ಗೋವಾ; ಬಿಜೆಪಿ ಮುಂದೆ ಒಂದು ಆಯ್ಕೆ ಇಟ್ಟ ಉತ್ಪಲ್ ಪರಿಕ್ಕರ್!
ಪಣಜಿ, ಜನವರಿ 23; ಗೋವಾ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. 40 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಗೋವಾ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಕ್ಷೇತ್ರದ ಹಾಲಿ ಶಾಸಕ ಅಟನಸಿಯೋ ಮೊನ್ನೆರ್ರೇಟ್ ಅಭ್ಯರ್ಥಿ ಎಂದು ಗುರುವಾರ ಘೋಷಣೆ ಮಾಡಿದೆ. ಟಿಕೆಟ್ ಕೈ ತಪ್ಪಿದ್ದರಿಂದ ಶುಕ್ರವಾರ ಉತ್ಪಲ್ ಪರಿಕ್ಕರ್ ಬಿಜೆಪಿ ತೊರೆದಿದ್ದಾರೆ.
ಈ ಕುರಿತು ಮಾತನಾಡಿದ ಉತ್ಪಲ್ ಪರಿಕ್ಕರ್, "ಬಿಜೆಪಿ ತೊರೆಯುವುದು ನನ್ನ ಕಠಿಣ ತೀರ್ಮಾನವಾಗಿತ್ತು. ಈಗಲೂ ನಾನು ಚುನಾವಣಾ ಕಣದಿಂದ ಹಿಂದೆ ಸರಿಯಲು ಸಿದ್ಧ. ಇದಕ್ಕಾಗಿ ಬಿಜೆಪಿ ಪಣಜಿಯಲ್ಲಿ ಒಳ್ಳೆಯ ಅಭ್ಯರ್ಥಿ ಹಾಕಬೇಕು" ಎಂದು ಪಕ್ಷಕ್ಕೆ ಆಯ್ಕೆಯನ್ನು ನೀಡಿದ್ದಾರೆ.
2019ರಲ್ಲಿ ನಡೆದ ಪಣಜಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಗೆದ್ದಿದ್ದ ಶಾಸಕ ಅಟನಸಿಯೋ ಮೊನ್ನೆರ್ರೇಟ್ ಬಳಿಕ ಬಿಜೆಪಿ ಸೇರಿದ್ದಾರೆ. ಅವರು ಅಪ್ತಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಸೇರಿ ಹಲವು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಆದ್ದರಿಂದ ಉತ್ಪಲ್ ಪರಿಕ್ಕರ್ ಅಟನಸಿಯೋ ಮೊನ್ನೆರ್ರೇಟ್ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿ ನನ್ನ ಹೃದಯದಲ್ಲಿದೆ
ಭಾನುವಾರ ಪಿಟಿಐ ಜೊತೆ ಮಾತನಾಡಿದ ಉತ್ಪಲ್ ಪರಿಕ್ಕರ್, "ಬಿಜೆಪಿ ನನ್ನ ಹೃದಯದಲ್ಲಿದೆ. ಪಕ್ಷ ತೊರೆಯುವುದು ನನ್ನ ಕಠಿಣ ತೀರ್ಮಾನವಾಗಿತ್ತು. ಪಕ್ಷದ ಉಳಿವಿಗಾಗಿ ನಾನು ಈ ತೀರ್ಮಾನ ಕೈಗೊಂಡೆ. ಈಗಲೂ ಪಕ್ಷ ಪಣಜಿಯಲ್ಲಿ ಅಭ್ಯರ್ಥಿ ಬದಲಾವಣೆ ಮಾಡುವುದಾದರೆ ನಾನು ಚುನಾವಣಾ ಕಣದಿಂದ ಹಿಂದೆ ಸರಿಯಲು ಸಿದ್ಧವಾಗಿದ್ದೇನೆ" ಎಂದು ಹೇಳಿದರು.

ತಂದೆಯಂತೆಯೇ ಆಯಿತು
"ಬಿಜೆಪಿ ಬಿಡುವ ತೀರ್ಮಾನದಿಂದ ನನಗೆ ಸಂತಸವೇನು ಆಗಿಲ್ಲ. ಆದರೆ ಕೆಲವು ಸಮಯದಲ್ಲಿ ಕಠಿಣ ತೀರ್ಮಾನ ಕೈಗೊಳ್ಳುವುದು ಅನಿವಾರ್ಯ ಆಗಿರುತ್ತದೆ. ಪಣಜಿಯಲ್ಲಿ ಉತ್ತಮ ಅಭ್ಯರ್ಥಿ ಕಣಕ್ಕಿಳಿಸಿದರೆ ನಾನು ಚುನಾವಣಾ ಕಣದಿಂದ ಹಿಂದೆ ಸರಿಯಲು ಸಿದ್ಧ. ನನಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ನನ್ನ ತಂದೆಯನ್ನು 1994ರಲ್ಲಿ ಪಕ್ಷದಿಂದ ಹೊರ ಹಾಕಲು ಮಾಡಿದ ಪ್ರಯತ್ನದಂತೆಯೇ ಇದೆ" ಎಂದು ಉತ್ಪಲ್ ಪರಿಕ್ಕರ್ ನೆನಪು ಮಾಡಿಕೊಂಡರು.

ಇತಿಹಾಸ ತಿಳಿದವರಿಗೆ ಅರ್ಧವಾಗುತ್ತದೆ
"ಇತಿಹಾಸ ತಿಳಿದವರಿಗೆ ನಾನು ಹೇಳುತ್ತಿರುವುದು ಅರ್ಥವಾಗುತ್ತದೆ. ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಪ್ರಮುಖವಾಗಿರುವ ಪ್ರದೇಶಗಳಲ್ಲಿ ಬಿಜೆಪಿ ತನ್ನ ಅಧಿಪತ್ಯ ಸ್ಥಾಪಿಸಲು ಇದು ಸಮಯವಾಗಿದೆ" ಎಂದು ಉತ್ಪಲ್ ಪರಿಕ್ಕರ್ ಹೇಳಿದರು.
"ಮನೋಹರ್ ಪರಿಕ್ಕರ್ ಜನರ ಬೆಂಬಲವನ್ನು ಗಳಿಸಿದ್ದರು. ಆದ್ದರಿಂದ ಅವರನ್ನು ಪಕ್ಷದಿಂದ ಹೊರಹಾಕಲು ಸಾಧ್ಯವಾಗಲಿಲ್ಲ. ಅಂದು ನನ್ನ ತಂದೆಯ ವಿರುದ್ಧ ಇದ್ದವರು ಇಂದಿಗೂ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ" ಎಂದು ಉತ್ಪಲ್ ಪರಿಕ್ಕರ್ ತಿಳಿಸಿದರು.

ಟಿಕೆಟ್ ನಿರಾಕರಿಸಲಾಯಿತು
"2019ರಲ್ಲಿ ಪಣಜಿ ಕ್ಷೇತ್ರದಲ್ಲಿ ನನ್ನ ತಂದೆಯ ಸಾವಿನಿಂದಾಗಿಯೇ ಉಪ ಚುನಾವಣೆ ಎದುರಾಯಿತು. ಅಂತಹ ಸಮಯದಲ್ಲಿ ನನಗೆ ಬೆಂಬಲವಿದ್ದರೂ ಟಿಕೆಟ್ ನಿರಾಕರಿಸಲಾಯಿತು. ನಾನು ಪಕ್ಷ, ಸಂಘಟನೆ ಮೇಲಿನ ನಂಬಿಕೆಯಿಂದ ಆ ತೀರ್ಮಾನ ಒಪ್ಪಿಕೊಂಡೆ. ಜೆ. ಪಿ. ನಡ್ಡಾ ಗೋವಾಕ್ಕೆ ಬಂದಾಗ ಬಿಜೆಪಿಯ 5 ದಂಪತಿಗಳು ಟಿಕೆಟ್ ಕೇಳಿದರು. ಮನೋಹರ್ ಪರಿಕ್ಕರ್ ಬದುಕಿದ್ದರೆ ಗೋವಾದ ಯಾವ ಶಾಸಕನೂ ಪತ್ನಿಗೆ ಟಿಕೆಟ್ ಕೇಳುವ ಧೈರ್ಯ ಮಾಡುತ್ತಿರಲಿಲ್ಲ್" ಎಂದು ಉತ್ಪಲ್ ಪರಿಕ್ಕರ್ ಹೇಳಿದರು.

ಗಂಡ-ಹೆಂಡತಿಗೆ ಟಿಕೆಟ್ ಕೊಟ್ಟ ಬಿಜೆಪಿ
ಗೋವಾ ಚುನಾವಣೆಗೆ ಬಿಜೆಪಿ ಅಟನಸಿಯೋ ಮೊನ್ನೆರ್ರೇಟ್ಗೆ ಪಂಜಿಯಲ್ಲಿ ಮತ್ತು ಅವರ ಪತ್ನಿ ಜನೀಫರ್ಗೆ ತಲೈಗಾವ್ ಕ್ಷೇತ್ರದಲ್ಲಿ ಟಿಕೆಟ್ ನೀಡಿದೆ. ಆರೋಗ್ಯ ಸಚಿವ ವಿಶ್ವನಾಥ್ ರಾಣೆ ಮತ್ತು ಅವರ ಪತ್ನಿ ವಿದ್ಯಾ ರಾಣೆಗೂ ಚುನಾವಣೆಯಲ್ಲಿ ಕಣಕ್ಕಿಳಿಯಲು ಟಿಕೆಟ್ ಕೊಟ್ಟಿದೆ.












Click it and Unblock the Notifications