Namma Metro: ನಾಳೆ ಭಾನುವಾರ ಬೆಳಗ್ಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ವ್ಯತ್ಯಯ, ಎಲ್ಲೆಲ್ಲಿ?
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಇತ್ತೀಚೆಗೆ ವಿದ್ಯುತ್ ಕಡಿತಗೊಂಡು ನಾಲ್ಕು ಗಂಟೆ ಸೇವೆ ಸ್ಥಗಿತಗೊಂಡಿತ್ತು. ಇದೀಗ ನಾಳೆ ಭಾನುವಾರ (ಮೇ 10) ನೇರಳೆ ಮಾರ್ಗದಲ್ಲಿನ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ- ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತಗೊಳ್ಳಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಮೇ 10ರಂದು ನೇರಳೆ ಮಾರ್ಗದ ನಾಲ್ಕು ನಿಲ್ದಾಣಗಳ ಮಧ್ಯೆ ನಿರ್ವಹಣಾ ಕೆಲಸ ಕೈಗೊಳ್ಳಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ಮತ್ತು ಸರ್.ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣ, ಸೆಂಟ್ರಲ್ ಕಾಲೇಜ್ ನಡುವಿನ ಮಾರ್ಗದಲ್ಲಿ ಸದರಿ ತುರ್ತು ನಿರ್ವಹಣಾ ಕೆಲಸ ನಡೆಯುವ ಪ್ರಯುಕ್ತ ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ಮಧ್ಯೆ ಮೆಟ್ರೋ ಸಂಚಾರ ಸುಮಾರು ಎರಡು ಗಂಟೆ ವ್ಯತ್ಯಯಗೊಳ್ಳಲಿದೆ.

ಭಾನುವಾರ ಬೆಳಗ್ಗೆ ಬೆಳಗ್ಗೆ 7 ಗಂಟೆಯಿಂದ 09 ಗಂಟೆಯವರೆಗೆ ಸಂಚರಿಸುವ ಪ್ರಯಾಣಿಕರು ಈ ಅಡಚಣೆ ಗಮನದಲ್ಲಿಟ್ಟುಕೊಂಡು ಪ್ಲ್ಯಾನ್ ಮಾಡಬೇಕಿದೆ. ಇದೇ ಅವರಧಿಯಲ್ಲಿ ಮೆಟ್ರೋ ರೈಲು ಸೇವೆಗಳು ಸಂಬಂಧಿತ ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 7 ಗಂಟೆಗೆ (ಭಾನುವಾರದ ನಿಗದಿತ ಸಮಯಕ್ಕೆ) ನಿಯಮಿತ ವೇಳಾಪಟ್ಟಿಯಂತೆ ಸೇವೆ ಆರಂಭಿಸಲಿವೆ.
ಅಂದರೆ ಇದೇ ನೇರಳೆ ಮಾರ್ಗದ ಚಲ್ಲಘಟ್ಟ - ವಿಜಯನಗರ, ಎಂ.ಜಿ. ರಸ್ತೆಯಿಂದ ವೈಟ್ಫೀಲ್ಡ್ (ಕಾಡುಗೋಡಿ), ಹಸಿರು ಮಾರ್ಗದ ಮಾದಾವರ - ಸಿಲ್ಕ್ ಇನ್ಸ್ಟಿಟ್ಯೂಟ್ ಮತ್ತು ಆರ್.ವಿ. ರಸ್ತೆ - ಬೊಮ್ಮಸಂದ್ರ (ಹಳದಿ ಮಾರ್ಗ) ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಮಗದ (ಬಿಎಂಆರ್ಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ.
ನೇರಳೆ ಮಾರ್ಗದಲ್ಲಿ ಎಂದಿನಂತೆ ಸಂಚಾರ ಯಾವಾಗ?
ಇನ್ನೂ ಬೆಳಗ್ಗೆ 9 ಗಂಟೆಯ ನಂತರ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ - ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವೆ ಹಾಗೂ ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ಪುನಃ ಆರಂಭಿಸಲಾಗುತ್ತದೆ. ಇದರ ಹೊರತು ನಮ್ಮ ಮೆಟ್ರೋ ಸಮಯ, ನಿಲ್ದಾಣ, ಸಂಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಆಗದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.













Click it and Unblock the Notifications