ಫಲಿತಾಂಶದ ಬಳಿಕ ಪ್ರಧಾನಿ ಹುದ್ದೆ ನಿರ್ಧಾರ: ರಾಹುಲ್ ಗಾಂಧಿ
ನವದೆಹಲಿ, ಮೇ 17: ಲೋಕಸಭೆ ಚುನಾವಣೆಯ ಫಲಿತಾಂಶ ಮೇ 23ರಂದು ಹೊರಬಿದ್ದ ಬಳಿಕ ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರದ ಪ್ರಧಾನಿ ಹುದ್ದೆಗೆ ಯಾರು ಏರಬೇಕು ಎಂಬುದನ್ನು ನಿರ್ಧರಿಸಲಿರುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 'ಜನರು ಮೇ 23ರಂದು ತಮ್ಮ ತೀರ್ಪು ನೀಡಲಿದ್ದಾರೆ. ಈ ನಿರ್ಧಾರವು ಹೊರಬೀಳುವ ಮೊದಲೇ ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಭಾರತೀಯರ ತೀರ್ಪನ್ನು ಮೊದಲೇ ಊಹಿಸಲು ನಾನು ಬಯಸುವುದಿಲ್ಲ. ಜನರು ಏನು ನಿರ್ಧರಿಸಿದ್ದಾರೆ ಎಂಬುದರ ಆಧಾರದಲ್ಲಿ ನಾವು ನಿರ್ಣಯ ಕೈಗೊಳ್ಳುತ್ತೇವೆ' ಎಂದು 'ಪ್ರಧಾನಿ ಹುದ್ದೆಗಾಗಿ ಕಾಂಗ್ರೆಸ್ ರಾಜಿ ಮಾಡಿಕೊಳ್ಳಲಿದೆಯೇ' ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಪ್ರಧಾನಿ ಹುದ್ದೆ ಕಾಂಗ್ರೆಸ್ ಗೆ ಬೇಕಿಲ್ಲ: ಯೂಟರ್ನ್ ಹೊಡೆದ ಗುಲಾಂ
ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯುವುದಷ್ಟೇ ತಮ್ಮ ಗುರಿ. ಹೀಗಾಗಿ ಪ್ರಧಾನಿ ಹುದ್ದೆ ಕಾಂಗ್ರೆಸ್ಗೆ ದೊರಕದೆ ಇದ್ದರೂ ತಮ್ಮ ಪಕ್ಷಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹೇಳಿಕೆ ನೀಡಿದ್ದರು. ಇದು ಕಾಂಗ್ರೆಸ್ಗೆ ತೀವ್ರ ಮುಜುಗರ ಉಂಟುಮಾಡಿತ್ತು.
ಬಳಿಕ ಅದಕ್ಕೆ ಸ್ಪಷ್ಟೀಕರಣ ನೀಡಿದ್ದ ಗುಲಾಂ ನಬಿ ಆಜಾದ್, 'ಕಾಂಗ್ರೆಸ್ ಗೆ ಪ್ರಧಾನಿ ಪಟ್ಟ ಬೇಕಿಲ್ಲ ಎಂಬ ಹೇಳಿಕೆ ಸತ್ಯವಲ್ಲ. ನಾವು ಈ ದೇಶದ ಅತ್ಯಂತ ದೊಡ್ಡ ಮತ್ತು ಹಳೆಯ ಪಕ್ಷವಾಗಿ ನಮಗೆ ಐದು ವರ್ಷಗಳ ಕಾಲ ಸರ್ಕಾರವನ್ನು ನಡೆಸುವ ಅವಕಾಶ ಸಿಕ್ಕರೆ ಖಂಡಿತ ಬೇಡ ಎನ್ನುವುದಿಲ್ಲ' ಎಂದು ಅದಕ್ಕೆ ತೇಪೆ ಹಚ್ಚಲು ಪ್ರಯತ್ನಿಸಿದ್ದರು.