ಉದ್ವಿಗ್ನತೆ ಶಮನಗೊಳಿಸಿ: ಮೋದಿ, ಇಮ್ರಾನ್ಗೆ ಟ್ರಂಪ್ ಕರೆ
Recommended Video
ನವದೆಹಲಿ, ಆಗಸ್ಟ್ 20: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ನಿರ್ಧಾರವನ್ನು ಪ್ರಕಟಿಸುತ್ತಿದ್ದಂತೆಯೇ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಭುಗಿಲೆದ್ದಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸೋಮವಾರ ಮನವಿ ಮಾಡಿದ್ದಾರೆ.
ಉಭಯ ದೇಶಗಳ ನಾಯಕರಿಗೆ ಕರೆ ಮಾಡಿದ ಡೊನಾಲ್ಡ್ ಟ್ರಂಪ್ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗದಂತೆ ತಡೆಯಲು ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ ಎಂದು 'ದಿ ವೈರ್' ಪತ್ರಿಕೆ ವರದಿ ಮಾಡಿದೆ.
ಟ್ರಂಪ್ ಅವರು ಇದಕ್ಕೂ ಮೊದಲು ಆಗಸ್ಟ್ 16ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಗೋಪ್ಯ ಸಭೆ ನಡೆಯುವ ಮುನ್ನ ಇಮ್ರಾನ್ ಖಾನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಂಡಳಿಯಲ್ಲಿ ಭಾರತ-ಪಾಕಿಸ್ತಾನದ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ನಡೆಸಲಾಗಿದೆ.
ಶ್ವೇತಭವನದ ಮೂಲಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಮಾತನಾಡಿದರು, ಬಳಿಕ ಇಮ್ರಾನ್ ಖಾನ್ ಅವರಿಗೆ ಕರೆ ಮಾಡಿದರು.
ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತವು ತಮ್ಮ ಮಧ್ಯಸ್ಥಿಕೆ ಕೋರಿದ್ದಾರೆ ಎಂದು ಟ್ರಂಪ್ ಅವರು ಕೆಲವು ದಿನಗಳ ಹಿಂದೆ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು. ಅದರ ಬಳಿಕ ಇದೇ ಮೊದಲ ಬಾರಿಗೆ ಟ್ರಂಪ್ ಮತ್ತು ಮೋದಿ ಮಾತುಕತೆ ನಡೆಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಮೋದಿ ದೂರು
'ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ಭವಿಸಿರುವ ಉದ್ವಿಗ್ನತೆಯನ್ನು ನಿವಾರಿಸುವ ಮಹತ್ವದ ಕುರಿತು ಮತ್ತು ಪ್ರದೇಶದಲ್ಲಿ ಶಾಂತಿ ಕಾಪಾಡುವಂತೆ ಅಧ್ಯಕ್ಷರು ಮನವರಿಕೆ ಮಾಡಿದರು' ಎಂದು ವಾಷಿಂಗ್ಟನ್ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.
ಮೋದಿ ಮತ್ತು ಟ್ರಂಪ್ ಅವರು ಸುಮಾರು ಅರ್ಧ ಗಂಟೆ ಈ ವಿಚಾರದ ಕುರಿತು ಮಾತನಾಡಿದ್ದು, ಪಾಕಿಸ್ತಾನವು ಉದ್ವಿಗ್ನತೆ ಕೆರಳಿಸುವಂತಹ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ಬಗ್ಗೆ ಮೋದಿ ದೂರಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.

ಶಾಂತಿ ಮೂಡಿಸಲು ಅವಕಾಶ ನೀಡುತ್ತಿಲ್ಲ
'ಭಾರತ ವಿರೋಧಿ ಹಿಂಸಾತ್ಮಕ ಚಟುವಟಿಕೆಗಳನ್ನು ಅತಿಯಾಗಿ ಪ್ರಚೋದಿಸುವ ಮತ್ತು ಕೆರಳಿಸುವ ಇಂತಹ ನಾಯಕರು ಪ್ರದೇಶದಲ್ಲಿ ಶಾಂತಿ ಮೂಡಿಸಲು ಅವಕಾಶ ನೀಡುತ್ತಿಲ್ಲ' ಎಂದು ಮೋದಿ ಅವರು ವಿವರಿಸಿದ್ದಾರೆ.
ಭಯೋತ್ಪಾದನೆ ಮತ್ತು ಹಿಂಸೆಯಿಂದ ಮುಕ್ತ ವಾತಾವರಣ ಸೃಷ್ಟಿಸುವುದು ಯಾವುದೇ ವಿನಾಯಿತಿ ನೀಡದೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ತಗ್ಗಿಸುವುದರ ಪ್ರಾಮುಖ್ಯವನ್ನು ಮನದಟ್ಟು ಮಾಡಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಪಾಕಿಸ್ತಾನಕ್ಕೆ ಸಲಹೆ ನೀಡಿದ ಟ್ರಂಪ್
ಮೋದಿ ಅವರೊಂದಿಗೆ ಮಾತನಾಡಿದ ವಿಚಾರಗಳನ್ನೇ ಇಮ್ರಾನ್ ಖಾನ್ ಜತೆಗೂ ಟ್ರಂಪ್ ಹಂಚಿಕೊಂಡರು. ಜತೆಗೆ ತಮ್ಮ ಮಾತಿನ ಮೇಲೆ ನಿಯಂತ್ರಣ ಹೇರುವಂತೆ ಸಲಹೆ ನೀಡಿದರು ಎಂದು ಶ್ವೇತಭವನ ತಿಳಿಸಿದೆ. ಉದ್ವಿಗ್ನತೆಯನ್ನು ಕಡಿಮೆ ಮಾಡಬೇಕು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಸೌಹಾರ್ದವಾಗಿ ಮಾತುಕತೆ ನಡೆಸಬೇಕು ಎಂದು ತಿಳಿಸಿದರು. ಕಾಶ್ಮೀರದಲ್ಲಿ ಸಾವಿರಾರು ರಾಜಕಾರಣಿಗಳನ್ನು ಬಂಧಿಸಿಡಲಾಗಿದೆ ಮತ್ತು ಇನ್ನೂ ಕರ್ಫ್ಯೂ ಹೇರಲಾಗಿದೆ ಎಂದು ಟ್ರಂಪ್ಗೆ ಇಮ್ರಾನ್ ಖಾನ್ ತಿಳಿಸಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹೇಳಿದ್ದಾರೆ.

ನಾಜಿಗೆ ಹೋಲಿಸಿದ್ದ ಇಮ್ರಾನ್
ಆಗಸ್ಟ್ 11ರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಆಡಳಿತ ಪಕ್ಷ ಬಿಜೆಪಿ ಮತ್ತು ಆರೆಸ್ಸೆಸ್ಅನ್ನು ಜರ್ಮನಿಯ ನಾಜಿ ಪಂಥಕ್ಕೆ ಹೋಲಿಸುತ್ತಿದ್ದಾರೆ. ಭಾರತದಲ್ಲಿರುವ ಅಣ್ವಸ್ತ್ರಗಳು 'ಧರ್ಮಾಂಧ, ಮತಾಂಧ ಹಿಂದೂ ದಬ್ಬಾಳಿಕೆಯ ಮೋದಿ ಸರ್ಕಾರದ ಕೈಯಲ್ಲಿ ಸುರಕ್ಷಿತವಲ್ಲ' ಎಂದು ಭಾನುವಾರ ಟ್ವೀಟ್ ಮಾಡಿದ್ದರು.












Click it and Unblock the Notifications