ನಕಲಿ ಟಿಆರ್ ಪಿ ಹಗರಣ: ತನಿಖೆಗೆ ಹಾಜರಾಗದ ರಿಪಬ್ಲಿಕ್ ನೆಟವರ್ಕ್ ಸಿಎಫ್ಓ
ನವದೆಹಲಿ, ಅಕ್ಟೋಬರ್.10: ನಕಲಿ ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದರೂ ಸಹ ರಿಪಬ್ಲಿಕ್ ನೆಟವರ್ಕ್ ನ ಮುಖ್ಯ ಹಣಕಾಸು ಅಧಿಕಾರಿಯು ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಚಾನೆಲ್ ವತಿಯಿಂದ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದೆ.
ರಿಪಬ್ಲಿಕ್ ಸುದ್ದಿ ವಾಹಿನಿಯು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿದ್ದು, ಅಲ್ಲಿವರೆಗೂ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳದಂತೆ ಸಂಸ್ಛೆಯ ಮುಖ್ಯ ಹಣಕಾಸು ಅಧಿಕಾರಿ ಶಿವ ಸುಬ್ರಮಣಿಯಮ್ ಸುಂದರಂ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
"ರಿಪಬ್ಲಿಕ್ ನೆಟವರ್ಕ್ ಮುಖ್ಯ ಹಣಕಾಸು ಅಧಿಕಾರಿ ಶಿವ ಸುಬ್ರಮಣಿಯಮ್ ಸುಂದರಂ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗುವುದಿಲ್ಲ. ಚಾನೆಲ್ ನಿಂದ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿದ್ದು, ಮುಂದಿನ ವಾರ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಅಕ್ಟೋಬರ್.09ರಂದು ಸಮನ್ಸ್ ಜಾರಿ:
ಕಳೆದ ಅಕ್ಟೋಬರ್.09ರ ಶುಕ್ರವಾರ ರಿಪಬ್ಲಿಕ್ ನೆಟವರ್ಕ್ ಮುಖ್ಯ ಹಣಕಾಸು ಅಧಿಕಾರಿ ಶಿವ ಸುಬ್ರಮಣಿಯಮ್ ಸುಂದರಂ ಅವರಿಗೆ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದರು. ನಕಲಿ ಟಿಆರ್ ಪಿ ಹಗರಣದ ತನಿಖೆಯನ್ನು ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದು, ಇದರ ಜೊತೆಗೆ ಮುಂಬೈ ಪೊಲೀಸರು, ಆರ್ಥಿಕ ಅಪರಾಧಗಳ ತಂಡವು ವಿಚಾರಣೆ ನಡೆಸಲಿದೆ.
ಮುಂಬೈನಲ್ಲಿ ಸ್ಥಾಪಿಸಿರುವ 2 ಸಾವಿರ ಟಿಆರ್ ಪಿ ನಿಯಂತ್ರಕ ಯಂತ್ರಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆರೋಪದ ಮೇಲೆ ಈ ದೂರು ನೀಡಲಾಗಿದೆ.
ಹಂಸ್ ಏಜೆನ್ಸಿಯು ಬಾರ್ಕ್ ನೀಡುವಂತಹ ಟಿಆರ್ಪಿ ಮೇಲೆ ಸಂಶಯವನ್ನು ವ್ಯಕ್ತಪಡಿಸಿ ದೂರನ್ನು ದಾಖಲಿಸಿತ್ತು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮರಾಠಿ ಎರಡು ವಾಹಿನಿಗಳ ಮುಖ್ಯಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications