'ಲಾಲೂ ಪ್ರಸಾದ್ ಕುಟುಂಬ ಸೊಸೆಗೆ ಏನು ಮಾಡಿದೆ ನೋಡಿ'
ಪಟ್ನಾ, ಸೆಪ್ಟೆಂಬರ್ 7: ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಪ್ರಚಾರ ಶುರುಮಾಡಿದ್ದಾರೆ. ತಮ್ಮ ಬದ್ಧ ವೈರಿ ಲಾಲು ಪ್ರಸಾದ್ ಅವರನ್ನು ಗುರಿಯಾಗಿರಿಸಿ ಅವರು ಪ್ರಚಾರ ಆರಂಭಿಸಿದ್ದಾರೆ. 15 ವರ್ಷಗಳ ಆರ್ಜೆಡಿ ಆಡಳಿತಕ್ಕೆ ತಮ್ಮ 15 ವರ್ಷದ ಆಡಳಿತವನ್ನು ಹೋಲಿಸುವಂತೆ ಅವರು ಮತದಾರರಿಗೆ ಮನವಿ ಮಾಡಿದ್ದಾರೆ.
ತಮ್ಮ ಚುನಾವಣಾ ಪ್ರಚಾರದ ಆರಂಭದಲ್ಲಿ ನಿತೀಶ್ ಕುಮಾರ್, ಲಾಲೂ ಕುಟುಂಬದ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ. ಲಾಲೂ ಪ್ರಸಾದ್ ಮೊದಲ ಮಗ ತೇಜ್ ಪ್ರತಾಪ್ ಯಾದವ್ ಅವರಿಂದ ದೂರವಾಗಿರುವ ಚಂದ್ರಿಕ ರೈ ಮಗಳು ಐಶ್ವರ್ಯಾ ರೈ ಕುರಿತು ಸಮಾವೇಶದಲ್ಲಿ ಪ್ರಸ್ತಾಪಿಸಿದ್ದಾರೆ.
'ಮಾಜಿ ಮುಖ್ಯಮಂತ್ರಿ ಡರೋಗಾ ಪ್ರಸಾದ್ ರೈ ಅವರ ಮೊಮ್ಮಗಳು ಮತ್ತು ಕಳೆದ ತಿಂಗಳು ಜೆಡಿಯು ಸೇರ್ಪಡೆಯಾದ ಚಂದ್ರಿಕ ರೈ ಅವರ ಮಗಳು ಐಶ್ವರ್ಯಾ ರೈ ಅವರನ್ನು ಲಾಲೂ ಕುಟುಂಬ ಹೇಗೆ ನಡೆಸಿಕೊಂಡಿತು ನೋಡಿ' ಎಂದು ನಿತೀಶ್ ಹೇಳಿದ್ದಾರೆ. ಮುಂದೆ ಓದಿ.

ಐಶ್ವರ್ಯಾ ರೈ ಸ್ಪರ್ಧೆ?
ಈ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಐಶ್ವರ್ಯಾರನ್ನು ಚುನಾವಣೆಗೆ ಇಳಿಸುವ ಬಗ್ಗೆಯೂ ನಿತೀಶ್ ಸುಳಿವು ನೀಡಿದ್ದಾರೆ. 'ಆರ್ಜೆಡಿಯ ದೇಶಭಕ್ತರನ್ನು ಅವರು ಹೇಗೆಲ್ಲ ಅವಮಾನಿಸಿದ್ದಾರೆ. ಇದನ್ನು ನಾವು ಜನರ ಮುಂದೆ ಕೊಂಡೊಯ್ಯುತ್ತೇವೆ' ಎಂದಿದ್ದಾರೆ.

ರಾಬ್ಡಿ ದೇವಿ ವಿರುದ್ಧ ದೂರು
ತೇಜ್ ಪ್ರತಾಪ್ ಯಾದವ್ ಮತ್ತು ಐಶ್ವರ್ಯಾ ಮದುವೆಯಾಗಿ ಆರು ತಿಂಗಳಲ್ಲಿಯೇ ಕಳೆದ ವರ್ಷ ದೂರವಾಗಿದ್ದರು. ತೇಜ್ ಪ್ರತಾಪ್ ಜತೆ ಜಗಳದ ನಂತರ ಆರಂಭದಲ್ಲಿ ಲಾಲೂ ಅವರ ಕುಟುಂಬದ ಜತೆಗೆ ಇದ್ದರೂ ಬಳಿಕ ಐಶ್ವರ್ಯಾ, ಪತಿ ಹಾಗೂ ಆತನ ಮನೆಯವರು ಕೌಟುಂಬಿಕ ಹಿಂಸಾಚಾರ ನೀಡುತ್ತಿದ್ದಾರೆ ಎಂದು ಪಟ್ನಾ ಪೊಲೀಸರಿಗೆ ದೂರು ನೀಡಿದ್ದರು. ಅತ್ತೆ ರಾಬ್ಡಿ ದೇವಿ ತಮಗೆ ಹೊಡೆದು ಹಿಂಸೆ ನೀಡಿ ಮನೆಯಿಂದ ಹೊರದಬ್ಬಿದ್ದಾಗಿ ಆರೋಪಿಸಿದ್ದರು.

ಜೆಡಿಯುಗೆ ಯಾವ ಲಾಭವೂ ಇಲ್ಲ
ಆರ್ಜೆಡಿಯಲ್ಲಿದ್ದ ಐಶ್ವರ್ಯಾ ತಂದೆ ಚಂದ್ರಕ ರೈ ಪಕ್ಷ ತೊರೆದು ಜೆಡಿಯು ಸೇರಿದ್ದರು. ಲಾಲೂ ಅವರನ್ನು ರಾಜಕೀಯವಾಗಿ ಎದುರಿಸುವುದಾಗಿ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರಾಗಿದ್ದ ಚಂದ್ರಿಕ ರೈ ತಂದೆ ಡರೋಗಾ ಪ್ರಸಾದ್ ರೈ 1970ರ ದಶಕದಲ್ಲಿ ಬಿಹಾರ ಮುಖ್ಯಮಂತ್ರಿಯಾಗಿದ್ದರು. ಚಂದ್ರಿಕ ಜೆಡಿಯು ಸೇರಿರುವುದರಿಂದ ಜೆಡಿಯುಗೆ ಏನೂ ಸಿಗುವುದಿಲ್ಲ ಎಂದು ತೇಜ್ ಪ್ರತಾಪ್ ಟೀಕಿಸಿದ್ದಾರೆ.

ಸುಶಾಂತ್ ಸಿಂಗ್ ಪ್ರಕರಣ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಪ್ರಸ್ತಾಪಿಸಿದ ನಿತೀಶ್, ಮುಂಬೈ ಪೊಲೀಸರು ಏನೂ ಕೆಲಸ ಮಾಡದ ಕಾರಣಕ್ಕಾಗಿ ತಾವು ಮಧ್ಯಸ್ಥಿಕೆ ವಹಿಸಿದ ಪರಿಣಾಮ ಪ್ರಕರಣ ಸಿಬಿಐ ತನಿಖೆಗೆ ಹೋಗಿದೆ. ಸುಶಾಂತ್ ಅವರಿಗೆ ನ್ಯಾಯ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.












Click it and Unblock the Notifications