ಭ್ರಷ್ಟಾಚಾರ ಸಹಿಸೋಲ್ಲ! ಖಡಕ್ ಸಂದೇಶ ನೀಡಿದ ನಿರ್ಮಲಾ ಸೀತಾರಾಮ್
ನವದೆಹಲಿ, ಜೂನ್ 11: ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಂತೆಯೇ ತಾವು ಭ್ರಷ್ಟಾಚಾರವನ್ನು ಸಹಿಸೋಲ್ಲ ಎಂಬ ಖಡಕ್ ಸಂದೇಶವನ್ನು ನರೇಂದ್ರ ಮೋದಿ ನೀಡಿದ್ದಾರೆ.
ಭ್ರಷ್ಟಚಾರ ಮತ್ತು ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ ಹನ್ನೆರಡು ಮಂದಿ ಹಿರಿಯ ಐಟಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಈ ಎಲ್ಲ ಅಧಿಕಾರಿಗಳೂ ಹಣಕಾಸು ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಾಗಿದ್ದು, ಈ ಖಡಕ್ ನಿರ್ಧಾರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಹನ್ನೆರಡರಲ್ಲಿ ಎಂಟು ಜನರನ್ನು ಈಗಾಗಲೇ ಸಿಬಿಐ ತನಿಖೆಗೊಳಡಿಸಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಕಡ್ಡಾಯ ನಿವೃತ್ತಿ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಸರ್ಕಾರ ಮೊದಲ ಬಾರಿಗೆ ಉನ್ನತಾಧಿಕಾರಿಗಳ ವಿರುದ್ಧ ಇಂಥ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಯಾರ್ಯಾರಿಗೆ ಕಡ್ಡಾಯ ನಿವೃತ್ತಿ?
ಕಡ್ಡಾಯವಾಗಿ ನಿವೃತ್ತಿ ಪಡೆಯುವಂತೆ ಸೂಚಿಸಿದವರ ಪಟ್ಟಿಯಲ್ಲಿ ಮುಖ್ಯ ಆಯುಕ್ತ, ಮಹಾ ಆಯುಕ್ತ, ಮತ್ತು ಆಯುಕ್ತರು ಸೇರಿದ್ದಾರೆ ಎನ್ನಲಾಗಿದೆ. ಐಟಿ ಇಲಾಖೆಯ ಜಂಟಿ ಆಯುಕ್ತ ಮತ್ತು ಜಾರಿ ನಿರ್ದೇಶನಾಲಯದ ಮಾಜಿ ಉಪ ನಿರ್ದೇಶಕ ಅಶೋಕ್ ಅಗರ್ವಾಲ್, ಆಯುಕ್ತ ಎಸ್ ಕೆ ಶ್ರೀವಾಸ್ತವ, ಕಂದಾಯ ಸೇವೆಯ ಅಧಿಕಾರಿ ಹೊಮಿ ರಾಜವಂಶ್ ಸೇರಿದ್ದಾರೆ.

ಅಶೋಕ್ ಅಗರ್ವಾಲ್
ಅಶೋಕ್ ಅಗರ್ವಾಲ್ ಅವರನ್ನು 1999-2004 ರವರೆಗೆ ಭ್ರಷ್ಟಾಚಾರದ ಆರೋಪದ ಮೇಲೆ ಉಚ್ಛಾಟಿಸಲಾಗಿತ್ತು. ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ ಅವರ ಪ್ರಕರಣದಲ್ಲಿ ಲಂಚ ಪಡೆದ ಮತ್ತು ಅವರಿಗೆ ಸಹಾಯ ಮಾಡಿದ ಪ್ರಕರಣವನ್ನು ಅಗರ್ವಾಲ್ ಎದುರಿಸುತ್ತಿದ್ದರು ಎನ್ನಲಾಗಿದೆ. ಒಟ್ಟು 12 ಕೋಟಿ ರೂ. ವಂಚನೆ ಆರೋಪ ಅವರ ಮೇಲಿತ್ತು.

ಎಸ್ ಕೆ ಶ್ರೀನಿವಾಸ್ತವ್
1989 ರ ಬ್ಯಾಚಿನ ಕಂದಾಯ ಇಲಾಖೆ ಸಿಬ್ಬಂದಿ ಎಸ್ ಕೆ ಶ್ರೀನಿವಾಸ್ತವ್ ಅವರು ಇಬ್ಬರು ಮಹಿಳಾ ಅಧಿಕಾರಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದರು ಎನ್ನಲಾಗಿದೆ. ತಮ್ಮ ಬೇಡಿಕೆಗೆ ಮಹಿಳಾ ಅಧಿಕಾರಿಗಳು ಒಪ್ಪದೆ ಇದ್ದಾಗ ಅವರ ಮೇಲೆ ಭ್ರಷ್ಟಾಚಾರ ಮತ್ತು ವೇಶ್ಯಾವಾಟಿಕೆಯ ಆರೋಪ ಹೊರಿಸಿದ್ದರು. ಅದೂ ಅಲ್ಲದೆ ಯುಪಿಎಸ್ ಸಿಯಲ್ಲಿ ತಮಗೆ ಬೇಕಾದವರಿಗೆ ಹುದ್ದೆ ನೀಡಲೂ ಅವರು ಪ್ರಭಾವ ಉಪಯೋಗಿಸಿದ್ದರು ಎಂಬ ಆರೋಪವೂ ಅವರ ಮೇಲಿತ್ತು.

ಹೋಮಿ ರಾಜವಂಶ್
ಇನ್ನು ಕಂದಾಯ ಸೇವೆ ಅಧಿಕಾರಿ ಹೋಮಿ ರಾಜವಂಶ್ ಎಂಬುವವರು ಭ್ರಷ್ಟಾಚಾರದಿಂದಲೇ ಸುಮಾರು 3.17 ಕೋಟಿ ರೂ.ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದರು ಎನ್ನಲಾಗಿದೆ. ಇವರೊಟ್ಟಿಗೆ ಇನ್ನೂ ಒಂಬತ್ತು ಜನರನ್ನು ಅಮಾನತು ಮಾಡಲಾಗಿದ್ದು, ಇದು ಹೊಸ ಸರ್ಕಾರ ಭ್ರಷ್ಟಾಚಾರ ವಿರುದ್ಧ ಶೂನ್ಯ ಸಂವೇದನೆ ಹೊಂದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.












Click it and Unblock the Notifications