'ಕಾಂಗ್ರೆಸ್ ಛೋಡೋ, ಬಿಜೆಪಿ ಕೋ ಜೋಡೋ': ಗೋವಾದಲ್ಲಿ 8 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ
ಪಣಜಿ, ಸೆಪ್ಟೆಂಬರ್ 14: ಮಾಜಿ ಸಿಎಂ ದಿಗಂಬರ್ ಕಾಮತ್, ವಿರೋಧ ಪಕ್ಷದ ನಾಯಕ ಮೈಕೆಲ್ ಲೋಬೋ ಸೇರಿದಂತೆ ಎಂಟು ಕಾಂಗ್ರೆಸ್ ಶಾಸಕರು ಇಂದು ಗೋವಾದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪ್ರಧಾನಿ ಮೋದಿ ಮತ್ತು ಸಿಎಂ ಪ್ರಮೋದ್ ಸಾವಂತ್ ಅವರ ಕೈ ಬಲಪಡಿಸಲು ಪಕ್ಷದ ಶಾಸಕರು ಬಿಜೆಪಿ ಸೇರಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಮೈಕೆಲ್ ಲೋಬೋ ಮಂಗಳವಾರ ಹೇಳಿದ್ದಾರೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ನಲ್ಲಿ ಮೂವರು ಶಾಸಕರು ಮಾತ್ರ ಇದ್ದಾರೆ.
'ಪ್ರಧಾನಿ ಮೋದಿ ಮತ್ತು ಸಿಎಂ ಪ್ರಮೋದ್ ಸಾವಂತ್ ಅವರ ಕೈ ಬಲಪಡಿಸಲು ನಾವು ಬಿಜೆಪಿ ಸೇರಿದ್ದೇವೆ... ಕಾಂಗ್ರೆಸ್ ಛೋಡೋ, ಬಿಜೆಪಿ ಕೋ ಜೋಡೋ' ಎಂದು ಕಾಂಗ್ರೆಸ್ ಮಾಜಿ ಶಾಸಕ ಮೈಕಲ್ ಲೋಬೋ ಹೇಳಿದ್ದಾರೆ. ಜೊತೆಗೆ ಅವರು ವಿಲೀನದ ಪತ್ರವನ್ನು ಕಾರ್ಯದರ್ಶಿಗೆ (ಶಾಸಕಾಂಗ) ಸಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಗೋವಾದಲ್ಲಿ ಕಾಂಗ್ರೆಸ್ ಶಾಸಕರು ಆಡಳಿತ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ, ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು "ಗೋ ಗೋವಾ ಗಾನ್" ಎಂದು ಟ್ವೀಟ್ ಮಾಡಿದ್ದಾರೆ. ಕೇಸರಿ ಪಕ್ಷಕ್ಕೆ ಸೇರಿದ ಶಾಸಕರಲ್ಲಿ ದಿಗಂಬರ್ ಕಾಮತ್, ಮೈಕೆಲ್ ಲೋಬೋ, ದೇಲಿಲಾ ಲೋಬೋ, ರಾಜೇಶ್ ಫಾಲ್ದೇಸಾಯಿ, ಕೇದಾರ್ ನಾಯಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೋ ಸಿಕ್ವೇರಾ ಮತ್ತು ರುಡಾಲ್ಫ್ ಫೆರ್ನಾಂಡಿಸ್ ಸೇರಿದ್ದಾರೆ. ಇವರು ಸಿಎಂ ಪ್ರಮೋದ್ ಸಾವಂತ್ ಅವರನ್ನು ಭೇಟಿಯ ಬಳಿಕ ಪಕ್ಷ ಸೇರಿಕೊಂಡಿದ್ದಾರೆ.
|
ಗೋವಾದಲ್ಲಿ 8 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ
"ಇಂದು ಬಿಜೆಪಿಗೆ ಸೇರ್ಪಡೆಗೊಂಡ 8 ಶಾಸಕರನ್ನು ನಾನು ಸ್ವಾಗತಿಸುತ್ತೇನೆ. ಕಾಂಗ್ರೆಸ್ 'ಭಾರತ್ ಜೋಡೋ ಯಾತ್ರೆ' ಆರಂಭಿಸಿದೆ, ಆದರೆ ನನ್ನ ಪ್ರಕಾರ 'ಕಾಂಗ್ರೆಸ್ ಛೋಡೋ ಯಾತ್ರೆ' ಗೋವಾದಲ್ಲಿ ಪ್ರಾರಂಭವಾಗಿದೆ. ದೇಶಾದ್ಯಂತ ಜನರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರುತ್ತಿದ್ದಾರೆ'' ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
|
ಬಿಜೆಪಿ ವಿರುದ್ಧ ಎಎಪಿ ನಾಯಕ ರಾಘವ್ ಚಡ್ಡಾ ಕಿಡಿ
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ರಾಘವ್ ಚಡ್ಡಾ, "ದೆಹಲಿ ಮತ್ತು ಪಂಜಾಬ್ನಲ್ಲಿ ಆಪರೇಷನ್ ಕಮಲ ವಿಫಲವಾಗಿದೆ, ಗೋವಾದಲ್ಲಿ ಯಶಸ್ವಿಯಾಗಿದೆ" ಎಂದು ಹೇಳಿದ್ದಾರೆ. ದೆಹಲಿಯಲ್ಲೂ ಎಎಪಿ ಶಾಸಕರಿಗೆ ಬಿಜೆಪಿ ಬಿಗ್ ಆಫರ್ ಕೊಟ್ಟಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಪಂಜಾಬ್ನಲ್ಲೂ ಬಿಜೆಪಿ ಆಪರೇಷನ್ ಕಮಲ ಮುಂದುರೆಸಿತು. ಆದರೆ ಅದೂ ಕೂಡ ಸಾಧ್ಯವಾಗಿಲ್ಲ. ಆದರೆ ಗೋವಾದಲ್ಲಿ ಅದು ಸಾಧ್ಯವಾಗಿದೆ ಎಂದು ಚಡ್ಡಾ ಕುಟುಕಿದ್ದಾರೆ.
ಹಿಂದಿನ ದಿನ ಗೋವಾ ಕಾಂಗ್ರೆಸ್ ಶಾಸಕಾಂಗ ಪಕ್ಷವು ಭಾರತೀಯ ಜನತಾ ಪಕ್ಷಕ್ಕೆ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿತು. ಶೀಘ್ರದಲ್ಲೇ ಎಂಟು ಕಾಂಗ್ರೆಸ್ ಶಾಸಕರು ಆಡಳಿತ ಪಕ್ಷಕ್ಕೆ ಸೇರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತನವಡೆ ಹೇಳಿದ್ದರು. ಇಂದು ಏಳು ಶಾಸಕರ ಸಮ್ಮುಖದಲ್ಲಿ ಪ್ರತಿಪಕ್ಷದ ನಾಯಕ ಮೈಕೆಲ್ ಲೋಬೊ ನಿರ್ಣಯ ಮಂಡಿಸಿದರು. ಈ ನಿರ್ಣಯವನ್ನು ಮಾಜಿ ಮುಖ್ಯಮಂತ್ರಿ ಮತ್ತು ಶಾಸಕ ದಿಗಂಬರ್ ಕಾಮತ್ ಅನುಮೋದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಕೈ' ಬಿಟ್ಟ ದಿಗಂಬರ್ ಕಾಮತ್
40 ಸದಸ್ಯರ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ 11 ಶಾಸಕರನ್ನು ಹೊಂದಿತ್ತು ಮತ್ತು ಬಿಜೆಪಿ 20 ಶಾಸಕರನ್ನು ಹೊಂದಿತ್ತು. ಆದರೀಗ 8 ಜನ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದು ಕಾಂಗ್ರೆಸ್ನಲ್ಲಿ ಮೂರು ಜನ ಶಾಸಕರು ಮಾತ್ರ ಉಳಿದಿದ್ದಾರೆ. ಕಾಂಗ್ರೆಸ್ ಪಕ್ಷ ತೊರೆದವರಲ್ಲಿ ಮಾಜಿ ಸಿಎಂ ದಿಗಂಬರ್ ಕಾಮತ್ ಪ್ರಮುಖರಾಗಿದ್ದಾರೆ. ಜುಲೈ 2019 ರಲ್ಲಿ ಇದೇ ರೀತಿಯ ಕ್ರಮದಲ್ಲಿ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬದಲಾದರು.

ಶಾಸಕರಿಗೆ 25 ಕೋಟಿ ರೂ. ಆಫರ್
ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೊ ಅವರು ಪಕ್ಷದಲ್ಲಿ ಮೂರನೇ ಎರಡರಷ್ಟು ವಿಭಜನೆಗೆ ಪ್ರಯತ್ನಿಸಿದ್ದಾರೆ ಎಂದು ಜುಲೈನಲ್ಲಿ ಕಾಂಗ್ರೆಸ್ ಆರೋಪಿಸಿತ್ತು. ಕಾಂಗ್ರೆಸ್ ಪಕ್ಷದ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಮಾತನಾಡಿ, ಕೇಸರಿ ಪಾಳಯಕ್ಕೆ ಸೇರಲು ಬಿಜೆಪಿ ಪಕ್ಷದ ಶಾಸಕರಿಗೆ 25 ಕೋಟಿ ರೂ. ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಪಕ್ಷದಲ್ಲಿ ಪಕ್ಷಾಂತರಕ್ಕೆ ಸಂಚು ರೂಪಿಸಿದ್ದಕ್ಕಾಗಿ ಗೋವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮೈಕೆಲ್ ಲೋಬೋ ಅವರನ್ನು ಕಾಂಗ್ರೆಸ್ ಪದಚ್ಯುತಗೊಳಿಸಿತ್ತು. ಪಕ್ಷದಲ್ಲಿ ಒಡಕು ಮೂಡಿಸಲು ಯತ್ನಿಸಿದ ಶಾಸಕರಾದ ಮೈಕೆಲ್ ಲೋಬೋ ಮತ್ತು ದಿಗಂಬರ್ ಕಾಮತ್ ಅವರನ್ನು ಅನರ್ಹಗೊಳಿಸುವಂತೆ ಕೋರಿ ಗೋವಾ ವಿಧಾನಸಭಾ ಸ್ಪೀಕರ್ ರಮೇಶ್ ತಾವಡ್ಕರ್ ಅವರಿಗೆ ಮನವಿ ಸಲ್ಲಿಸಿದೆ.












Click it and Unblock the Notifications