ಗೋವಾ ಚುನಾವಣೆ; ಪರಿಕ್ಕರ್ ಪುತ್ರನಿಗೆ ಬಿಜೆಪಿ ಟಿಕೆಟ್ ಸಿಗಲಿದೆಯೇ?
ಪಣಜಿ, ನವೆಂಬರ್ 29; ಗೋವಾದಲ್ಲಿ ವಿಧಾನಸಭೆ ಚುನಾವಣೆ ಸಿದ್ಧತೆಗಳು ನಡೆಯುತ್ತಿವೆ. 2022ರ ಫೆಬ್ರವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗೋವಾದಲ್ಲಿ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ತಯಾರಿ ಆರಂಭಿಸಿದೆ.
ಈ ಬಾರಿಯ ಗೋವಾ ವಿಧಾನಸಭೆ ಚುನಾವಣೆಯ ಪ್ರಮುಖ ಆಕರ್ಷಣೆ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಾಲ್ ಪರಿಕ್ಕರ್. ಈಗಾಗಲೇ 2022ರ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.
ಮುಂದಿನ ಚುನಾವಣೆಗೆ ಪಣಜಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಉತ್ಪಾಲ್ ಪರಿಕ್ಕರ್ ಘೋಷಿಸಿದ್ದಾರೆ. ಆದರೆ ಅವರಿಗೆ ಟಿಕೆಟ್ ನೀಡುವ ಕುರಿತು ಬಿಜೆಪಿಯಿಂದ ಯಾವುದೇ ಖಚಿತತೆ ಸಿಕ್ಕಿಲ್ಲ. ಚುನಾವಣೆಗೆ ಇನ್ನೂ ಸಮಯವಿದ್ದರೂ ಈ ಬಗ್ಗೆ ರಾಜ್ಯ ರಾಜಕೀಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ಗೋವಾ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಉಸ್ತುವಾರಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್. ಕೆಲವು ತಿಂಗಳ ಹಿಂದೆ ಉತ್ಪಾಲ್ ಪರಿಕ್ಕರ್ ಭೇಟಿಯಾಗಿದ್ದ ಅವರು, "ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡುವಂತೆ" ಸ್ನೇಹಯುತವಾಗಿ ಸಲಹೆ ನೀಡಿದ್ದರು.
ಈ ಸಲಹೆಯನ್ನು ಒಪ್ಪಿದ್ದ ಉತ್ಪಾಲ್ ಪರಿಕ್ಕರ್ ಬಳಿಕ ತಮ್ಮ ಮನಸ್ಸು ಬದಲಿಸಿಕೊಂಡು ಚುನಾವಣೆಗೆ ಪಣಜಿ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದರು. ಪಣಜಿ ಕ್ಷೇತ್ರವನ್ನು ದಿ. ಮನೋಹರ್ ಪರಿಕ್ಕರ್ ಪ್ರತಿನಿಧಿಸುತ್ತಿದ್ದರು. 2019ರಲ್ಲಿ ಮೇನಲ್ಲಿ ಮನೋಹರ್ ಪರಿಕ್ಕರ್ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಾಗಲೇ ಉತ್ಪಾಲ್ ಪರಿಕ್ಕರ್ ಸ್ಪರ್ಧಿಸಲು ಬಯಸಿದ್ದರು.
ಬಿಜೆಪಿಗೆ ಸೋಲು; ಪಣಜಿ ಕ್ಷೇತ್ರದ ಉಪ ಚುನಾವಣೆ ಉತ್ಪಾಲ್ ಪರಿಕ್ಕರ್ಗೆ ಟಿಕೆಟ್ ಸಿಗಲಿಲ್ಲ. ಬಿಜೆಪಿಯಿಂದ ಸಿದ್ಧಾರ್ಥ್ ಕುನ್ಸಿಲಿಯೆಂಕರ್ ಕಣಕ್ಕಿಳಿದರು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ಅಟನಸಿಯೋ ಮೊನ್ನೆರ್ರೇಟ್ 1,758 ಮತಗಳ ಅಂತರಿಂದ ಸಿದ್ಧಾರ್ಥ್ ಕುನ್ಸಿಲಿಯೆಂಕರ್ ಸೋಲಿಸಿದರು. ಈ ಮೂಲಕ 1994ರ ನಂತರ ಮನೋಹರ್ ಪರಿಕ್ಕರ್ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಕಾಂಗ್ರೆಸ್ ಪಾಲಾಯಿತು.
ಆದರೆ ಈಗ ಉತ್ಪಾಲ್ ಪರಿಕ್ಕರ್ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರ ಪ್ರಕಾರ ಉತ್ಪಾಲ್ ಪರಿಕ್ಕರ್ ಜನರ ಜೊತೆ ಸಂಪರ್ಕದಲ್ಲಿಲ್ಲ. ಅವರು ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯನ್ನು ಹಿಂದೆ ಹೊಂದಿರಲಿಲ್ಲ. ಉದ್ಯಮದ ಕಡೆಗೆ ಹೆಚ್ಚು ಒಲವು ಹೊಂದಿದ್ದರು.
ಉತ್ಪಾಲ್ ಪರಿಕ್ಕರ್ ಸ್ಪರ್ಧೆಗೆ ಪ್ರತಿಪಕ್ಷ ಸಹ ಟೀಕಿಸಿದ್ದವು. ಉತ್ಪಾಲ್ ಪರಿಕ್ಕರ್ಗೆ ಪರಿಕ್ಕರ್ ಹೆಸರಿನ ಬಲ ಬಿಟ್ಟರೆ ರಾಜಕೀಯ ಏನೂ ತಿಳಿದಿಲ್ಲ ಎಂದು ದೂರಿದ್ದವು. ಅಂತಿಮವಾಗಿ ಬಿಜೆಪಿ ಪಣಜಿ ಉಪ ಚುನಾವಣೆಯಲ್ಲಿ ಉತ್ಪಾಲ್ ಪರಿಕ್ಕರ್ಗೆ ಟಿಕೆಟ್ ನೀಡಿದೆ ಕ್ಷೇತ್ರದಲ್ಲಿ ಸೋಲು ಕಂಡಿತು.
ಕೆಲವು ದಿನಗಳ ಹಿಂದೆ ಮಾತನಾಡಿದ್ದ ಉತ್ಪಾಲ್ ಪರಿಕ್ಕರ್, "ನಾನು ನನ್ನ ಆಸಕ್ತಿಯನ್ನು ರಾಜ್ಯ ಮತ್ತು ಕೇಂದ್ರ ನಾಯಕರಿಗೆ ತಿಳಿಸಿದ್ದೇನೆ. ನನ್ನ ಸ್ಪರ್ಧೆ ಬಗ್ಗೆ ಅವರು ತೀರ್ಮಾನ ಕೈಗೊಳ್ಳಬೇಕು. ಪಣಜಿ ಕ್ಷೇತ್ರದ ಟಿಕೆಟ್ ಕೈ ತಪ್ಪಿದರೆ ಕಠಿಣ ತೀರ್ಮಾನ ಕೈಗೊಳ್ಳುತ್ತೇನೆ" ಎಂದು ಹೇಳಿದ್ದರು.
"ನನ್ನ ತಂದೆ ನಾನು ರಾಜಕೀಯಕ್ಕೆ ಬರಬಾರದು ಎಂದು ಬಯಸಿದ್ದರು. ನಮ್ಮ ತಂದೆ ರಾಜಕೀಯ ನಿಲುವು ಮಾರ್ಚ್ 17, 2019ರಲ್ಲಿ ಅವರ ಜೊತೆಯೇ ಕೊನೆಯಾಯಿತು. ಈಗ ನಾನು ರಾಜಕೀಯದಲ್ಲಿ ಬದಲಾವಣೆ ತರಲು ಚುನಾವಣೆಗೆ ಸ್ಪರ್ಧೆ ಮಾಡಲು ಬಯಸಿದ್ದೇನೆ" ಎಂದು ತಿಳಿಸಿದ್ದರು.
ಪಣಜಿಯೇ ಏಕೆ?; ಉತ್ಪಾಲ್ ಪರಿಕ್ಕರ್ ಪಣಜಿ ಕ್ಷೇತ್ರದಿಂದಲೇ ಸ್ಪರ್ಧಿಸಲು ಏಕೆ ಬಯಸಿದ್ದಾರೆ? ಎಂಬುದು ಸಹ ಪ್ರಶ್ನೆಯಾಗಿದೆ. 1994ರಲ್ಲಿ ದಿ. ಮನೋಹರ್ ಪರಿಕ್ಕರ್ ಮೊದಲ ಬಾರಿಗೆ ಪಣಜಿಯಲ್ಲಿ ಗೆದ್ದಿದ್ದರು. 2014ರ ತನಕ ಕ್ಷೇತ್ರದಲ್ಲಿ ಗೆದ್ದಿದ್ದರು. ಬಳಿಕ ಕೇಂದ್ರ ರಕ್ಷಣಾ ಸಚಿವರಾಗಿ ನೇಮಕಗೊಂಡರು. 2018ರ ಚುನಾವಣೆಯಲ್ಲಿ ಅವರು ಪುನಃ ಪಣಜಿಯಲ್ಲಿ ಗೆದ್ದಿದ್ದರು.
ಉತ್ಪಾಲ್ ಪರಿಕ್ಕರ್ ತಂದೆಯ ಕೆಲಸಗಳನ್ನು ಪೂರ್ಣಗೊಳಿಸಲು ಬಯಸಿದ್ದು ಪಣಜಿ ಕ್ಷೇತ್ರವನ್ನೇ ಚುನಾವಣೆಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಬಿಜೆಪಿ ಟಿಕೆಟ್ ನೀಡಲಿದೆಯೇ? ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.












Click it and Unblock the Notifications