ಲಡಾಖ್ ಘರ್ಷಣೆ: ಚೀನಾ ಸೈನಿಕರ ಸಾವಿನ ರಹಸ್ಯ ಬಿಚ್ಚಿಟ್ಟ US ಗುಪ್ತಚರ ವರದಿ
ದೆಹಲಿ, ಜೂನ್ 23: ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಭಾರತ ಮತ್ತು ಚೀನಾ ಸೈನಿಕರ ಹಿಂಸಾತ್ಮಕ ಮುಖಾಮುಖಿಯಲ್ಲಿ ಭಾರತದ ಪರ 20 ಯೋಧರು ಸಾವನ್ನಪ್ಪಿದ್ದರು ಎಂದು ಸೇನೆ ಅಧಿಕೃತ ಮಾಹಿತಿ ನೀಡಿದೆ. ಆದರೆ, ಚೀನಾ ತನ್ನ ಸೇನೆಯಲ್ಲಿ ಉಂಟಾದ ಸಾವುನೋವಿನ ಬಗ್ಗೆ ನಿಖರ ಮಾಹಿತಿ ಹಂಚಿಕೊಂಡಿಲ್ಲ.
ಭಾರತಕ್ಕೆ ಸಿಕ್ಕ ಮಾಹಿತಿ ಪ್ರಕಾರ ಸುಮಾರು 40 ಜನ ಚೈನೀಸ್ ಯೋಧರು ಈ ಘರ್ಷಣೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಚೀನಾ-ಭಾರತ ಘರ್ಷಣೆಯ ಬಗ್ಗೆ ಮಾಹಿತಿ ಕಲೆ ಹಾಕಿದ ಯುಎಸ್ ಗುಪ್ತಚರ ಚೀನಾದಲ್ಲಿ 35 ಮಂದಿ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ನೀಡಿತ್ತು.
ಘಟನೆ ನಡೆದ ಸುಮಾರು 8 ದಿನದ ಬಳಿಕ ಯುಎಸ್ ಗುಪ್ತಚರ ತಂಡ ಚೀನಾ ಸೈನಿಕರ ಸಾವಿನ ರಹಸ್ಯ ಬಯಲು ಮಾಡುವ ಪ್ರಯತ್ನ ಮಾಡಿದೆ. ಮುಂದೆ ಓದಿ...

20ಕ್ಕಿಂತ ಕಡಿಮೆ ಸೈನಿಕರು ಸಾವು
ಲಡಾಖ್ನಲ್ಲಿ ಭಾರತದ ಜೊತೆ ನಡೆದ ಘರ್ಷಣೆಯಲ್ಲಿ ಚೀನಾದ 20ಕ್ಕಿಂತ ಕಡಿಮೆ ಸೈನಿಕರು ಪ್ರಾಣಕಳೆದುಕೊಂಡಿದ್ದಾರೆ ಎಂದು ಚೀನಾದ ಪ್ರಮುಖ ಸುದ್ದಿ ಪತ್ರಿಕೆ 'ಗ್ಲೋಬಲ್ ಟೈಮ್ಸ್' ಸೋಮವಾರ ಒಪ್ಪಿಕೊಂಡಿದೆ ಎಂದು ಯುಎಸ್ ಗುಪ್ತಚರ ವರದಿ ಬಹಿರಂಗಪಡಿಸಿದೆ.

ಅಂಕಿ ಅಂಶ ಮುಚ್ಚಿಟ್ಟಿದ್ದು ಏಕೆ?
ಚೀನಾ ಸೇನೆಯಲ್ಲಿ ಪ್ರಾಣಹಾನಿಯಾದ ಬಗ್ಗೆ ನಿಖರವಾದ ಮಾಹಿತಿ ನೀಡಲು ಚೀನಾ ಸರ್ಕಾರ ಏಕೆ ಹಿಂದೇಟು ಹಾಕಿದೆ ಎಂಬ ವಿಚಾರವೂ ಹೊರಬಿದ್ದಿದೆ. ಚೀನಾ ತಜ್ಞರು ಹೇಳುವ ಪ್ರಕಾರ, ಈ ಘರ್ಷಣೆಯಲ್ಲಿ 20ಕ್ಕಿಂತ ಕಡಿಮೆ ಚೀನಾ ಸೈನಿಕರು ಸತ್ತಿದ್ದಾರೆ ಎಂದು ತಿಳಿದರೆ ಭಾರತ ಸರ್ಕಾರ ಒತ್ತಡಕ್ಕೆ ಒಳಗಾಗಬಹುದು. ಆದ್ದರಿಂದ ಪರಿಸ್ಥಿತಿ ಇನ್ನಷ್ಟು ಉಲ್ಬಣವಾಗುವ ಸಾಧ್ಯತೆ ಇತ್ತು. ಹಾಗಾಗಿ, ಗಡಿಯಲ್ಲಿನ ಈ ಉಲ್ಬಣವನ್ನು ತಪ್ಪಿಸಲು ಚೀನಾ ಸಂಖ್ಯೆಯನ್ನು ಗೌಪ್ಯವಾಗಿಟ್ಟಿದೆ ಎಂದು ಹೇಳಲಾಗಿದೆ.

ಸುದ್ದಿ ಸುಳ್ಳು ಎಂದ ಚೀನಾ ವಿದೇಶಾಂಗ ಕಚೇರಿ
ಲಡಾಖ್ ಘರ್ಷಣೆಯಲ್ಲಿ ಚೀನಾದ 40 ಸೈನಿಕರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ಚೀನಾ ವಿದೇಶಾಂಗ ಸಚಿವ ಹೇಳಿದ್ದಾರೆ. "ನೀವು ಮಾಧ್ಯಮದಲ್ಲಿ ನೋಡಿದಂತೆ, ಚೀನಾದ ಕಡೆ 40 ಸೈನಿಕರು ಸಾವುನೋವು ಅನುಭವಿಸಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ, ಇದು ನಕಲಿ ಸುದ್ದಿ ಎಂದು ನಾನು ನಿಮಗೆ ಖಚಿತವಾಗಿ ಹೇಳಬಲ್ಲೆ'' ಎಂದು ವಿದೇಶಾಂಗ ಇಲಾಖೆಯ ವಕ್ತಾರ ಜಹೋ ಲಿಜಿಯಾನ್ ಹೇಳಿದ್ದಾರೆ.

ಶಾಂತಿಯುತ ಪರಿಹಾರ ಸಾಧ್ಯತೆ
ಘಟನೆ ನಡೆದ ಕ್ಷಣದಿಂದ ಉಭಯ ರಾಷ್ಟ್ರಗಳ ನಡುವೆ ಸತತ ಸಭೆಗಳು, ಚರ್ಚೆಗಳು ನಡೆಯುತ್ತಲೆ ಇದೆ. ಜೂನ್ 22 ರಂದು ಎರಡೂ ದೇಶಗಳ ಕಮಾಂಡರ್ಗಳ ನಡುವೆ ಸುಮಾರು 11 ಗಂಟೆಗಳು ಕಾಲ ಮಾತುಕತೆ ನಡೆಯಿತು. ಈ ಸುದೀರ್ಘ ಚರ್ಚೆಯ ಬಳಿಕ ಗಡಿಯಲ್ಲಿ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಹೊರಬರಲು ಎರಡೂ ಸೇನೆಗಳು ಒಮ್ಮತಕ್ಕೆ ಬಂದಿದೆ ಎಂದು ಹೇಳಲಾಗಿದೆ. ಇದು ಅಧಿಕೃತವಾಗಬೇಕಿದೆ.












Click it and Unblock the Notifications