ಗೋವಾದಲ್ಲಿ ಅಧಿಕಾರ ಸ್ಥಾಪಿಸಲು ಮುಂದಾದ ಕಾಂಗ್ರೆಸ್
ಪಣಜಿ, ಮಾರ್ಚ್ 17: ಸಿಎಂ ಮನೋಹರ ಪರಿಕ್ಕರ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಆಡಳಿತ ಯಂತ್ರ ಕುಸಿದಿದ್ದು, ಬಿಜೆಪಿ ಸರ್ಕಾರಕ್ಕೆ ಅಗತ್ಯ ಬಹುಮತವಿಲ್ಲ ಎಂದು ಕಾಂಗ್ರೆಸ್ ರಾಜ್ಯಪಾಲರಿಗೆ ಪತ್ರ ಬರೆದಿದೆ. ಈ ನಡುವೆ ಹೊಸ ನಾಯಕತ್ವ ಹುಡುಕಾಟದಲ್ಲಿ ಬಿಜೆಪಿ ತೊಡಗಿದೆ ಎಂಬ ಸುದ್ದಿಯಿದೆ.
ಭಾನುವಾರದಂದು ಬಿಜೆಪಿ ಶಾಸಕರ ತುರ್ತುಸಭೆ ನಡೆಸಲಾಯಿತು.ಸಭೆ ನಂತರ ಮಾತನಾಡಿದ ಬಿಜೆಪಿ ಶಾಸಕ, ಸ್ಪೀಕರ್ ಮೈಕಲ್ ಲೋಬೋ 'ಗೋವಾದಲ್ಲಿ ಪರಿಕ್ಕರ್ ಇರುವ ತನಕ, ನಾಯಕತ್ವ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಡಿಸಿಎಂ ಹಾಗೂ ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜಾ ನಿಧನ ಹಿನ್ನೆಲೆಯಲ್ಲಿ ಗೋವಾದಲ್ಲಿ ಬಿಜೆಪಿ ತನ್ನ ಬಲವನ್ನು ಕಳೆದುಕೊಂಡಿದೆ. ಬಿಜೆಪಿ ಶಾಸಕ ಪಾಂಡುರಂಗ ಅನಾರೋಗ್ಯಕ್ಕೆ ತುತ್ತಾದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆಡಳಿತ ಸರಾಗವಾಗಿ ಸಾಗುತ್ತಿಲ್ಲ. 'ಬಹುಮತ ಸಾಬೀತಿಗೆ ಮುಂದಾದರೆ ವಿಧಾನಸಭೆಯಲ್ಲಿ ಬಿಜೆಪಿ ವಿಫಲವಾಗಲಿದೆ. ಹಾಗಾಗಿ ಸರ್ಕಾರ ರಚನೆಗೆ ನಮಗೆ ಅವಕಾಶ ನೀಡಬೇಕು' ಎಂದು ರಾಜ್ಯಪಾಲೆ ಮೃದುಲಾ ಸಿನ್ಹಾಗೆ ವಿಪಕ್ಷ ನಾಯಕ ಚಂದ್ರಕಾಂತ್ ಕವಳೇಕರ್ ಅವರು ಪತ್ರ ಬರೆದಿದ್ದಾರೆ.
ಈ ಹಿಂದೆಯೂ ಸರ್ಕಾರ ರಚನೆಗೆ ಅವಕಾಶಕ್ಕೆ ಕೋರಿ ರಾಜ್ಯಪಾಲರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದರು. ಆದರೆ, ಸಂಖ್ಯಾಬಲ ಹೊಂದಿದ್ದರೂ ಆಡಳಿತ ಚುಕ್ಕಾಣಿ ಹಿಡಿಯಲು ವಿಫಲವಾದ ಕಾಂಗ್ರೆಸ್ ಅನೇಕ ಬಾರಿ ವಿಫಲ ಯತ್ನ ಮಾಡಿದೆ.
17 ಶಾಸಕರ ಬಲದೊಂದಿಗೆ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದರೂ, ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿ, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮೂವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿ, ಆಡಳಿತ ನಡೆಸುತ್ತಿದೆ. ಫೆಬ್ರವರಿ 2017ರ ನಂತರ ಕಾಂಗ್ರೆಸ್ಸಿನಿಂದ ಮೂವರು ಶಾಸಕರು, ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಶಾಸಕರ ಬಲಾಬಲ 40
ಬಿಜೆಪಿ - 12 ಪ್ಲಸ್ ಸಿಎಂ ಪರಿಕ್ಕರ್ ಮತ್ತು ಶಾಸಕ ಪಾಂಡುರಂಗ ಮದ್ಕೇಕರ್
ಗೋವಾ ಫಾರ್ವಡ್ ಪಾರ್ಟಿ - 3
ಎಂಜಿಪಿ : 3
ಪಕ್ಷೇತರ : 3
ವಲಸೆ ಬಂದವರು : 2
ಒಟ್ಟು : 25
ಕಾಂಗ್ರೆಸ್ಸಿಗೆ ಸಂಖ್ಯಾಬಲವಿಲ್ಲ
ಕಾಂಗ್ರೆಸ್ -14
ಎನ್ಸಿಪಿ - 1 ಮಾತ್ರ ಹೊಂದಿದೆ.

ಬಹುಮತ ಸಾಬೀತುಪಡಿಸಲು ಕನಿಷ್ಠ 21 ಸ್ಥಾನ
17 ಶಾಸಕರ ಬಲದೊಂದಿಗೆ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದರೂ, ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿ, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮೂವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿ, ಆಡಳಿತ ನಡೆಸುತ್ತಿದೆ. ಫೆಬ್ರವರಿ 2017ರ ನಂತರ ಕಾಂಗ್ರೆಸ್ಸಿನಿಂದ ಮೂವರು ಶಾಸಕರು, ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಬಹುಮತ ಸಾಬೀತುಪಡಿಸಲು ಕನಿಷ್ಠ 21 ಸ್ಥಾನವಾದ್ರೂ ಬೇಕು. ಡಿಸೋಜಾ ಸಾವು ಮತ್ತು ಸುಭಾಷ್ ಶಿರೋಡ್ಕರ್, ದಯಾ ನಂದ್ ಸೊಪ್ಟೆ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಹೀಗಾಗಿ, ಸದನದ ಒಟ್ಟು ಸಂಖ್ಯಾಬಲ 40ರಿಂದ 37ಕ್ಕೆ ಇಳಿದಿದೆ. ಹೇಗಾದರೂ ಕಾಂಗ್ರೆಸ್ಸಿಗೆ ಕನಿಷ್ಠ 4+5 ಸ್ಥಾನಗಳ ಕೊರತೆ ಕಂಡು ಬರುತ್ತದೆ.

ವಿಶೇಷ ಅಧಿವೇಶನ ಕರೆಯುವಂತೆ ಕಾಂಗ್ರೆಸ್ ಆಗ್ರಹ
ಆಡಳಿತ ವಿರೋಧಿ ಅಲೆ ಆರಂಭವಾಗಿದ್ದು, ಪ್ರಜಾಪ್ರಭುತ್ವವನ್ನು ಬಲಿಕೊಟ್ಟು, ಪ್ರಜೆಗಳಿಗೆ ಬಿಜೆಪಿ ಅನ್ಯಾಯ ಮಾಡಿದೆ. ಆಡಳಿತ ದಾಹದಿಂದ ಬಿಜೆಪಿ ಬಳಲುತ್ತಿದೆ, ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಅಡಳಿತ ನಡೆಸುವ ಯಾವುದೇ ನೈತಿಕ, ಸಾಂವಿಧಾನಿಕ ಹಕ್ಕಿಲ್ಲ, ಕೂಡಲೇ ವಿಧಾನಸಭೆ ವಿಸರ್ಜಿಸಬೇಕು. ವಿಶೇಷ ಅಧಿವೇಶನಕ್ಕೆ ಕರೆ ನೀಡಿ, ಬಹುಮತ ಸಾಬೀತುಪಡಿಸಲು ನಮಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಹೇಳಿದ್ದಾರೆ.

ಮನೋಹರ್ ಬಗ್ಗೆ ಬಿಜೆಪಿಗೆ ಭಯ
ಮನೋಹರ್ ಬಗ್ಗೆ ಬಿಜೆಪಿಗೆ ಭಯ: ಮನೋಹರ್ ಪರಿಕ್ಕಾರ್ ಅವರನ್ನು ಗೋವಾ ಸಿಎಂ ಸ್ಥಾನದಿಂದ ಕೆಳಗಿಸಿದರೆ, ಬಿಜೆಪಿಗೆ ಇಲ್ಲಿನ ಸರ್ಕಾರ ಕುಸಿಯುವ ಭೀತಿ ಇದೆ. ಅಲ್ಲದೆ, ಆನಂತರ ಮನೋಹರ್ ಅವರು ರಫೆಲ್ ಒಪ್ಪಂದ ಬಗ್ಗೆ ತಮಗೆ ಗೊತ್ತಿರುವ ಮಾಹಿತಿಯನ್ನು ಹೊರ ಹಾಕಬಹುದು. ಇದೆಲ್ಲವೂ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ. ಹೀಗಾಗಿ, ಅವರೇ ಕೇಳಿಕೊಂಡರೂ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

ಪ್ರಮೋದ್ ಸಾವಂತ್ ಹೆಸರು ಮುಂಚೂಣಿಯಲ್ಲಿದೆ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಗೋವಾ ಸ್ಪೀಕರ್ ಡಾ. ಪ್ರಮೋದ್ ಸಾವಂತ್ ರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ಎರಡು ಬಾರಿ ಶಾಸಕರಾದವರು ಹಾಗು ಈಗ ಗೋವಾದ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾವಂತ್ ಗೆ ಆರೆಸ್ಸೆಸ್ ಬೆಂಬಲವೂ ಇದೆ. ಇತ್ತೀಚೆಗಷ್ಟೇ ಸಾವಂತ್ ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ರನ್ನು ಭೇಟಿಯಾಗಿ ಬಂದ ಬಳಿಕ, ಈ ಬೆಳವಣಿಗೆ ನಡೆದಿದೆ. ವೃತ್ತಿಯಿಂದ ಆಯುರ್ವೇದ ವೈದ್ಯರಾಗಿದ್ದಾರೆ. ಇವರ ಪತ್ನಿ ಸುಲಕ್ಷಣಾ ಅವರು ಕೆಮಿಸ್ಟ್ರಿ ಟೀಚರ್ ಆಗಿದ್ದು, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದಾರೆ.












Click it and Unblock the Notifications