ಬಿಜೆಪಿ ನಾಯಕ ಕಪಿಲ್ ಮಿಶ್ರಾಗೆ ವೈ ಪ್ಲಸ್ ಶ್ರೇಣಿ ಭದ್ರತೆ
ನವದೆಹಲಿ, ಮಾರ್ಚ್ 03 : ದೆಹಲಿಯ ಬಿಜೆಪಿ ನಾಯಕ ಕಪಿಲ್ ಮಿಶ್ರಾಗೆ ವೈ + ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಕಪಿಲ್ ಮಿಶ್ರಾ ಪ್ರೇರಣೆ ನೀಡಿದ್ದಾರೆ ಎಂಬ ಆರೋಪವಿದ್ದು, ಅವರಿಗೆ ಜೀವ ಬೆದರಿಕೆ ಇದೆ.
ಶಸ್ತ್ರ ಸಹಿತ ದೆಹಲಿ ಪೊಲೀಸರು ಕಪಿಲ್ ಮಿಶ್ರಾಗೆ ದಿನದ 24 ಗಂಟೆಯೂ ಭದ್ರತೆಯನ್ನು ನೀಡಲಿದ್ದಾರೆ. ಈಗಾಗಲೇ ಅವರಿಗೆ ಹಲವು ಬಾರಿ ಜೀವ ಬೆದರಿಕೆ ಕರೆಗಳು ಬಂದಿದ್ದು, ಬಳಿಕ ವೈ + ಶ್ರೇಣಿಯ ಭದ್ರತೆ ನೀಡಲು ತೀರ್ಮಾನಿಸಲಾಗಿದೆ.
ಪ್ರತಿಪಕ್ಷ ಕಾಂಗ್ರೆಸ್ ಕಪಿಲ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲು ಮಾಡಬೇಕು ಎಂದು ಆರೋಪಿಸಿದೆ. ದೆಹಲಿ ವಿಧಾನಸಭೆ ಚುನಾವಣೆ ವೇಳೆ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಪ್ರತಿಪಕ್ಷಗಳು ದೂರಿವೆ. ಇದೇ ದೆಹಲಿ ಗಲಭೆಗೆ ಕಾರಣ ಎಂದು ಹೇಳಿವೆ.

ದೆಹಲಿ ಗಲಭೆ ಕುರಿತ ಅರ್ಜಿಯ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ ಪ್ರಚೋದನಾಕಾರಿ ಭಾಷಣ ಮಾಡಿದ ರಾಜಕೀಯ ನಾಯಕರ ವಿರುದ್ಧ ಏಕೆ ಎಫ್ಐಆರ್ ದಾಖಲು ಮಾಡಿಲ್ಲ? ಎಂದು ಕೇಂದ್ರ ಸರ್ಕಾರ, ದೆಹಲಿ ಪೊಲೀಸರನ್ನು ಪ್ರಶ್ನೆ ಮಾಡಿತ್ತು.
ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಹೋರಾಟಗಾರರ ನಡುವೆ ಆರಂಭವಾದ ಘರ್ಷಣೆ ನಂತರ ಕೋಮು ಗಲಭೆ ಸ್ವರೂಪ ಪಡೆದಿತ್ತು. ಹಿಂಸಾಚಾರದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು 167 ಎಫ್ಐಆರ್ ದಾಖಲು ಮಾಡಿದ್ದು, 885 ಜನರನ್ನು ಬಂಧಿಸಿದ್ದಾರೆ. ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.












Click it and Unblock the Notifications