ತಿಳಿಸಿದೆ. ಒಂದೇ ಒಂದು ಬದಲಾವಣೆಯೆಂದರೆ ಅದರಲ್ಲಿ ತೃತೀಯಲಿಂಗಿಗಳ ಕಾಲಂ ಅಳವಡಿಸಬೇಕಿದೆ. ಬಿಹಾರಕ್ಕೆ ಎನ್ಆರ್ಸಿ ಅಗತ್ಯವಿಲ್ಲವೆಂದೂ ನಾವು ಅವರಿಗೆ ತಿಳಿಸಿದ್ದೇವೆ' ಎಂದರು.