ಕ್ಷಣ ಕಳೆದಂತೆ ಹೆಚ್ಚಾಗುತ್ತಿದೆ ರಾಹುಲ್ ಗಾಂಧಿ ಮೇಲೆ ಒತ್ತಡ!
ಬೆಂಗಳೂರು, ಆ. 24: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆದಿರುವಾಗಲೇ ಯುವ ಕಾಂಗ್ರೆಸ್ ರಾಹುಲ್ ಗಾಂಧಿ ಅವರ ಬೆನ್ನಿಗೆ ನಿಂತಿದೆ. ರಾಹುಲ್ ಗಾಂಧಿ ಅವರೇ ಮುಂದಿನ ಎಐಸಿಸಿ ಅಧ್ಯಕ್ಷರಾಗಬೇಕು ಎಂದು ಒತ್ತಾಯಿಸಿದೆ. ಆದರೆ ಸೋನಿಯಾ ಗಾಂಧಿ ಅವರೆ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದೂ ಒತ್ತಡಗಳು ಹೆಚ್ಚಾಗುತ್ತಿವೆ. ಹೀಗಾಗಿ ಇಂದಿವ ವರ್ಚುವಲ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನವನ್ನು ಇಡೀ ಕಾಂಗ್ರೆಸ್ ಸಮುದಾಯ ಕುತೂಹದಿಂದ ನೋಡುತ್ತಿದೆ.
ರಾಹುಲ್ ಗಾಂಧಿ ಅವರು ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ಆಸಕ್ತಿ ತೋರದಿರುವುದು ಹಲವು ಸಾಧ್ಯಾಸಾಧ್ಯಗಳಿಗೆ ಮುನ್ನುಡಿ ಹಾಕಿದೆ. ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ರಾಹುಲ್ ಹಿಂಜರಿಕೆ ಹಿನ್ನೆಲೆಯಲ್ಲಿ ಗಾಂಧಿ ಕುಟುಂಬದವರನ್ನು ಹೊರತು ಪಡಿಸಿ ಬೇರೆಯುವರನ್ನು ಅಧ್ಯಕ್ಷರನ್ನಾಗಿ ಮಾಡಲು ರಾಹುಲ್ ಗಾಂಧಿ ಆಲೋಚನೆ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಉಳಿದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಗಾಂಧಿ ಕುಟುಂಬದವರೇ ಆಗಲಿ
ಮಲ್ಲಿಕಾರ್ಜುನ್ ಖರ್ಗೆ ಅವರ ಬಳಿಕ ಈಗ ಮತ್ತೊಮ್ಮ ಕಾಂಗ್ರೆಸ್ ನಾಯಕ ಗಾಂಧಿ ಕುಟುಂಬದವರೇ ನಾಯಕತ್ವದಲ್ಲಿ ಮುಂದುವೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ಕೊಟ್ಟಿರುವ ಕಾಂಗ್ರೆಸ್ ಲೋಕಸಭಾ ನಾಯಕ ಅಧೀರ್ ರಂಜನ್ ಚೌಧರಿ ಅವರು, ನಾಯಕತ್ವವನ್ನು ಪ್ರಶ್ನಿಸುವುದು ಪಕ್ಷವನ್ನು ದುರ್ಬಲಗೊಳಿಸುತ್ತದೆ ಎಂದಿದ್ದಾರೆ.
ನಾಯಕತ್ವ ಪ್ರಶ್ನೆ ಮಾಡುವುದು ಉದ್ದೇಶಪೂರ್ವಕ ಪ್ರಯತ್ನವಾಗಿದೆ. ಗಾಂಧಿ ಕುಟುಂಬದ ಹೊರತಾಗಿ ಬೇರೆ ಯಾರು ನ್ಯಾಯ ಒದಗಿಸುವುದಿಲ್ಲ. ಪಕ್ಷದ ಅಧ್ಯಕ್ಷ ಹುದ್ದೆಯಲ್ಲಿ ಗಾಂಧಿ ಕುಟುಂಬದವರೇ ಇರಬೇಕು ಎಂದು ಚೌಧರಿ ಅವರು ಒತ್ತಾಯ ಮಾಡಿದ್ದಾರೆ.

ಭಿಕ್ಕಟ್ಟಿನ ಬಳಿಕ ರಾಹುಲ್ ಗಾಂಧಿ
ಸಧ್ಯ ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ರಾಹುಲ್ ಗಾಂಧಿ ಹಿಂಜರಿಯುತ್ತಿದ್ದಾರೆ. ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಲು ರಾಹುಲ್ ಗಾಂಧಿ ಆಲೋಚನೆ ಮಾಡಿದ್ದಾರೆ. ಹೀಗಾಗಿ ಡಾ. ಮನಮೋನ್ ಸಿಂಗ್ ಅಥವಾ ಎ.ಕೆ. ಆಂಟೋನಿ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ಮಾಡಲು ಪಕ್ಷದ ವೇದಿಕೆಯಲ್ಲಿ ಚಿಂತನೆ ನಡೆದಿದೆ.
ಸಧ್ಯದ ಕೊರೊನಾ ವೈರಸ್ ಭಿಕ್ಕಟ್ಟಿನ ಬಳಿಕ ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗುವ ಸಾಧ್ಯತೆಗಳಿವೆ. ರಾಹುಲ್ ನೇಮಕಕ್ಕೂ ಮೊದಲು ಕಾಂಗ್ರೆಸ್ ಮಹಾ ಅಧಿವೇಶನ ನಡೆಸಿ ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆದಿದೆ.

ಸಧ್ಯದ ಸಾಧ್ಯಾಸಾಧ್ಯತೆಗಳು
ಇಂದಿನ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ನಾಲ್ಕು ಸಾಧ್ಯಾಸಾಧ್ಯತೆಗಳು ಆಗಬಹುದು. ಇನ್ನೂ ಕೆಲ ದಿನಗಳವರೆಗೆ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆಗಳಿವೆ. ಒಂದು ವೇಳೆ ಸೋನಿಯಾ ಗಾಂಧಿ ನಿರಾಕರಿಸಿದರೆ, ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೇರುವಂತೆ ಸದಸ್ಯರು ಒತ್ತಾಯ ಮಾಡುವ ಸಾಧ್ಯತೆಗಳಿವೆ. ಅದೂ ಆಗದೇ ಇದ್ದರೆ ಚುನಾವಣೆ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಸದಸ್ಯರು ಮನವಿ ಮಾಡಬಹುದು.
ಈಗಿನ ಕೊರೊನಾ ಸಂಕಷ್ಟದಲ್ಲಿ ಆಂತರಿಕ ಚುನಾವಣೆ ಅಸಾಧ್ಯ. ಹೀಗಾಗಿ ಚುನಾವಣೆ ನಡೆಯುವವರೆಗೆ ಸೋನಿಯಾ ಗಾಂಧಿಯವರೇ ಮುಂದುವರಿಯುವಂತೆ ಸದಸ್ಯರ ಮನವಿ ಸಾಧ್ಯತೆಯಿದೆ. ಸೋನಿಯಾ ಗಾಂಧಿ ಮಧ್ಯಂತರ ಅಧ್ಯಕ್ಷರಾಗಿ ಮುಂದುವರೆಯಲು ನಿರಾಕರಿಸಿದರೆ, ಮಧ್ಯಂತರ ಅಧ್ಯಕ್ಷರಾಗಿ ಮನಮೋಹನ್ ಸಿಂಗ್ ಅಥವಾ ಎ.ಕೆ ಆಂಟೊನಿ ಆಯ್ಕೆ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ, ಸುಶೀಲ್ ಕುಮಾರ್ ಮಧ್ಯಂತರ ಅಧ್ಯಕ್ಷರ ರೇಸ್ ನಲ್ಲಿದ್ದಾರೆ ಎನ್ನಲಾಗಿದೆ.

ಯುವ ಕಾಂಗ್ರೆಸ್ ಒತ್ತಾಯ
ಯಾವುದೇ ಕಾರಣಕ್ಕೂ ರಾಹುಲ್ ಗಾಂಧಿ ಅವರೇ ಎಐಸಿಸಿ ಅಧ್ಯಕ್ಷರಾಗಬೇಕು ಎಂದು ಯುವ ಕಾಂಗ್ರೆಸ್ ಮತ್ತೆ ಒತ್ತಾಯ ಮಾಡಿದೆ. ರಾಹುಲ್ ಗಾಂಧಿ ಅವರೇ ಮುಂದಿನ ಎಐಸಿಸಿ ಅಧ್ಯಕ್ಷರಾಗಬೇಕು. ಕಾಂಗ್ರೆಸ್ ಪಕ್ಷ ಹಾಗೂ ದೇಶದ ಯುವಕರನ್ನು ಮುನ್ನಡೆಸಬೇಕು. ಸಂಕಷ್ಟದಲ್ಲಿ ರಾಹುಲ್ ಗಾಂಧಿ ಅವರ ಅಗತ್ಯವಿದೆ ಎಂದು ರಾಹುಲ್ ಪರ ಯುವ ಕಾಂಗ್ರೆಸ್ ಬ್ಯಾಟಿಂಗ್ ಮಾಡಿದೆ. ಹೀಗಾಗಿ ರಾಹುಲ್ ಗಾಂಧಿ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ.












Click it and Unblock the Notifications