ಅಜಂ ಖಾನ್ ಗೆ ಲೋಕಸಭೆಯಲ್ಲಿ ಮಹಿಳಾ ಸಂಸದರ ಒಕ್ಕೊರಲ ಧಿಕ್ಕಾರ!
ನವದೆಹಲಿ, ಜುಲೈ 26: ಸಂಸತ್ತು ಇಂಥ ಘಟನೆಗಳಿಗೆ ಸಾಕ್ಷಿಯಾಗುವುದು ವಿರಳಾತಿವಿರಳ. ಆಡಳಿತ ಪಕ್ಷದ ನಡೆ ಸರಿಯಾಗಿಯೇ ಇದ್ದರು ಅದನ್ನು ಒಪ್ಪದೆ, ವಿರೋಧಿಸಲೇಬೇಕು ಎಂಬ ಪೂರ್ವಗ್ರಹದಿಂದಾಗಿ ಸಂಸತ್ತಿಲ್ಲಿ ಆರೋಗ್ಯಕರ ಚರ್ಚೆಗಿಂತ ಗದ್ದಲವೇ ಹೆಚ್ಚಾಗುತ್ತಿದೆ.
ಆದರೆ ಶುಕ್ರವಾರ ಲೋಕಸಭೆಯಲ್ಲಿದ್ದ ಮಹಿಳಾ ಸಂಸದರೆಲ್ಲರೂ ಪಕ್ಷಭೇದ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದರು. ಮಹಿಳಾ ಸಂಸದರೊಬ್ಬರ ಬಗ್ಗೆ, ಅದರಲ್ಲೂ ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ರಮಾದೇವಿ ಅವರ ಬಗ್ಗೆ ಅಸಭ್ಯವಾಗಿ ಮಾತನಾಡಿದ ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ಅವರನ್ನು ಗುರಿಯಾಗಿಸಿ ಒಕ್ಕೊರಲ ವಿರೋಧದ ಧ್ವನಿ ಮೊಳಗಿತ್ತು.
ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ಗಣ್ಯಾತಿಗಣ್ಯರು ಸಂಸತ್ತಿನಲ್ಲಿ ಮಾತನಾಡಿದರು. ರಾಷ್ಟ್ರದ ಶಕ್ತಿ ಕೇಂದ್ರವಾದ ಸಂಸತ್ತಿನಲ್ಲೇ ಮಹಿಳೆಯರಿಗೆ, ಅದರಲ್ಲೂ ಸಂಸದರಾಗಿ ಸ್ಪೀಕರ್ ಖುರ್ಚಿಯಲ್ಲಿ ಕೂತಿದ್ದ ರಮಾದೇವಿ ಅವರಿಗೇ ಗೌರವ ಇಲ್ಲ ಎಂದಾದರೆ ಈ ದೇಶದ ಜನ ನಮ್ಮನ್ನು ಏನೆಂದು ಪರಿಗಣಿಸಬೇಕು ಎಂದು ಸಂಸದೆಯರು ಕಿಡಿಕಾರಿದರು.

"ಇದೊಂದು ಅಸಹ್ಯಕರ ಘಟನೆ. ಕಠಿಣ ಕ್ರಮ ಕೈಗೊಳಲ್ಳುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ" ಎಂದು ಹಣಕಾಸು ಸವಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಹೇಳದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ ಮಾತನಾಡಿ, "ಇಡೀ ದೇಶವೂ ಅವರ ಮಾತನ್ನು ಕೇಳಿಸಿಕೊಂಡಿದೆ. ಸಂಸತ್ತಿನ ಹೊರಗಡೆ ಇಂಥ ವರ್ತನೆಯಾದರೆ ಏನು ಮಾಡುತ್ತಾರೆ? ಪೊಲೀಸರನ್ನು ಕರೆಯುವುದಿಲ್ಲವೇ? ಈಗಲೂ ಅದೇ ಆಗಬೇಕು. ಇವನ್ನೆಲ್ಲ ನೋಡಿಕೊಂಡು ನಾವು ಸುಮ್ಮನೆ ಕೂರುವುದಿಲ್ಲ. ಮಂತ್ರಿ ಎಂಬ ಕಾರಣಕ್ಕಲ್ಲ, ಒಬ್ಬ ಮಹಿಳೆಯಾಗಿ ಎಲ್ಲರೊಂದಿಗೆ ನಾನೂ ಇದನ್ನು ವಿರೋಧಿಸುತ್ತೇನೆ" ಎಂದು ಕಿಡಿಕಾರಿದರು.
ಪಶ್ಚಿಮ ಬಂಗಾಳದ ಸಂಸದೆ ಮೀಮಿ ಚಕ್ರವರ್ತಿ, "ನಾನು ಈ ಸಂಸತ್ತಿನಲ್ಲಿರುವ ಅತ್ಯಂತ ಕಿರಿಯ ಮಹಿಳಾ ಸಂಸದರಲ್ಲೊಬ್ಬಳು. ನಾವು ಸಂಸತ್ತಿನಲ್ಲಿ ಪ್ರತಿದಿನವೂ ಉತ್ತಮವಾದುದನ್ನು ಕಲಿಸಯುತ್ತಿದ್ದೇವೆ. ಆದರೆ ನಿನ್ನೆಯ ಬೆಳವಣಿಗೆ ಯಾವ ಸಂದೇಶ ನೀಡುತ್ತದೆ? ನಾವು ಯಾವ ಪಕ್ಷದವರೇ ಇರಲಿ, ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯವಿರಲಿ. ನಾವೆಲ್ಲ ಮಹಿಳೆಯರು. ಇಂಥ ನಡೆಯನ್ನು ನಾವು ಒಗ್ಗಟ್ಟಿನಿಂದ ಖಂಡಿಸುತ್ತೇವೆ" ಎಂದರು.
ತಮಿಖುನಾಡಿನ ಸಂಸದೆ ಕನ್ನಿಮೋಳಿ, "ಇಂದಿನ ಪ್ರಜಾಪ್ರಭುತ್ವ ಕಾಲದಲ್ಲೂ ಮಹಿಳೆಯರ ಮೇಲೆ ಈ ರೀತಿ ಅಗೌರವ ತೋರಿಸುವವರಿದ್ದಾರೆ ಎಂದರೆ ನಂಬುವುದು ಕಷ್ಟ. ಅವರ ವಿರುದ್ಧ ಕ್ರಮ ಕೈಗೊಳ್ಳಲು ನಾವೆಲ್ಲರೂ ಆಗ್ರಹಿಸುತ್ತೇವೆ" ಎಂದರು.
ಗುರುವಾರ ತ್ರಿವಳಿ ತಲಾಖ್ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಸ್ಪೀಕರ್ ಕುರ್ಚಿಯಲ್ಲಿದ್ದ ಬಿಹಾರದ ಶಿಯೋಹರ್ ಕ್ಷೇತ್ರದ ಸಂಸದೆ ರಮಾದೇವಿ ಅವರನ್ನು "ನೀವಂದ್ರೆ ನನಗೆ ಇಷ್ಟ, ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಎಂದು ನನಗೆ ಅನ್ನಿಸುತ್ತದೆ' ಎಂದು ಆಜಂ ಖಾನ್ ಹೇಳಿದ್ದರು. ನಂತರ ತಾವೇನೂ ತಪ್ಪು ಮಾಡಿಲ್ಲ, ಕ್ಷಮೆ ಯಾಚಿಸುವುದಿಲ್ಲ ಎಂದು ಅವರು ಹೇಳಿದ್ದರು.












Click it and Unblock the Notifications