ಕಲಬುರಗಿ ಕರ್ನಾಟಕದಲ್ಲಿರುವ ಬಿಹಾರ್: ಎಚ್ಚರವಾಗಬೇಕಿರೋದು ನಾಯಕರುಗಳಲ್ಲ, ನಮ್ಮ ಜನ: ಸಿದ್ದು ಮಠಪತಿ ಬರಹ
Kalaburagi: ಕಲಬುರಗಿ ಕರ್ನಾಟಕದಲ್ಲಿರುವ ಬಿಹಾರ್.. ಇಲ್ಲಿರುವ ಜನರು ಮುಗ್ದರಲ್ಲ... ಹವ್ಯಾಸಿ ಬರಹಗಾರ ಸಿದ್ದು ಮಠಪತಿ ಅವರ ಬರಹ ಇಲ್ಲಿದೆ.
ಯಾರಾದರೂ ಬಿಹಾರ ಹೇಗಿದೆ ಅಂತ ನೋಡಬೇಕು ಅಂದುಕೊಂಡ್ರೆ, ನಮ್ಮ ಕಲಬುರಗಿಗೆ ಬಂದು ಹೋದರೆ ಸಾಕು! ನಮ್ಮ ಕಡೆಗೊಂದು ಮಾತಿದೆ, "ಕಲಬುರಗಿ ಮಂದಿ ಬಹಳ ಮುಗ್ಧರು" ಅಂತ. ನಿಜ ಹೇಳ್ತೀನಿ ಕೇಳಿ, ನಮ್ಮ ಜನ ಮುಗ್ಧರಲ್ಲ... ಮೂರ್ಖರು! ಯಾಕೆಂದರೆ ನಮ್ಮ ಜನರನ್ನು ವ್ಯವಸ್ಥೆ, ರಾಜಕೀಯ, ಅಜ್ಞಾನ ಸೇರಿ ಮೂರ್ಖರನ್ನಾಗಿ ಮಾಡಿವೆ.

ನಾವೆಲ್ಲಾ ಕಲಬುರಗಿ ಏನೂ ಅಭಿವೃದ್ದಿ ಆಗಿಲ್ಲ, ಪಿಯುಸಿ, ಎಸ್ಸೆಸ್ಸೆಲ್ಸಿ ರಿಜಲ್ಟ್ ಲಾಸ್ಟ್ ಬಂತು ಅಂತ ಬರೀ ರಾಜಕಾರಣಿಗಳನ್ನ ಬೈಕೊಂಡು ಕೂತಿದ್ದೀವಿ. ಆದ್ರೆ ಅಸಲಿ ಸಮಸ್ಯೆ ಇರೋದು ಕೇವಲ ರಾಜಕಾರಣಿಗಳಲ್ಲ, ನಮ್ಮ ಜನರ ಮೈಂಡ್ಸೆಟ್. ರಸ್ತೆ ರಂಪಾಟ, ದರೋಡೆ, ಮರ್ಡರ್... ಇವೆಲ್ಲಾ ಇಲ್ಲಿ ಕಾಮನ್ ಆಗಿಹೋಗಿದೆ. ಇಲ್ಲಿನ ಅರ್ಧಕ್ಕರ್ಧ ನಮ್ಮ ಯುವಜನತೆ ಹೇಗಿದ್ದಾರಪ್ಪಾ ಅಂದ್ರೆ, ನಶೆಯಲ್ಲಿ ತೇಲುತ್ತಿದ್ದಾರೆ. ಇವರ ಕೈಯಲ್ಲಿ ಮೊಬೈಲ್ ಇದೆ, ತಲೆಯಲ್ಲಿ ಬರೀ ವಿಡಿಯೋ ಗೇಮ್, ರೀಲ್ಸ್, ವ್ಲಾಗ್ಸ್, ಇಲ್ಲಾಂದ್ರೆ ಕುಡಿತದ ಪಾರ್ಟಿಗಳದ್ದೇ ದರ್ಬಾರು. ಓದಿ, ಪರೀಕ್ಷೆ ಬರೆದು ಪಾಸ್ ಆಗೋ ತಾಕತ್ತಿಲ್ಲ, ಅಲ್ಲಿಯೂ ಅಕ್ರಮದ ದಾರಿಯಿಂದಲೇ ಪಾಸ್ ಆಗ್ತಾರೆ! ಇಲ್ಲೊಂದು ಸೋ ಕಾಲ್ಡ್ ಯುನಿವರ್ಸಿಟಿಯೂ ಇದೆ, ಅದರ ಕ್ಯಾಂಪಸಲ್ಲೊಂದು ಒಳ್ಳೆಯ ಹಾರರ್ ಮೂವಿ ಶೂಟ್ ಮಾಡಬಹುದು.
ಇನ್ನು ಇಲ್ಲಿ ಊರಿಗೊಬ್ಬ ಮುತ್ಯಾ ಹುಟ್ಟಿಕೊಂಡಿದ್ದಾನೆ. ಇವರ ಅಂಧಭಕ್ತಿಗೆ ಮಿತಿಯೇ ಇಲ್ಲ. ಬರೀ ಪೊಲೀಸ್ ಮಾತ್ರವಲ್ಲ, ಯಾವ ಸರ್ಕಾರಿ ಡಿಪಾರ್ಟ್ಮೆಂಟ್ಗೂ ಇಲ್ಲಿ ನೆಮ್ಮದಿಯಾಗಿ ಕೆಲಸ ಮಾಡೋಕೆ ಆಗಲ್ಲ. ಎಲ್ಲಿ ನೋಡಿದರೂ ಕುಸಿದು ಬಿದ್ದ ಇಕೋಸಿಸ್ಟಮ್, ಮೂಲಸೌಕರ್ಯದ ಕೊರತೆ ಮತ್ತು ಸಿವಿಕ್ ಸೆನ್ಸ್ ಅಂದ್ರೆ ಏನು ಅಂತ ಗೊತ್ತೇ ಇಲ್ಲದ ಜನ.
ಇದು ಕೇವಲ ನನ್ನ ಮಾತಲ್ಲ, ಅಂಕಿ-ಅಂಶಗಳು ಹೇಳುತ್ತಿರುವ ಕಠಿಣ ಸತ್ಯ. 2011ರ ಸೆನ್ಸಸ್ ಪ್ರಕಾರ ನಮ್ಮ ಕಲಬುರಗಿ ಜಿಲ್ಲೆಯ ಸಾಕ್ಷರತಾ ಪ್ರಮಾಣ ಕೇವಲ 65.65% ಇದೆ. ಆದರೆ ಇಡೀ ಕರ್ನಾಟಕದ ಸರಾಸರಿ 75.36%. ಅಂದರೆ, ನಮ್ಮ ಜಿಲ್ಲೆ ರಾಜ್ಯದ ಆವರೇಜ್ಗಿಂತ ಸುಮಾರು 10 ಪರ್ಸೆಂಟ್ ಹಿಂದೆ ಉಳಿದಿದೆ. ಇನ್ನು 2024-25ರ ಎಕನಾಮಿಕ್ ಸರ್ವೆ ನೋಡಿದ್ರೆ ನಮ್ಮ ಅಭಿವೃದ್ಧಿಯ ಅಸಲಿ ಬಣ್ಣ ಬಯಲಾಗುತ್ತೆ. ರಾಜ್ಯದ Per Capita Income - ತಲಾ ಆದಾಯ ವರ್ಷಕ್ಕೆ ₹3,39,813 ಇದ್ರೆ, ನಮ್ಮ ಕಲಬುರಗಿ ಭಾಗದ ಆದಾಯ ಕೇವಲ ₹1,73,226 ಕ್ಕೆ ಸೀಮಿತವಾಗಿದೆ. ಅದೇ ಬೆಂಗಳೂರಿನ ಆದಾಯ ₹7,38,910 ಇದೆ. ಅಂದ್ರೆ ಬೆಂಗಳೂರಿನವರ ಆದಾಯದ ನಾಲ್ಕನೇ ಒಂದು ಭಾಗವೂ ನಮ್ಮ ಭಾಗದ ಜನರ ಹತ್ತಿರ ಇಲ್ಲ!
ಇನ್ನು NITI Aayog ಡೆವಲಪ್ಮೆಂಟ್ ಇಂಡಿಕೇಟರ್ ಬಗ್ಗೆ CAG ರಿಪೋರ್ಟ್ ಏನು ಹೇಳುತ್ತೆ ಅಂದ್ರೆ, ರಾಜ್ಯದ ಆವರೇಜ್ 44.85 ಇದ್ದಾಗ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳು ಆವರೇಜ್ಗಿಂತ ಕೆಳಗಿದ್ದವು. ಇನ್ನೊಂದು ಕಹಿ ಸತ್ಯ ಅಂದ್ರೆ, ಇಡೀ ರಾಜ್ಯದ 75 low performing ತಾಲ್ಲೂಕುಗಳ ಪಟ್ಟಿಯಲ್ಲಿ 29 ತಾಲ್ಲೂಕುಗಳು ನಮ್ಮ ಕಲ್ಯಾಣ ಕರ್ನಾಟಕದಿಂದಲೇ ಇವೆ ಮತ್ತು ಕಲಬುರಗಿಯ ಎಲ್ಲಾ ತಾಲ್ಲೂಕುಗಳು ಸ್ಟೇಟ್ ಆವರೇಜ್ಗಿಂತ ಕೆಳಗೇ ಇವೆ.
ನಂಜುಂಡಪ್ಪ ವರದಿಯ ಪ್ರಕಾರ 2020ರಲ್ಲೂ ರಾಜ್ಯದ 38 Most Backward ತಾಲ್ಲೂಕುಗಳಲ್ಲಿ 21 ತಾಲ್ಲೂಕುಗಳು ನಮ್ಮ ಕಲ್ಯಾಣ ಕರ್ನಾಟಕದ್ದೇ ಆಗಿವೆ. ಇದನ್ನೆಲ್ಲಾ ನೋಡಿದ ಮೇಲೆ ಅರ್ಥ ಆಗೋದು ಇಷ್ಟೇ. ಇದು ಕೇವಲ ಒಂದೆರಡು ಗುಂಡಿ ಬಿದ್ದ ರಸ್ತೆಗಳ ಸಮಸ್ಯೆಯಲ್ಲ. ಇದು ಶಿಕ್ಷಣ, ಆದಾಯ, ಆರೋಗ್ಯ, ಇನ್ಫ್ರಾಸ್ಟ್ರಕ್ಚರ್ ಮತ್ತು ಸಿವಿಕ್ ಸೆನ್ಸ್ ಎಲ್ಲವೂ ಒಟ್ಟಿಗೆ ಕುಸಿದಿರುವ Systemic failure. ಇಷ್ಟೆಲ್ಲಾ ಸತ್ಯ ಕಣ್ಣೆದುರಿಗೆ ಇದ್ರೂ ನಾವು "ನಮ್ಮೂರೇ ಗ್ರೇಟ್" ಅನ್ನೋ ಫೇಕ್ ಪ್ರೈಡ್ ಇಟ್ಕೊಂಡ್ರೆ ಅದಕ್ಕಿಂತ ದೊಡ್ಡ ಮೂರ್ಖತನ ಇನ್ನೊಂದಿಲ್ಲ.
ಕಲಬುರಗಿಯಿಂದ ಬಂದು ಸಾಧನೆ ಮಾಡಿದವರ ದೊಡ್ಡ ಲಿಸ್ಟ್ ಇದೆ. ಆದ್ರೆ ಒಂದು ಸತ್ಯ ತಿಳಿದುಕೊಳ್ಳಿ. ಅವರು ಸಾಧನೆ ಮಾಡಿದ್ದೇ ಆ ಊರು ಬಿಟ್ಟು ಹೊರಬಂದಿದ್ದಕ್ಕೆ! ಆ ಕೊಳೆತ ವಾತಾವರಣದಲ್ಲಿ ಇದ್ದುಕೊಂಡು ಯಾರೂ ಉದ್ದಾರ ಆಗೋಕೆ ಸಾಧ್ಯವೇ ಇಲ್ಲ. ಯಾರು ಊರು ಬಿಟ್ಟರೋ ಅವರು ಬದುಕ್ಕೊಂಡ್ರು. ಊರಲ್ಲೇ ಉಳಿದ ಒಂದಿಷ್ಟು ಜನ ಚೆನ್ನಾಗಿದ್ದಾರೆ ಅಂದ್ರೆ ಅದಕ್ಕೆ ಅವರ ಕುಟುಂಬದ ಸಂಸ್ಕಾರ ಕಾರಣವೇ ಹೊರತು ಊರಿನ ವಾತಾವರಣವಲ್ಲ. ಆದರೆ ಉಳಿದವರ ಕಥೆ ಏನು?
ಒಂದು ಕಾಲದಲ್ಲಿ ಇದು ಶರಣರ ನಾಡು, ಸೂಫಿ ಸಂತರ ನಾಡು. ರಾಷ್ಟ್ರಕೂಟರು, ಬಹುಮನಿ ಸುಲ್ತಾನರು ಆಳಿದ ಭವ್ಯ ಇತಿಹಾಸವಿರುವ ಮಣ್ಣು. ಆದ್ರೆ ಇವತ್ತು ಆ ಇತಿಹಾಸವನ್ನೆಲ್ಲಾ ಮರೆತು ಫೇಕ್ ಪ್ರೈಡ್ ಹೊತ್ತು ತಿರುಗುತ್ತಿದ್ದಾರೆ ನಮ್ಮ ಜನ. ಹೆಮ್ಮೆ ಪಡೋಕೆ ಅಲ್ಲಿ ಏನಿದೆ ಅಂತ ಅವರನ್ನೇ ಕೇಳಬೇಕು! ಕೆಲವೊಮ್ಮೆ ಯಾರಾದರೂ ನಿಮ್ಮ ನೇಟಿವ್ ಯಾವ್ದು ಅಂತ ಕೇಳಿದರೆ ಕಲಬುರಗಿ ಅಂತ ಹೇಳಿಕೊಳ್ಳಲೂ ಹಿಂಜರಿಕೆಯಾಗುತ್ತದೆ.
ನನಗೆ ಇವತ್ತಿನ ಈ ಜನರ ಬಗ್ಗೆ, ಅಲ್ಲಿನ ಯುವಕರ ಬಗ್ಗೆ ಯಾವ ಕಾಳಜಿನೂ ಇಲ್ಲ, ಅವರಿಂದ ಏನೋ ಬದಲಾವಣೆ ಆಗುತ್ತೆ ಅನ್ನೋ ಭರವಸೆನೂ ನನಗಿಲ್ಲ. ಆದ್ರೆ, ಈ ಊರಿನ ಮುಂದಿನ ಜನರೇಷನ್ ಗತಿ ಏನು ಅನ್ನೋದೇ ನನ್ನ ಆತಂಕ, ಅವರು ಒಂದು ಸುಂದರವಾದ ಬದುಕಿನ ಕನಸನ್ನೂ ಕಾಣದಷ್ಟು ವಾತಾವರಣ ಹದಗೆಟ್ಟಿದೆ. ಕಣ್ಣೆದುರೇ ಒಂದು ಇತಿಹಾಸದ ನಾಡು ಸ್ಮಶಾನ ಆಗ್ತಿದೆ. ಎಚ್ಚರವಾಗಬೇಕಿರೋದು ನಾಯಕರುಗಳಲ್ಲ, ನಮ್ಮ ಜನ!
ಬರಹ: ಸಿದ್ದು ಮಠಪತಿ, ಕಲಬುರಗಿಯವರು.













Click it and Unblock the Notifications