ಪ್ರಧಾನಿ ಮೋದಿ ಬೆಂಗಳೂರು ಭೇಟಿ: ನಾಳೆ HAL ಸುತ್ತ ಸಂಚಾರ-ಪಾರ್ಕಿಂಗ್ ನಿರ್ಬಂಧ, ಮಾರ್ಗ ಬದಲಾವಣೆ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ನಾಳೆ ಭಾನುವಾರ (ಮೇ 10) ರಂದು ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ. ಇತ್ತೀಚಿನ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ. ಈ ಪ್ರಯುಕ್ತ ಪ್ರಧಾನಿಯವರಿಗೆ ಕರ್ನಾಟಕ ಬಿಜೆಪಿ ಅಭಿನಂದನೆ ಸಮಾರಂಭ ಹಮ್ಮಿಕೊಂಡಿದ್ದು, ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣ ಆವರಣದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಸಾವಿರಾರು ಕಾರ್ಯಕರ್ತರು, ಗಣ್ಯರು ಹಾಗೂ ಅತೀ ಗಣ್ಯರು ಇಲ್ಲಿಗೆ ಆಗಮಿಸಲಿದ್ದಾರೆ. ಹೀಗಾಗಿ ನಗರದ ವಾಹನಗಳ ಸಂಚಾರದಲ್ಲಿ ಒಂದಷ್ಟು ಬದಲಾವಣೆ ಮಾಡಲಾಗಿದೆ.
ಕಾರ್ಯಾಕ್ರಮವು ಹೆಚ್.ಎ.ಎಲ್. ಗೇಟ್ ನಂ. 30 ಮುಂಭಾಗ (ಬೆಳಗ್ಗೆ 05:00 ರಿಂದ ಮಧ್ಯಾಹ್ನ 03:00 ಗಂಟೆಯವರೆಗೆ) ಜರುಗಲಿದೆ. ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು ಮಾಡಲಾಗಿದೆ. ಪಾರ್ಕಿಂಗ್ ನಿರ್ಬಂಧ, ಸಂಚಾರ ಮಾರ್ಗ ಬದಲಾವಣೆ ಹಾಗೂ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ. ಭಾನುವಾರ ಸಂಚಾರ ಮಾಡುವ ನಗರದ ಸವಾರರು ಈ ಸುದ್ದಿ ಗಮನಿಸಿದರೆ ಸಂಚಾರ ಅಡಚಣೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಇಲ್ಲಿ ವಾಹನಗಳ ಸಂಚಾರ ನಿರ್ಬಂಧ
ಹೆಚ್.ಎ.ಎಲ್ ವಿಮಾನ ನಿಲ್ದಾಣ ಎಕ್ಸಿಟ್ ರಸ್ತೆಯಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಡಿ.ಜಿ.ಸಿ.ಎ ಕಛೇರಿವರೆಗೆ ಹಾಗೂ ಗೇಟ್ ನಂ.30 ರಸ್ತೆಯಲ್ಲಿ ಅಂಬ್ರೆಲಾ ಜಂಕ್ಷನ್ನಿಂದ ಗೇಟ್ ನಂ.30 ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು (ಎರಡು ಬದಿಯಲ್ಲಿ) ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಈ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ
* ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಎಸ್.ಡಿ ರಸ್ತೆ, ಜಂಕ್ಷನ್ನಿಂದ ಟ್ರಿನಿಟಿ ಜಂಕ್ಷನ್ವರೆಗಿನ ರಸ್ತೆಗಳು.
* ಹೆಚ್.ಎ.ಎಲ್ ವಿಮಾನ ನಿಲ್ದಾಣ ಗೇಟ್ ನಂ.30 ರಸ್ತೆಯಲ್ಲಿ ಅಂಬ್ರೆಲಾ ಜಂಕ್ಷನ್ನಿಂದ ಗೇಟ್ ನಂ.30 ರವರೆಗಿನ ರಸ್ತೆಗಳು.
* ಹೆಚ್.ಎ.ಎಲ್ ವಿಮಾನ ನಿಲ್ದಾಣ ಎಕ್ಸಿಟ್ ರಸ್ತೆಯಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಡಿ.ಜಿ.ಸಿ.ಎ ಕಚೇರಿವರೆಗಿನ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳು ಮತ್ತು ಹಿರಿಯ ಅಧಿಕಾರಿಗಳ ವಾಹನ ನಿಲುಗಡೆಗೆ ಎಸ್.ಡಿ ರಸ್ತೆ ಜಂಕ್ಷನ್ನಲ್ಲಿರುವ ಹೆಚ್.ಎ.ಎಲ್ ಟ್ರಾನ್ಸ್ಪೋರ್ಟ್ ಡಿಪಾರ್ಟಮೆಂಟ್ ಪಾರ್ಕಿಂಗ್ ಸ್ಥಳದಲ್ಲಿ ಅಂದೆ ಹೆಚ್.ಎ.ಎಲ್ ಡಿಪಾರ್ಟ್ಮೆಂಟ್ ಎಸ್.ಡಿ ರಸ್ತೆ ಜಂಕ್ಷನ್, ಹಳೆ ವಿಮಾನ ನಿಲ್ದಾಣ ರಸ್ತೆ ಇಲ್ಲಿ ಪಾರ್ಕಿಂಗ್ಗೆ ಅವಕಾಶ ನೀಡಲಾಗಿದೆ.
ಕಾರ್ಯಕ್ರಮಕ್ಕೆ ಬರುವವರಿಗೆ ವಿಶೇಷ ಸೂಚನೆ
ಪ್ರಧಾನಿ ಮೋದಿಯವರ ಕಾರ್ಯಕ್ರಮದತ್ತ ಮಾರತಹಳ್ಳಿ, ಕೆ.ಆರ್.ಪುರ ಮತ್ತು ವೈಟ್ಫೀಲ್ಡ್ ಕಡೆಯಿಂದ ಬರುವ ಸವಾರರು ತಮ್ಮ ವಾಹನಗಳನ್ನು ಬೆಳಗ್ಗೆ 08.30 ಗಂಟೆಯ ಒಳಗಾಗಿ ಏರ್ಪೋರ್ಟ್ ನಿರ್ಗಮನ ರಸ್ತೆ ಗೇಟ್ ನಂ.02 ಬಳಿ ಪ್ರಯಾಣಿಕರನ್ನು ಇಳಿಸಬೇಕು. ಬಳಿಕ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಸರ್.ಎಂ ವಿಶ್ವೇಶ್ವರಯ್ಯ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ಮಾಡಬಹುದಾಗಿದೆ.
ಕಾರ್ಯಕ್ರಮಕ್ಕೆ ನಗರದ ಕಡೆಯಿಂದ ಸಾರ್ವಜನಿಕರುಗಳನ್ನು ಕರೆತರುವ ವಾಹನಗಳು ಬೆಳಗ್ಗೆ 08.30 ಗಂಟೆಯ ಒಳಗಾಗಿ ಸಾರ್ವಜನಿಕರನ್ನು ಏರ್ಪೋರ್ಟ್ ಎಕ್ಸಿಟ್ ರಸ್ತೆ ಗೇಟ್ ನಂ.02 ರ ಎದುರು ರಸ್ತೆಯಲ್ಲಿ ಇಳಿಸಲು ಅವಕಾಶ ನೀಡಲಾಗಿದೆ. ವಾಹನವನ್ನು ಸುರಂಜನ್ದಾಸ್ ರಸ್ತೆಯಲ್ಲಿರುವ ಹೆಚ್.ಎ.ಎಲ್ ಮಾರ್ಕೇಟ್ ಬಳಿ ಯೂ ತಿರುವು ಪಡೆದು ಪಿ.ಎನ್.ಬಿ ಬ್ಯಾಂಕ್ ಬಳಿಯ ಹೆಚ್.ಎ.ಎಲ್ ಬಸ್ ಯಾರ್ಡ್ ನಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
ವಾಹನಗಳ ನಿಲುಗಡೆ ಸ್ಥಳಗಳು
ಸರ್.ಎಂ ವಿಶ್ವೇಶ್ವರಯ್ಯ ಕಾಲೇಜು ಮೈದಾನ, ಹಳೆ ವಿಮಾನ ನಿಲ್ದಾಣ ರಸ್ತೆ, ಮುರುಗೇಶ್ ಪಾಳ್ಯ ಹಾಗೂ ಹೆಚ್.ಎ.ಎಲ್. ಬಸ್ ಯಾರ್ಡ್, ಪಿಎನ್ಪಿ ಬ್ಯಾಂಕ್ ಸುರಂಜನ್ದಾಸ್ ರಸ್ತೆ, ಹತ್ತಿರ ಪಾರ್ಕಿಂಗ್ ಮಾಡಬಹುದಾಗಿದೆ.
ನೈಸ್ ರಸ್ತೆ ವಾಹನಗಳಿಗೆ ನಿರ್ಬಂಧ, ಎಲ್ಲೆಲ್ಲಿ?
ಬೆಳಗ್ಗೆ 09 ರಿಂದ ಮದ್ಯಾಹ್ನ 03 ಗಂಟೆಯವರೆಗೆ ನೈಸ್ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇವರು ಪರ್ಯಾಯ ಮಾರ್ಗಗಳನ್ನು ಅನರಿಸಬೇಕಿದೆ.
* ತುಮಕೂರು ರಸ್ತೆಯಿಂದ ಬಂದು ಕನಕಪುರ ರಸ್ತೆ ಕಡೆಗೆ ನೈಸ್ ರಸ್ತೆ ಮೂಲಕ ಸಂಚರಿಸುವ ಎಲ್ಲ ಬಗೆಯ ವಾಹನಗಳನ್ನು ನಿರ್ಬಂಧಿಸಲಾಗಿದೆ.
* ತುಮಕೂರು ರಸ್ತೆಯಲ್ಲಿ ನಗರದ ಒಳಭಾಗದಿಂದ ಬಂದು ನೈಸ್ ರಸ್ತೆ ಮೂಲಕ ಕನಕಪುರ ರಸ್ತೆ ಕಡೆಗೆ ಸಾಗುವ ಎಲ್ಲಾ ಮಾದರಿಯ ವಾಹನಗಳ ಸಂಚಾರ ಮಾಡದಂತೆ ಕ್ರಮವಹಿಸಲಾಗಿದೆ.
* ಮಾಗಡಿ ರಸ್ತೆಯಿಂದ ಬಂದು ಕನಕಪುರ ರಸ್ತೆ ಕಡೆಗೆ ನೈಸ್ ರಸ್ತೆಗಳಲ್ಲಿ ಸಾಗುವ ವಾಹನಗಳು.
* ಮಾಗಡಿ ರಸ್ತೆಯಲ್ಲಿ ನಗರದ ಒಳಭಾಗದಿಂದ ಬಂದು ನೈಸ್ ರಸ್ತೆ ಮೂಲಕ ಕನಕಪುರ ರಸ್ತೆ ಕಡೆಗೆ ಸಾಗುವ ಎಲ್ಲಾ ಮಾದರಿಯ ವಾಹನಗಳು
* ಮೈಸೂರು ರಸ್ತೆಯಿಂದ (ಕೆಂಗೇರಿ ಕಡೆಯಿಂದ) ಬಂದು ಕನಕಪುರ ರಸ್ತೆ ಕಡೆಗೆ ತೆರಳುವ ಎಲ್ಲಾ ಮಾದರಿಯ ವಾಹನಗಳು.
* ನೈಸ್ ರಸ್ತೆ ಸೋಂಪುರ ಕ್ಲೋವರ್ ಲೀಫ್ ಜಂಕ್ಷನ್, ನಿಂದ ಕನಕಪುರ ಮುಖ್ಯರಸ್ತೆಯಿಂದ ನೈಸ್ ರಸ್ತೆ ಜಂಕ್ಷನ್ ವರೆಗೆ.
* ಮೈಸೂರು ರಸ್ತೆ ಮತ್ತು ಹೊಸಕೆರೆಹಳ್ಳಿ ರಸ್ತೆ ಮೂಲಕ ಕನಕಪುರ ರಸ್ತೆ ಕಡೆಗೆ ಸಾಗುವ ಎಲ್ಲಾ ಮಾದರಿಯ ವಾಹನಗಳು.
* ಕನಕಪುರ ಮುಖ್ಯರಸ್ತೆ ನೈಸ್ ರಸ್ತೆ ಜಂಕ್ಷನ್ ನಿಂದ ನೈಸ್ ರಸ್ತೆ ಸೋಂಪುರ ಕ್ಲೋವರ್ ಲೀಫ್ ಜಂಕ್ಷನ್ ವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ನೈಸ್ ರಸ್ತೆ ಸವಾರರಿಗೆ ಪರ್ಯಾಯ ಮಾರ್ಗಗಳು
* ತುಮಕೂರು ರಸ್ತೆಯಿಂದ ನೈಸ್ ರಸ್ತೆ ಮೂಲಕ ಕನಕಪುರ ರಸ್ತೆ ಕಡೆಗೆ ತೆರಳುವ ವಾಹನ ಸವಾರರು/ಚಾಲಕರು, ಸಿ.ಎಂ.ಟಿ.ಐ. ಜಂಕ್ಷನ್ ಬಳಿ ಬಲ ತಿರುವು ಪಡೆದು ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ತೆರಳಬೇಕು.
* ತುಮಕೂರು ರಸ್ತೆಯಲ್ಲಿ ನಗರದ ಒಳಭಾಗದಿಂದ ನೈಸ್ ರಸ್ತೆ ಮುಖಾಂತರ ಕನಕಪುರ ರಸ್ತೆ ಕಡೆಗೆ ತೆರಳುವ ವಾಹನ ಸವಾರರು/ಚಾಲಕರು, ಸಿ.ಎಂ.ಟಿ.ಐ. ಜಂಕ್ಷನ್ ಎಡ ತಿರುವು ಪಡೆದು ರಾಜ್ ಕುಮಾರ್ ಪೂಣ್ಯಭೂಮಿ ರಸ್ತೆ ಮೂಲಕ ತೆರಳಬೇಕಿದೆ.
* ಮಾಗಡಿ ರಸ್ತೆ ಮೂಲಕ ಬಂದು, ನೈಸ್ ರಸ್ತೆ ಮೂಲಕ ಕನಕಪುರ ರಸ್ತೆ ಕಡೆಗೆ ಸಾಗುವ ವಾಹನ ಸವಾರರು/ಚಾಲಕರು ಸುಮ್ಮನಹಳ್ಳಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಮುಂದೆ ಸಾಗಬೇಕು.
* ಮಾಗಡಿ ರಸ್ತೆ ಮೂಲಕ ನಗರದ ಒಳಭಾಗದಿಂದ ಬಂದು, ನೈಸ್ ರಸ್ತೆ ಮೂಲಕ ಕನಕಪುರ ರಸ್ತೆ ಕಡೆಗೆ ಸಾಗುವ ವಾಹನ ಸವಾರರು/ಚಾಲಕರು ಸುಮ್ಮನಹಳ್ಳಿ ಜಂಕ್ಷನ್ ಬಳಿ ಎಡ ತಿರುವು ಮೂಲಕ ಸಾಗಬೇಕು.
* ಮೈಸೂರು ರಸ್ತೆಯಲ್ಲಿ ಬಂದು, ನೈಸ್ ರಸ್ತೆ ಮೂಲಕ ಕನಕಪುರ ರಸ್ತೆ ಕಡೆಗೆ ಸಾಗುವ ವಾಹನ ಸವಾರರು/ಚಾಲಕರು ನಾಯಾಂಡನಹಳ್ಳಿ ಜಂಕ್ಷನ್ ಬಳಿ ಬಲ ತಿರುವು ಪಡೆದು ತೆರಳಬಹುದು.
* ಮೈಸೂರು ರಸ್ತೆಯಲ್ಲಿ ಬಂದು, ನೈಸ್ ರಸ್ತೆ ಮೂಲಕ ಕನಕಪುರ ರಸ್ತೆ ಕಡೆಗೆ ಸಾಗುವ ವಾಹನ ಸವಾರರು/ಚಾಲಕರು ನಾಯಂಡಹಳ್ಳಿ ಜಂಕ್ಷನ್ ಬಳಿ ಎಡ ಮತ್ತು ಬಲ ತಿರುವು ಪಡೆದು ಔಟರ್ ರಿಂಗ್ ರಸ್ತೆಯಲ್ಲಿ ಸಾಗಬೇಕು.
* ಸವಾರರು ಮೈಸೂರು ರಸ್ತೆ ಕಡೆಯಿಂದ ಬರುವ ವಾಹನ ಮೈಸೂರು ರಸ್ತೆ ಕೆಂಗೇರಿ ವಿಷ್ಣುವರ್ಧನ ರಸ್ತೆ ಮೂಲಕ ಉತ್ತರಹಳ್ಳಿ ವಸಂತಪುರ ಕ್ರಾಸ್ ಕನಕಪುರ ರಸ್ತೆಗೆ ಸೇರಿ ಮುಂದುವರೆದು ಕೋಣನಕುಂಟೆ ಕ್ರಾಸ್ ನಲ್ಲಿ ಎಡತಿರುವು ಪಡೆದು ಹರಿನಗರ ಕ್ರಾಸ್ ಜಂಬುಸವಾರಿದಿಣ್ಣೆ ಮೂಲಕ ಬನ್ನೇರುಘಟ್ಟ ರಸ್ತೆಯತ್ತ ಚಲಿಸಬಹುದಾಗಿದೆ.
* ಬಿಡಿಎ ಎಲೆಕ್ಟ್ರಾನಿಕ್ ಸಿಟಿ/ಬನ್ನೇರುಘಟ್ಟ ನೈಸ್ ರಸ್ತೆಯ ಕಡೆಯಿಂದ ಬರುವ ವಾಹನ ಸವಾರರು ಬನ್ನೇರುಘಟ್ಟ ರಸ್ತೆಯಲ್ಲಿ ಬಂದು ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಅಂಜನಾಪುರ 80 ಅಡಿ ರಸ್ತೆಯ ಹತ್ತಿರ ಎಡ ತಿರುವು ಪಡೆಯಬೇಕು. ಅಲ್ಲಿಂದ ಅಂಜನಾಪುರ 80 ಅಡಿ ರಸ್ತೆಯ ಮೂಲಕ ನಾರಾಯಣ ನಗರ ಜೋಡಿ ರಸ್ತೆಯಿಂದ ಎ2ಬಿ ಜಂಕ್ಷನ್ ಕನಕಪುರ ರಸ್ತೆಗೆ ಸೇರಿ ಕೆ.ಎಸ್.ಐ.ಟಿ. ಜಂಕ್ಷನ್ ಹತ್ತಿರ 80 ಅಡಿ ರಸ್ತೆ ಕಡೆಗೆಬಲ ತಿರುವು ಪಡೆದು ಕೆಂಗೇರಿ ವಿಷ್ಣುವರ್ಧನ್ ರಸ್ತೆ ಮೂಲಕ ಮೈಸೂರಿನತ್ತ ಸಂಚರಿಸುವಂತೆ ನಗರ ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














Click it and Unblock the Notifications