ಭಾರತದ ಪರ ಪದಾರ್ಪಣೆ ಪಂದ್ಯದಲ್ಲೇ ಫ್ಲಾಪ್, ಎದುರಾಳಿ ಶ್ರೀಲಂಕಾಗೆ ವೈಭವ್ ಕಣ್ಣಲ್ಲೇ ಎಚ್ಚರಿಕೆ ಸಂದೇಶ
Vaibhav Sooryavanshi: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ 15 ವರ್ಷದ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟ ಆಡಿ ಅತೀ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಆದರೆ ಇದೀಗ ಅವರ ಹಿರಿಯರ ಭಾರತ 'ಎ' ತಂಡದ ಪದಾರ್ಪಣೆಯ ಪಂದ್ಯವು ನಿರಾಸೆಯಲ್ಲಿ ಕೊನೆಗೊಂಡಿದೆ. ವಿಕೆಟ್ ಒಪ್ಪಿಸಿದ ಬಳಿಕ ಈ ಬಾಲಕ ಬೇಸರದಿಂದ ಪೆವಿಲಿಯನ್ ಕಡೆ ನಡೆದರು. ಇದೇ ವೇಳೆ ಮುಂದಿನ ಪಂದ್ಯದಲ್ಲಿ ರನ್ ಮಳೆ ಹರಿಸುವ ಸೂಚನೆಯನ್ನು ನೀಡುವ ರೀತಿಯಲ್ಲಿ ಎದುರಾಳಿ ತಂಡದವರ ಕಡೆ ದಿಟ್ಟಿಸಿ ನೋಡಿದ್ದು, ಇದು ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.
ಟೀಮ್ ಇಂಡಿಯಾ 'ಎ' ತಂಡದ ಪರ ಪ್ರಭ್ಸಿಮ್ರಾನ್ ಸಿಂಗ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು ಲಂಕಾ ವೇಗಿಗಳ ಆರಂಭಿಕ ದಾಳಿಯನ್ನು ಧೈರ್ಯವಾಗಿ ಎದುರಿಸಿದರು. ಆರಂಭದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ಮಾಡಿ ವಿಶ್ವಾಸ ಮೂಡಿಸಿದರು. 12 ಎಸೆತ ಎದುರಿಸಿ 3 ಆಕರ್ಷಕ ಬೌಂಡರಿಗಳನ್ನು ಬಾರಿಸುವ ಮೂಲಕ ಲಯಕ್ಕೆ ಮರಳುವ ಸೂಚನೆ ನೀಡಿದ್ದರು.

ಫ್ಲಾಪ್ನಿಂದ ಪಯಣ ಶುರು ಮಾಡಿದ ವೈಭವ್
ಆದರೆ ಕ್ರೀಸ್ನಲ್ಲಿ ನೆಲೆ ನಿಲ್ಲುವ ಮುನ್ನವೇ ಶ್ರೀಲಂಕಾ 'ಎ' ತಂಡದ ನಾಯಕ ಸಹನ್ ಅರಾಚ್ಚಿ ಕ್ಯಾಚ್ ಹಿಡಿದು ಸೂರ್ಯವಂಶಿ ಇನ್ನಿಂಗ್ಸ್ಗೆ ಬ್ರೇಕ್ ಹಾಕಿದರು. ಮೊಹಮ್ಮದ್ ಶಿರಾಜ್ ಎಸೆದ 4ನೇ ಓವರ್ನ ಫುಲ್ಲರ್ ಲೆಂಥ್ ಎಸೆತವನ್ನು ಸೂರ್ಯವಂಶಿ ಬಲವಾಗಿ ಬಾರಿಸಲು ಯತ್ನಿಸಿದರು. ಈ ವೇಳೆ ಮಿಡ್-ಆಫ್ನಲ್ಲಿದ್ದ ಸಹನ್ ಅರಾಚ್ಚಿ ಅದ್ಭುತವಾಗಿ ಕ್ಯಾಚ್ ಪಡೆಯುವ ಮೂಲಕ ಭಾರತದ ಯುವ ಬ್ಯಾಟರ್ ಆಟಕ್ಕೆ ಅಂತ್ಯವಾಡಿದರು. ಪದಾರ್ಪಣೆಯ ಪಂದ್ಯದಲ್ಲೇ ದೊಡ್ಡ ಇನ್ನಿಂಗ್ಸ್ ಕಟ್ಟುವ ಸುವರ್ಣ ಅವಕಾಶ ಕೈತಪ್ಪಿದ್ದರಿಂದ 15 ವರ್ಷದ ಬಾಲಕ ತೀವ್ರ ನಿರಾಸೆಯಿಂದಲೇ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.
ಭಾರತ ತಂಡಕ್ಕೆ ಆಸರೆಯಾದ ಗಾಯಕ್ವಾಡ್ ಶತಕ
ವೈಭವ್ ಸೂರ್ಯವಂಶಿ (14) ಮತ್ತು ಪ್ರಭ್ಸಿಮ್ರಾನ್ ಸಿಂಗ್ (2) ಅವರ ಆರಂಭಿಕ ವಿಕೆಟ್ಗಳನ್ನು ಬೇಗನೆ ಕಳೆದುಕೊಂಡು ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದಾಗ ಮಧ್ಯಮ ಕ್ರಮಾಂಕದಲ್ಲಿ ಬಂದ ಋತುರಾಜ್ ಗಾಯಕ್ವಾಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅವರು 114 ಎಸೆತಗಳಲ್ಲಿ 3 ಸಿಕ್ಸರ್, 6 ಬೌಂಡರಿಗಳ ನೆರವಿನಿಂದ ಭರ್ಜರಿ 101 ರನ್ ಚಚ್ಚಿದರು.
ನಾಯಕ ತಿಲಕ್ ವರ್ಮಾ (60 ರನ್) ಗಾಯಕ್ವಾಡ್ ಅವರೊಂದಿಗೆ 4ನೇ ವಿಕೆಟ್ಗೆ 150 ರನ್ಗಳ ಜೊತೆಯಾಟ ಆಡುವ ಮೂಲಕ ತಂಡ ಚೇತರಿಸಿಕೊಳ್ಳಲು ನೆರವಾದರು. ಕೊನೆಯಲ್ಲಿ ಆಯುಷ್ ಬದೋನಿ (24) ಮತ್ತು ಸೂರ್ಯಾಂಶ್ ಶೆಡ್ಗೆ ಅಜೇಯ 26 ರನ್ಗಳ ಕೊಡುಗೆಯಿಂದಾಗಿ ಭಾರತ 'ಎ' ತಂಡವು ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 277 ರನ್ಗಳನ್ನು ಮೊತ್ತ ಪೇರಿಸಿತು.
ವೈಭವ್ ಮೇಲೆ ವಿಶ್ವದ ಭರವಸೆ
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ವೈಭವ್ ಸೂರ್ಯವಂಶಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದು ಭಾರತ ತಂಡಕ್ಕೆ ಆಯ್ಕೆಯಾಗಿರುವ ಈ ಯುವ ಪ್ರತಿಭೆಯ ಮೇಲೆ ಜೂನ್ 26ರಿಂದ ಆರಂಭವಾಗಲಿರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಸರಣಿಗೂ ಮುನ್ನ ಭಾರಿ ನಿರೀಕ್ಷೆಗಳಿವೆ. ಇವರ ಆಟ ನೋಡಲು ಬರೀ ಭಾರತ ಅಷ್ಟೇ ಅಲ್ಲದೆ, ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.
ಒಟ್ಟಿನಲ್ಲಿ ಹೇಳುವುದಾದರೆ ಈ ಬಾಲಕ ಆಡಿರುವ ಪಂದ್ಯಗಳಲ್ಲಿ ಫ್ಲಾಪ್ ಆಗಿದ್ದು ಕಡಿಮೆ. ಒಂದು ವೇಳೆ ಹಿಂದಿನ ಪಂದ್ಯದಲ್ಲಿ ತನ್ನಿಂದ ನಿರೀಕ್ಷಿತ ಪ್ರದರ್ಶನ ಕಂಡುಬರದಿದ್ದರೆ, ಮುಂದಿನ ಅವಕಾಶದಲ್ಲಿ ಆಕ್ರಮಣಕಾರಿ ಆಟ ಆಡಿ ಅದನ್ನು ಸರಿದೂಗಿಸುವ ಕೆಲಸವನ್ನು ಮಾಡಿದ್ದಾರೆ. ಇಂದಿನ ಪಂದ್ಯದಲ್ಲೂ ಕೂಡ ಕಳಪೆಯಿಂದ ಆರಂಭವಾದ ಈ ಪಯಣವನ್ನು ಯಾವ ರೀತಿ ನಂತರ ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದೇ ಇದೀಗ ಕುತೂಹಲದ ವಿಚಾರವಾಗಿದೆ.












Click it and Unblock the Notifications