ನವದೆಹಲಿ: ಸಂವಿಧಾನ ದಿನ ಕಾರ್ಯಕ್ರಮ ಬಹಿಷ್ಕರಿಸಿದ ಕಾಂಗ್ರೆಸ್, ಟಿಎಂಸಿ
ನವದೆಹಲಿ, ನವೆಂಬರ್ 26: ಸಂಸತ್ ಚಳಿಗಾಲ ಅಧಿವೇಶನಕ್ಕೆ ಮೂರ್ನಾಲ್ಕು ದಿನಗಳಷ್ಟೇ ಬಾಕಿ ಉಳಿದಿದೆ. ಸೋಮವಾರದಿಂದ ಅಧಿವೇಶನ ಕಲಾಪ ಆರಂಭವಾಗಲಿದೆ. ಇದರ ಹೊಸ್ತಿಲಿನಲ್ಲಿ ಶುಕ್ರವಾರ ನಡೆಯುತ್ತಿರುವ ಸಂವಿಧಾನ ದಿನಾಚರಣೆ ಅನ್ನು ಬಹಿಷ್ಕರಿಸುವುದಕ್ಕೆ ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಟಿಎಂಸಿ ನಿರ್ಧರಿಸಿವೆ. ನವದೆಹಲಿಯ ಸೆಂಟ್ರಲ್ ಹಾಲ್ನಲ್ಲಿ ನಡೆಯಲಿರುವ ಸಾಂವಿಧಾನಿಕ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡಲಿದ್ದಾರೆ.
ಸಂಸತ್ತಿನಲ್ಲಿ ಪ್ರತಿಪಕ್ಷಗಳ ನಡುವಿನ ಏಕತೆಯನ್ನು ಖಚಿತಪಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಮಾನ ಮನಸ್ಕ ಪಕ್ಷಗಳನ್ನು ತಲುಪುವ ಉದ್ದೇಶದಿಂದ ಕಾಂಗ್ರೆಸ್ ಈ ಸಂಘಟಿತ ನಿರ್ಧಾರವನ್ನು ತೆಗೆದುಕೊಂಡಿದೆ. ಕಾಂಗ್ರೆಸ್ ಹಾಗೂ ಟಿಎಂಸಿ ಜೊತೆ ಆರ್ಜೆಡಿ, ಡಿಎಂಕೆ ಮತ್ತು ಎಡಪಕ್ಷಗಳು ಸೇರಿದಂತೆ ಇತರ ವಿರೋಧ ಪಕ್ಷಗಳು ಸಹ ಈ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಳ್ಳುವ ನಿರೀಕ್ಷೆಯಿದೆ.
ಸಂವಿಧಾನ ದಿನ 2021: ಮಹತ್ವ, ಇತಿಹಾಸ ಮತ್ತು ನೀವು ತಿಳಿದುಕೊಳ್ಳಬೇಕಾದದ್ದು
ಗುರುವಾರ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆಯಲ್ಲಿ, ಕೆಲವು ನಾಯಕರು ತೃಣಮೂಲ ಕಾಂಗ್ರೆಸ್ ಪಕ್ಷವು ತಮ್ಮ ನಾಯಕರನ್ನು ಆಕ್ರಮಣಕಾರಿ ಸೆಳೆಯುತ್ತಿರುವುದರ ಬಗ್ಗೆ ಉಲ್ಲೇಖಿಸಿದರು. ಈ ವೇಳೆ ಆದರೆ ಪ್ರತಿಕ್ರಿಯೆ ನೀಡಿರುವ ಸೋನಿಯಾ ಗಾಂಧಿಯವರು, ಪ್ರಮುಖ ವಿರೋಧ ಪಕ್ಷವಾಗಿ ಕಾಂಗ್ರೆಸ್ ಎಲ್ಲಾ ಪಕ್ಷಗಳನ್ನು ತಲುಪಬೇಕಿದೆ. ಸಂಸತ್ತಿನ ಹೊರಗಿನ ರಾಜಕೀಯ ಬೆಳವಣಿಗೆಗಳು ಮೂಲ ಸಮನ್ವಯಕ್ಕೆ ಅಡ್ಡಿಯಾಗಬಾರದು ಎಂಬ ಸಂಕೇತವನ್ನು ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಳಿಗಾಲ ಅಧಿವೇಶನದಲ್ಲಿ ಸಂಘಟಿತ ಹೋರಾಟ:
ಸಂಸತ್ ಚಳಿಗಾಲ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಕನಿಷ್ಠ ಸಾಮಾನ್ಯ ದೃಷ್ಟಿಕೋನವನ್ನು ಹೊಂದಿರುವ ವಿಷಯಗಳ ಬಗ್ಗೆ ಸಂಘಟಿತ ನಿರ್ಧಾರ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಸದನದಲ್ಲಿ ಪ್ರಸ್ತಾವಿತ ಅಂಶಗಳ ಗುರುತು:
ಸಂಸತ್ತಿನ ಕಾರ್ಯತಂತ್ರದ ಗುಂಪಿನ ಸಭೆಯು ಅಧಿವೇಶನದ ಮೊದಲ ದಿನ ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದು ಸೇರಿದಂತೆ ಸದನದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳನ್ನು ಗುರುತಿಸಲಾಯಿತು. ಈ ಪೈಕಿ ಗಮನಾರ್ಹವಾಗಿ, ಪಕ್ಷವು ಕನಿಷ್ಠ ಬೆಂಬಲ ಬೆಲೆ (MSP)ಗಾಗಿ "ಕಾನೂನು ಖಾತರಿ"ಯನ್ನು ನೀಡುವಂತೆ ಒತ್ತಾಯಿಸುತ್ತದೆ. ಎಂಎಸ್ಪಿಗೆ ಪ್ರತ್ಯೇಕ ಕಾನೂನೊಂದರ ಬೇಡಿಕೆ ಇಡಲಾಗುವುದು ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ. ಕನಿಷ್ಠ ಇಬ್ಬರು ನಾಯಕರು ಎಂಎಸ್ಪಿಗೆ ಕಾನೂನು ಬೆಂಬಲವು "ಟ್ರಿಕಿ ಸಮಸ್ಯೆ" ಎಂದು ಹೇಳಿದ್ದಾರೆ.
ಸಂವಿಧಾನ ದಿನ ಬಹಿಷ್ಕರಿಸುವ ಬಗ್ಗೆ ಒಮ್ಮತ:
ಸಂವಿಧಾನ ದಿನದ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಬಹಿಷ್ಕರಿಸಬೇಕು ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ವರ್ಷದ ಆರಂಭದಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣವನ್ನು ಬಹುತೇಕ ಸಂಪೂರ್ಣ ಪ್ರತಿಪಕ್ಷಗಳು ಬಹಿಷ್ಕರಿಸಿದ್ದವು.
"ನಾವು ಭಾಗವಹಿಸುವುದಿಲ್ಲ. ಈ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಪ್ರಜಾಸತ್ತಾತ್ಮಕ ಭಾರತದ ಪ್ರತಿಯೊಂದು ಸಂಸ್ಥೆಯನ್ನು ಕಿತ್ತೊಗೆಯಲು ಸರ್ಕಾರ ಪ್ರಯತ್ನಿಸುತ್ತಿದೆ. ಮೇಲಾಗಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ವೇದಿಕೆಗೆ ಆಹ್ವಾನಿಸಿಲ್ಲ. ವಿರೋಧ ಪಕ್ಷದ ನಾಯಕರ ಕಚೇರಿಯೂ ಒಂದು ಸಂಸ್ಥೆ ಆಗಿರುತ್ತದೆ. ಈ ಸರ್ಕಾರ ಅದನ್ನೂ ಗೌರವಿಸುವುದಿಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಕಾಂಗ್ರೆಸ್ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನ:
ಮೂಲಗಳ ಪ್ರಕಾರ, ಎಲ್ಲಾ ವ್ಯವಹಾರಗಳನ್ನು ಮುಂದೂಡುತ್ತಿರುವಾಗ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಲಖಿಂಪುರ ಖೇರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆಶಿಶ್ ಮಿಶ್ರಾ ತಂದೆ ಹಾಗೂ ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸುವುದು. ಇದರ ಜೊತೆಗೆ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟ ಸಂತ್ರಸ್ತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸುವಂತೆ ಒತ್ತಾಯಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
Recommended Video